ವಿಜಯಪುರ ಜಿಲ್ಲೆಯಲ್ಲಿ ಮೊದಲೇ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ನೀರಿನ ಸಂಕಷ್ಟದ ನಡುವೆ ಅಳಿದುಳಿದ ಬೆಳೆಗಳನ್ನ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದರೆ. ಇತ್ತ ರೈತರಿಗೆ ಬಿರುಗಾಳಿ ಬರಸಿಡಿಲಿನಂತೆ ಎರಗಿದೆ. ಮಾರ್ಚ್ 30 ರಂದು ರಾತ್ರೋ ರಾತ್ರಿ ಬಿರುಗಾಳಿ, ಸಿಡಿಲಿನ ಹೊಡೆತಕ್ಕೆ ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ.

- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

Add Asianetnews Kannada as a Preferred SourcegooglePreferred

ವಿಜಯಪುರ (ಏ.31): ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಬಿಸಿಲು ನೆತ್ತಿ ಸುಡುತ್ತಿದೆ. ಇತ್ತ ಭೀಕರ ಬರದಿಂದಾಗಿ ರೈತರು ನಲುಗಿ ಹೋಗಿದ್ದಾರೆ. ಹಳ್ಳಿಗಳಲ್ಲಿ ರೈತರು ಹನಿ ನೀರಿಗೂ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಈ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಬಿರುಗಾಳಿ ಬೀಸಿದ್ದು ರೈತರು ಬೆಳೆದಿದ್ದ ಬೆಳೆಗಳು ನೆಲಕಚ್ಚಿವೆ. ಅತ್ತ ಬರದ ಸಂಕಷ್ಟದ ನಡುವೆ ಹಾಗೋ ಹೀಗೊ ಬೆಳೆ ಬೆಳೆದಿದ್ದ ಅನ್ನದಾತನಿಗೆ ಬಿರುಗಾಳಿ ಬರಸಿಡಿಲಾಗಿ ಬಂದೆರಗಿದೆ 

ಬರದ ನಡುವೆ ಅನ್ನದಾನಿಗೆ ಗಾಯದ ಮೇಲೆ ಬರೆ!

ಹೌದು, ವಿಜಯಪುರ ಜಿಲ್ಲೆಯಲ್ಲಿ ಮೊದಲೇ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ನೀರಿನ ಸಂಕಷ್ಟದ ನಡುವೆ ಅಳಿದುಳಿದ ಬೆಳೆಗಳನ್ನ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದರೆ. ಇತ್ತ ರೈತರಿಗೆ ಬಿರುಗಾಳಿ ಬರಸಿಡಿಲಿನಂತೆ ಎರಗಿದೆ. ಮಾರ್ಚ್ 30 ರಂದು ರಾತ್ರೋ ರಾತ್ರಿ ಬಿರುಗಾಳಿ, ಸಿಡಿಲಿನ ಹೊಡೆತಕ್ಕೆ ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ.

ಲೋಕಸಭಾ ಚುನಾವಣೆ ರಂಗೇರುತ್ತಿದ್ದರೂ, ಊರ ಉಸಾಬರಿ ಬಿಟ್ಟು ಗೋಶಾಲೆಗೆ ತೆರಳಿದ ಬಸವನಗೌಡ ಪಾಟೀಲ್ ಯತ್ನಾಳ್!

ಬೀಸಿದ ಬಿರುಗಾಳಿಗೆ ಕೈಗೆ ಬಂದ ಬೆಳೆಯೆ ನಾಶ!

ಜಿಲ್ಲೆಯಾದ್ಯಂತ ಬೀಸಿದ ಬಿರುಗಾಳಿ ಹಾಗೂ ಸಿಡಿಲಿನ ಹೊಡೆತಕ್ಕ ಅನಾಹುತಗಳೆ ಸಂಭವಿಸಿವೆ. ವಿಜಯಪುರ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಬಿರುಗಾಳಿಗೆ ಬಾಳೆ ತೋಟವೆ ಹಾಳಾಗಿದೆ. ಒಂದು ಕಾಲು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ನೆಲಕಚ್ಚಿದೆ. ಬಿರು ಬೇಸಿಗೆ ನಡುವೆ ರೈತನ ಕೈಗೆ ಬರಬೇಕಿದ್ದ ಬೆಳೆ ನೆಲ ಕಚ್ಚಿ ಹಾಳಾಗಿ ಹೋಗಿದೆ. ಮುರುಗೆಪ್ಪ ಚೌಗುಲೆ ಎಂಬುವರಿಗೆ ಸೇರಿದ ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ಧರೆಗುರುಳಿವೆ. ಸರಿಸುಮಾರು 2 ಲಕ್ಷಕ್ಕೂ ಅಧಿಕ ಹಾನಿಯಾಗಿದೆ. ಇನ್ನು ಬಿರುಗಾಳಿ ಹೊಡೆತಕ್ಕೆ ಲೈಟ್ ಕಂಬಗಳು ನೆಲಕ್ಕುರುಳಿವೆ. 

ಸಿಡಿಲಿಗೆ ಎತ್ತುಗಳ ಸಾವು!

ಇನ್ನೂ ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಜಮೀನಿನಲ್ಲಿ ನಿಲ್ಲಿಸಿದ್ದ ಎರಡು ಎತ್ತುಗಳು ಸಾವನ್ನಪ್ಪಿವೆ. ಮಖಣಾಪುರ ಗ್ರಾಮದಲ್ಲಿ ಒಣದ್ರಾಕ್ಷಿಯ ಶೆಡ್ ಮುರಿದು ಬಿದ್ದಿದೆ. ನಾಗಠಾಣ ಹೋಬಳಿಯಲ್ಲಿ ಸಿಡಿಲಿನ ಆರ್ಭಟಕ್ಕೆ ಜೋಳದ ರಾಶಿ ಸಂಗ್ರಹಿಸಿದ್ದ ಬಣವಿಗೆ ಬೆಂಕಿ ತಗುಲಿ ಅರವಿಂದ ಗುಣಕಿ ಎಂಬುವರಿಗೆ ಸೇರಿದ 8 ಟ್ರಾಕ್ಟರ್ ನಷ್ಟು, ಜೋಳದ ಮೇವು, 3 ಚೀಲದಷ್ಟು ಗೋಧಿ, ತೋಟದಲ್ಲಿನ ಪೈಪ್ ಸಹ ಸುಟ್ಟು ಹೋಗಿವೆ. 

ಲಿಂಬೆ ಬೆಳೆಗೂ ಹಾನಿ!

ವಿಜಯಪುರ ಜಿಲ್ಲೆಯಲ್ಲಿ ಬಿರುಬೇಸಿಗೆ ಪರಿಣಾಮ ಲಿಂಬೆ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. 10 ರು ಒಂದರಂತೆ ಲಿಂಬೆ ಮಾರಾಟವಾಗ್ತಿದೆ. ಬರದ ನಡುವೆ ಲಿಂಬೆ ಬೆಳೆದಿದ್ದ ರೈತರಿಗೆ ಇದು ಕೊಂಚ ಮಟ್ಟಿಗೆ ನೆಮ್ಮದಿ ಮೂಡಿಸಿತ್ತು. ಆದ್ರೆ ಬಿರುಗಾಳಿ ಇದಕ್ಕೂ ಕಲ್ಲು ಹಾಕಿದೆ. ಹುಣಸ್ಯಾಳ ಗ್ರಾಮದಲ್ಲಿ ಬಿರುಗಾಳಿಗೆ 25 ನಿಂಬೆ ಹಣ್ಣಿನ ಗಿಡಗಳು ನಾಶವಾಗಿವೆ. ಆಹೇರಿ ಗ್ರಾಮದಲ್ಲಿ ಸುಮಾರು 30 ಲಿಂಬೆ ಗಿಡಗಳು ನಾಶವಾಗಿವೆ. ಲಿಂಬೆ ಮಾರಿದ್ರೆ ಆದಾಯವಾದ್ದರು ಬರುತ್ತೆ ಎಂದುಕೊಂಡಿದ್ದ ರೈತರಿಗೆ ಬಿರುಗಾಳಿ ಶಾಕ್ ಕೊಟ್ಟಿದೆ..

ಆಲಮಟ್ಟಿ ಡ್ಯಾಂ: ಜುಲೈನಲ್ಲೂ ಮಳೆಯಾಗದಿದ್ರೂ ನೀರಿನ ಸಮಸ್ಯೆ ಇಲ್ಲ..!

ಘಟನಾಸ್ಥಳಗಳಿಗೆ ತಹಶಿಲ್ದಾರ್ ಕವಿತಾ ಭೇಟಿ!

ವಿಜಯಪುರ ತಾಲೂಕಿನಲ್ಲಿ ಬಿರುಗಾಳಿಗೆ ಅತಿ ಹೆಚ್ಚು ಹಾನಿ ಉಂಟಾಗಿದ್ದು, ವಿಷಯ ತಿಳಿದ ವಿಜಯಪುರ ತಹಶಿಲ್ದಾರ್ ಕವಿತಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲಿಂಬೆ ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದು ರೈತರಿಗೆ ಧೈರ್ಯ ತುಂಬಿದ್ದಾರೆ‌‌. ಸಿಡಿಲಿನ ಹೊಡೆತಕ್ಕೆ ಬಲಿಯಾದ ಜಾನುವಾರು ಮಾಲಿಕರನ್ನ ಭೇಟಿ ಮಾಡಿ ಸಮಾಧಾನ ಪಡೆಸಿದ್ದಾರೆ. ಸರ್ಕಾರಕ್ಕೆ ಅಗತ್ಯ ಮಾಹಿತಿ ರವಾನಿ, ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವ ಭರವಸೆ ನೀಡಿದ್ದಾರೆ‌. ಇದು ಬಿರುಗಾಳಿ, ಸಿಡಿಲಿನ ಹೊಡೆತಕ್ಕೆ ಕಂಗಾಲಾಗಿದ್ದ ರೈತರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ..