ಅಪ್ಪ ಮಾಡಿದ್ದ ಪ್ರಸಾದವೇ ಮಗಳ ಬಾಳಿನ ಕೊನೆಯ ತುತ್ತಾಯ್ತು..!
ಚಾಮರಾಜನಗರ ಜಿಲ್ಲೆಯ ಸುಲ್ವಾಡಿ ಗ್ರಾಮದಲ್ಲಿ ಕಂಡು ಕೇಳರಿಯದ ದುರಂತ ನಡೆದಿದೆ. ಗ್ರಾಮದ ಕಿಚ್ಚುಗತ್ತಿ ಮಾರಮ್ಮನ ದೇವರ ಪ್ರಸಾದ ಬರೊಬ್ಬರಿ 11 ಅಮಾಯಕ ಜನರನ್ನು ಬಲಿ ಪಡೆದಿದೆ. ಇನ್ನು ದುರಂತ ಅಂದ್ರೆ ಅಪ್ಪ ಮಾಡಿದ್ದ ಪ್ರಸಾದವೇ ಮಗಳ ಬಾಳಿನ ಕೊನೆಯ ತುತ್ತಾಗಿದೆ.
ಚಾಮರಾಜನಗರ, [ಡಿ.15]: ಇದೆಂಥಾ ದುರ್ವಿಧಿ ನೋಡಿ. ಚಾಮರಾಜನಗರ ಸುಲ್ವಾಡಿ ಗ್ರಾಮದ ಕಿಚ್ಚುಗತ್ತಿ ಮಾರಮ್ಮನ ದೇವಾಲಯದಲ್ಲಿ ಪ್ರಸಾದ ತಯಾರಿಸುವ ಮೂವರು ಬಾಣಸಿಗರ ಪೈಕಿ ಪುಟ್ಟಸ್ವಾಮಿಯೂ ಒಬ್ಬರು. ಅವರು ತಯಾರಿಸಿದ ಪ್ರಸಾದ ಅವರ ಮಗಳ ಜೀವವನ್ನೇ ಕಸಿದು ಕೊಂಡಿರುವುದು ದುರಂತವೇ ಸರಿ.
ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಣಸಿಗ ಸುಳ್ವಾಡಿಯ ಪುಟ್ಟಸ್ವಾಮಿ ಪುತ್ರಿ ಅನಿತಾ, ದೇವಾಲಯದ ಪೂಜೆ ಬಂದಿದ್ದಳು. ಎಲ್ಲ ಭಕ್ತರಂತೆ, ತಾನೂ ಸಹ ತಂದೆ ಪುಟ್ಟಸ್ವಾಮಿ ಮಾಡಿದ್ದ ಪ್ರಸಾದ ಟಮೋಟೋ ಬಾತ್ ಸೇವಿಸಿದ್ದಳು.
ಮಾರಮ್ಮನ ಪ್ರಸಾದಕ್ಕೆ 10 ಮಂದಿ ಬಲಿ: ವಿಷವಿಕ್ಕಿದ ಇಬ್ಬರ ಬಂಧನ
ತೀವ್ರ ಅಸ್ವಸ್ಥಗೊಂಡ ಅನಿತಅಳನ್ನು ಮೊದಲು ಚಾಮರಾಜನಗರ, ಬಳಿಕ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಾಗಿತ್ತು. ಆದ್ರೆ, ಆಕೆಯ ಬಾಳಲ್ಲಿ ವಿಧಿ ಬೇರೆಯದ್ದೇ ಬರೆದಿದ್ದ. ಅಪ್ಪನೇ ತಯಾರಿಸಿದ ಮಾರಮ್ಮನ ಪ್ರಸಾದ ಆಕೆಯ ಬಾಳಿನ ಕೊನೆಯ ತುತ್ತಾಯಿತು.
ಇನ್ನು, ಮಾರಮ್ಮನ ಸನ್ನಿಧಿಯಲ್ಲಿ ಪ್ರಸಾದ ತಯಾರಿಸಿದ್ದ ಪುಟ್ಟಸ್ವಾಮಿಯೂ ಭಕ್ತರ ಜತೆಗೂಡಿ ಟಮೋಟೊ ಬಾತ್ ಸೇವಿಸಿದ್ದರು. ಮಗಳು ಅನಿತಾ ಅಸ್ವಸ್ಥಳಾಗುತ್ತಿದ್ದಂತೆ, ಪುಟ್ಟಸ್ವಾಮಿಯೂ ಅಸ್ವಸ್ಥಗೊಂಡಿದ್ದರು.
ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತಮಿಳುನಾಡಿಗೆ ಲಿಂಕ್?
ಕೂಡಲೇ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಿ, ದೇಹದಲ್ಲಿನ ವಿಷ ತೆಗೆಯಲು ಅಲ್ಟ್ರಾಪಿನ್ ಇಂಜೆಕ್ಷನ್ ನೀಡಲಾಗಿದೆ. ಔಷಧದ ಅಮಲಿನಿಂದ ಪುಟ್ಟಸ್ವಾಮಿ ಏನೇನೋ ಬಡಬಡಿಸುತ್ತಿದ್ದಾನೆ. ಮಗಳ ಸಾವಿನ ಬಗ್ಗೆಯೂ ಆತನಿಗೆ ಮಾಹಿತಿ ಇಲ್ಲ.
ಅತ್ತ, ಸುಳ್ವಾಡಿಯಲ್ಲಿ ಅಸ್ವಸ್ಥ ಮಗ ಪುಟ್ಟಸ್ವಾಮಿ ಮತ್ತು ಮೊಮ್ಮಗಳು ಅನಿತಾಳನ್ನ ಕಳೆದುಕೊಂಡ ಅಜ್ಜಿಯ ಆಕ್ರಂದನ ಮುಗಿಲುಮುಟ್ಟಿದೆ.