Asianet Suvarna News Asianet Suvarna News

Surgery For Cow: ಗೋಪೂ​ಜೆ ದಿನ ಚಿನ್ನದ ಸರ ನುಂಗಿದ್ದ ಹಸುವಿಗೆ ಶಸ್ತ್ರಚಿಕಿತ್ಸೆ

  • ದೀಪಾವಳಿ ಗೋಪೂಜೆಗೆ ಹಾಕಿದ್ದ ಬಂಗಾರದ ಸರವನ್ನು ಆಕಳು ನುಂಗಿ, ಪಶು ವೈದ್ಯರಿಂದ ಶಸ್ತ್ರ ಚಿಕಿತ್ಸೆ
  •  ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದ ಅಪರೂಪದ ಘಟನೆ
Cow undergoes surgery after eating owner gold chain in sirsi snr
Author
Bengaluru, First Published Dec 9, 2021, 6:14 AM IST

  ಶಿರಸಿ (ಡಿ.09): ದೀಪಾವಳಿ ಗೋ ಪೂಜೆಗೆ ಹಾಕಿದ್ದ ಬಂಗಾರದ ಸರವನ್ನು (Gold Chain) ಆಕಳು ನುಂಗಿ, ಪಶು ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದ ಅಪರೂಪದ ಘಟನೆ ತಾಲೂಕಿನ ಹೀಪನಳ್ಳಿ ಸಂಕದಮನೆಯಲ್ಲಿ ನಡೆದಿದೆ. ಇಲ್ಲಿಯ ಶ್ರೀಕಾಂತ ಹೆಗಡೆ (Shrikanth Hegde) ಅವರ ಮನೆಯ ಕೊಟ್ಟಿಗೆಯಲ್ಲಿ ಗೋಪೂಜೆ ದಿನ ಆಕಳಿಗೆ ಬಂಗಾರ ಹಾಕಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಅದೇ ರೀತಿ ಪೂಜೆ ಸಲ್ಲಿಸಿ, ಪೂಜೆ ಮುಗಿದ ಬಳಿಕ ಬಂಗಾರದ ಸರ ಕಾಣೆಯಾಗಿತ್ತು. ಕೊಟ್ಟಿಗೆಯ ತುಂಬೆಲ್ಲ ಹುಡುಕಾಡಿದರೂ ಸರ ಸಿಕ್ಕಿರಲಿಲ್ಲ. ಇಷ್ಟು ದಿನಗಳ ಕಾಲ ಹುಡುಕಿದರೂ ಸಿಗದಿದ್ದಾಗ ಸಂಶಯಗೊಂಡ ಅವರು, ಆಕಳು ಈ ಸರವನ್ನು ನುಂಗಿರುವ ಬಗ್ಗೆ ಪಶು ವೈದ್ಯ ಡಾ. ಪಿ.ಎಸ್‌. ಹೆಗಡೆ ಅವರಲ್ಲಿ ಸಂಶಯ ವ್ಯಕ್ತಪಡಿಸಿದ್ದರು.

ಉಮ್ಮಚಗಿಯ ಪಶು ವೈದ್ಯ ಡಾ. ರಾಜೇಶ ಅವರೊಂದಿಗೆ ಲೋಹ (Metal) ಪರೀಕ್ಷಕದ ಮೂಲಕ ಆಕಳ  (Cow) ಪರೀಕ್ಷೆ ನಡೆಸಿದಾಗ ಬಂಗಾರದ (Gold) ಸರ ಆಕಳ ಹೊಟ್ಟೆಯಲ್ಲಿ ಇರುವುದು ಪತ್ತೆಯಾಗಿತ್ತು. ಸುಮಾರು ಎರಡು ತಾಸುಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಬಂಗಾರದ ಸರ ಹೊರ ತೆಗೆದಿದ್ದಾರೆ. ಆದರೆ, ಸರದಲ್ಲಿದ್ದ ಒಂದು ತಾಳಿ ಇಲ್ಲವಾಗಿದ್ದನ್ನು ಪತ್ತೆಹಚ್ಚಿದ ವೈದ್ಯರು, ಆಕಳಿನ ಕರುವನ್ನೂ ಶೋಧ ನಡೆಸಿದ್ದಾರೆ. ಈ ವೇಳೆ ತಾಳಿ ಕರುವಿನ ಹೊಟ್ಟೆಯಲ್ಲಿದ್ದುದು ಪತ್ತೆಯಾಗಿದೆ. ಆ ಕರುವಿಗೂ ಶಸ್ತ್ರ ಚಿಕಿತ್ಸೆ ನಡೆಸಿ ತಾಳಿಯನ್ನು ಹೊರ ತೆಗೆದಿದ್ದಾರೆ.

ಗೋ ಪೂಜೆಯ ವೇಳೆ ಆಕಳಿಗೆ ಬಂಗಾರ ಹಾಕಬಾರದು. ಇಂತಹ ಘಟನೆಗಳಿಂದ ಆಕಳಿಗೆ ಘಾಸಿ ಮಾಡಿದಂತಾಗುತ್ತದೆ.

ಗೋ ಸಾಕಣೆ ಬಗ್ಗೆ ಶಾಲಾ ಪಠ್ಯ : 

ಗೋವು ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ವಿಷಯವನ್ನು 1 ರಿಂದ 12ನೇ ತರಗತಿವರೆಗಿನ ಪಠ್ಯದಲ್ಲಿ ಅಳವಡಿಸುವಂತೆ ಕೋರಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಸಾಮಾಜಿಕ ಪರಿಸರ ಅಧ್ಯಯನದ ಭಾಗವಾಗಿ ಭಾರತೀಯ ಗೋವುಗಳ ಜತೆಗಿರುವ ಮಾನವ ಸಂಬಂಧ ಹಾಗೂ ಜೈವಿಕ ವೈವಿಧ್ಯತೆ, ಪರಿಸರ ಅವಲಂಬನೆ, ಪರಿಸರ ಸಂರಕ್ಷಣೆ ಕುರಿತು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿ ಹೇಳುವ ಕೆಲಸವಾಗಬೇಕಾಗಿದೆ. ಭಾರತೀಯ ಗೋವುಗಳು ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದಂತೆ 1ನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಅಳವಡಿಸಿದಲ್ಲಿ ಮಕ್ಕಳಲ್ಲಿ ಗೋವುಗಳ ಬಗ್ಗೆ ಅರಿವು ಮೂಡಿಸಲು ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ. ಶಿಕ್ಷಣ ಸಚಿವರೊಂದಿಗೆ ಇದನ್ನು ಚರ್ಚಿಸಿ ಗೋವುಗಳ ಬಗ್ಗೆ ಪಠ್ಯ ಅಳವಡಿಸಲು ಕೋರಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಗೋವಿನ ಉತ್ಪನ್ನಗಳು ನಮ್ಮ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಪಾರಂಪರಿಕವಾಗಿ ಗೋ ಮೂತ್ರ, ಸಗಣಿ ಸಹ ಔಷಧ ರೂಪದಲ್ಲಿ ಬಳಕೆಯಾಗುತ್ತಿರುವುದಲ್ಲದೇ ಅನೇಕ ಕಾಯಿಲೆಗಳು ಪಂಚಗವ್ಯದಂತಹ ವಿಶಿಷ್ಟ ಸಂಯೋಜನೆಯಿಂದ ಗುಣಮುಖವಾದ ಉದಾಹರಣೆಗಳಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಗೋ ಉತ್ಪನ್ನಗಳಿಂದ ಔಷಧ ತಯಾರಿಸಿ ಮಾನವರ ಚಿಕಿತ್ಸೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುಮತಿ ಕೋರಲಾಗಿದೆ ಎಂದಿದ್ದಾರೆ.

ಗೋಶಾಲೆಯ ಚಟುವಟಿಕೆಗಳನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸಿ ವಿದ್ಯುತ್‌ ಬಿಲ್‌ ಪಾವತಿಗೆ ವಿನಾಯಿತಿ ಅಥವಾ ಸಬ್ಸಿಡಿ ನೀಡುವಂತೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ ಎಂದೂ ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios