Asianet Suvarna News Asianet Suvarna News

ಪುತ್ತೂರು: ಪೊಲೀಸ್‌ ದೌರ್ಜನ್ಯ ಪ್ರಕರಣ, ಗಂಭೀರ ಗಾಯಗೊಂಡವನ ಕಿವಿ ತಮಟೆಗೆ ಹಾನಿ?

ಯುವಕನ ಕಿವಿಯದ್ದು ಎಂದು ಹೇಳಲಾದ ಸ್ಕ್ಯಾ‌ನಿಂಗ್‌ ಫೋಟೋಗಳು ಹಾಗೂ ಅದರ ವರದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ. ಈ ವರದಿಗಳು ವೈರಲ್‌ ಆಗುತ್ತಿದ್ದಂತೆ ದ.ಕ. ಜಿಲ್ಲಾ ಎಸ್ಪಿ ಅವರನ್ನು ಭೇಟಿಯಾದ ಪುತ್ತೂರಿನ ಅರುಣ್‌ ಕುಮಾರ್‌ ಪುತ್ತಿಲ 

Damage to the victim's ears of Police Assault Case at Puttur in Dakshina Kannada grg
Author
First Published May 24, 2023, 3:30 AM IST

ಪುತ್ತೂರು(ಮೇ.24): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಅವರ ಭಾವಚಿತ್ರದ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಪೊಲೀಸ್‌ ದೌರ್ಜನ್ಯಕ್ಕೆ ಒಳಗಾದ ಇಬ್ಬರು ಗಾಯಾಳುಗಳ ಪೈಕಿ ಅಭಿ ಯಾನೆ ಅವಿನಾಶ್‌ ಎಂಬವರ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವೈದ್ಯಕೀಯ ವರದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಯುವಕನ ಕಿವಿಯದ್ದು ಎಂದು ಹೇಳಲಾದ ಸ್ಕ್ಯಾ‌ನಿಂಗ್‌

ಫೋಟೋಗಳು ಹಾಗೂ ಅದರ ವರದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ. ಈ ವರದಿಗಳು ವೈರಲ್‌ ಆಗುತ್ತಿದ್ದಂತೆ ಪುತ್ತೂರಿನ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರು ದ.ಕ. ಜಿಲ್ಲಾ ಎಸ್ಪಿ ಅವರನ್ನು ಭೇಟಿಯಾಗಿದ್ದಾರೆ.

ಮಂಗಳೂರು: ಕರಾವಳಿಯಲ್ಲಿ ಮತ್ತಷ್ಟು ಜೋರಾದ ಅರುಣ್ ಪುತ್ತಿಲ ಹವಾ..!

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುರ್ಮಾ ಕಟೀಲ್‌ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್‌ ಹಾಕಿದ ಪ್ರಕರಣ ಮೇ 14ರಂದು ತಡರಾತ್ರಿ ಪುತ್ತೂರು ಬಸ್‌ ನಿಲ್ದಾಣದ ಬಳಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 5ರಂದು 9 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಡಿವೈಎಸ್ಪಿ ಕಚೇರಿಗೆ ಕೊಂಡೊಯ್ದು ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಲಾಗಿತ್ತು. ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಎಸ್‌ಐ ಮತ್ತು ಓರ್ವ ಪಿಸಿಯನ್ನು ಅಮಾನತು ಮಾಡಲಾಗಿತ್ತು. ಡಿವೈಎಸ್ಪಿ ಅವರನ್ನು ರಜೆಯಲ್ಲಿ ಕಳುಹಿಸಲಾಗಿದೆ. ಈ ಪ್ರಕರಣ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಅಭಿ ಯಾನೆ ಅವಿನಾಶ್‌ ಮತ್ತು ಗುರುಪ್ರಸಾದ್‌ ಅವರನ್ನು ಮೇ 16ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಫೈಕಿ ಅವಿನಾಶ್‌ ಅವರ ಕಿವಿ ನೋವು ಕಡಿಮೆಯಾಗದ ಕಾರಣ ಅವರ ಕಿವಿಯ ಸ್ಕ್ಯಾ‌ನಿಂಗ್‌ ಮಾಡಿಸಲಾಗಿತ್ತು. ಸ್ಕಾ್ಯನಿಂಗ್‌ ವರದಿಯಲ್ಲಿ ಕಿವಿ ತಮಟೆ ಹರಿದ ಬಗ್ಗೆ ವೈದ್ಯಕೀಯ ವರದಿ ಬಂದಿತ್ತು ಎನ್ನಲಾಗಿದೆ. ಕೂಡಲೇ ದಕ್ಷಿಣ ಕನ್ನಡ ಎಸ್ಪಿ ವಿಕ್ರಂ ಆಮ್ಟೆಅವರನ್ನು ಭೇಟಿಯಾಗಿರುವ ಅರುಣ್‌ ಕುಮಾರ್‌ ಪುತ್ತಿಲ ಇನ್ನೆರಡು ದಿನದಲ್ಲಿ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು ಮತ್ತು ಸಂತ್ರಸ್ತರಿಗೆ 5 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಸಕಾರತ್ಮಕ ಸ್ಪಂದನೆ ಸಿಗದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Follow Us:
Download App:
  • android
  • ios