Asianet Suvarna News Asianet Suvarna News

Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್‌

*   ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಕಿಡಿ
*   ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದೆ
*   ಹಿಂದೂ ಸಮಾಜ ಉಳಿಸುವಲ್ಲಿ ಮಠ ಬಿಟ್ಟು ಹೊರ ಬನ್ನಿ

Cow Theft and Conversion More in the BJP Government Says Pramod Mutalik grg
Author
Bengaluru, First Published Dec 4, 2021, 11:35 AM IST

ಧಾರವಾಡ(ಡಿ.04): ಬಿಜೆಪಿ(BJP) ಸರ್ಕಾರದಲ್ಲಿಯೇ ಗೋ ಕಳ್ಳತನ, ಹಿಂದೂಗಳ ಮತಾಂತರ(Conversion of Hindus), ಹಿಂದೂ ಸಂಘಟನೆಗಳ ಮೇಲೆ ಹಲ್ಲೆ ಜಾಸ್ತಿಯಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌(Pramod Mutalik) ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಹಿಂದುತ್ವದ(Hindutva) ಆಧಾರದ ಮೇಲೆ ಸರ್ಕಾರ ರಚಿಸಿದ ಬಿಜೆಪಿ ಮುಖಂಡರು ಹಿಂದೂಗಳ ರಕ್ಷಣೆ ಹಾಗೂ ಹಿಂದೂ ಸಂಘಟನೆಗಳ ಬೆಳವಣಿಗೆ ಮರೆತು ಬರೀ ಲೂಟಿ ಮಾಡುವುದನ್ನು ರೂಢಿಸಿಕೊಂಡಿದ್ದು ನಾಚಿಕೆಗೇಡು. ಮುಖ್ಯಮಂತ್ರಿಗಳ, ಗೃಹ ಮಂತ್ರಿಗಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಅವರ ಸ್ವ- ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಹಿಂದೂಗಳ ಮೇಲಿನ ಹಲ್ಲೆಗಳನ್ನು ನೋಡಿದರೆ, ಬಿಜೆಪಿ ಸರ್ಕಾರ ಹಿಂದೂ ಸಂಘಟನೆಗಳನ್ನು, ಹಿಂದೂ ಕಾರ್ಯಕರ್ತರನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದೆ ಎಂದು ಆರೋಪಿಸಿದರು.

Hindu Nation: ಹಿಂದುತ್ವ ವಿಚಾರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ತಿದೆ: ಮುತಾಲಿಕ್‌

ಲಾಭ ಪಡೆದವರೆಲ್ಲಿ?:

ಕೋಲಾರದಲ್ಲಿ(Kolar) ಇತ್ತೀಚೆಗೆ ದತ್ತ ಮಾಲಾಧಾರಿಗಳ ವಾಹನದ ಮೇಲೆ ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ಮಾಡಲಾಯಿತು. ಗೋದ್ರಾ ಮಾದರಿಯಲ್ಲಿ ಪೆಟ್ರೋಲ್‌ ಹಾಕಿ ಸುಡಲು ಪ್ರಯತ್ನಿಸಲಾಯಿತು. ತುಮಕೂರಿನಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಕೊಲೆ ಯತ್ನ ಸೇರಿದಂತೆ ರಾಜ್ಯದಲ್ಲಿ ಅನೇಕ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆಗಳಾಗಿವೆ. ಇದರೊಂದಿಗೆ ಲವ್‌ ಜಿಹಾದ್‌(Love Jihad), ಮತಾಂತರ, ಗೋಹತ್ಯೆ ನಿತ್ಯವೂ ನಡೆಯುತ್ತಿದೆ. ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕ್ಷೇತ್ರ ಹುಬ್ಬಳ್ಳಿ- ಧಾರವಾಡದಲ್ಲಿ ಹಿಂದೂಗಳನ್ನು ಕ್ರಿಶ್ಚಿಯನ್‌(Christian) ಧರ್ಮಕ್ಕೆ ಮತಾಂತರ ಮಾಡಿದರೂ ಪ್ರಶ್ನಿಸಲಿಲ್ಲ. ಈ ಪ್ರಕರಣದಲ್ಲಿ ಪ್ರತಿಭಟನೆ ಮಾಡಿದ ಹಿಂದೂಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್‌(Congress) ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಾಗ ಬೀದಿಗೆ ಇಳಿದು ಹೋರಾಟ ಮಾಡಿ ಹಿಂದೂಗಳ ರಕ್ಷಣೆ ಮಾಡುತ್ತೇವೆಂದು ರಾಜಕೀಯ(Politics) ಲಾಭ ಪಡೆದವರು ಈಗೆಲ್ಲಿದ್ದಾರೆ ಎಂದು ಮುತಾಲಿಕ್ ಪ್ರಶ್ನಿಸಿದರು.

ಬಿಜೆಪಿ ಸರ್ಕಾರಕ್ಕೆ(BJP Government) ಹಿಂದೂಗಳ ರಕ್ಷಣೆ ಮಾಡಲಾಗದೇ ಇದ್ದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಿ. ಹಿಂದೂ ಸಮಾಜ ಉಳಿಸೋದು ನಮಗೆ ಗೊತ್ತಿದೆ. ಮತಾಂತರ ನಿಷೇಧಕ ಕಾಯ್ದೆ ಮಾಡಲು ತಮಗೆ ಪದೇ ಪದೇ ನಾವು ಒತ್ತಾಯ ತರಬೇಕಾ? ಬಿಜೆಪಿ ಶಾಸಕರ, ಸಂಸದರ ಕ್ಷೇತ್ರದಲ್ಲಿ ಕಾನೂನುಬಾಹಿರವಾಗಿ ಮತಾಂತರ ನಡೆಯುತ್ತಿರುವುದು, ಕಸಾಯಿಖಾನೆ ಇರುವುದು, ಗೋ ಮಾಂಸ ಮಾರಾಟ ಆಗುತ್ತಿರುವುದು ತಮಗೆ ಗೊತ್ತಿಲ್ಲವೇ? ಈ ಬಗ್ಗೆ ಹಿಂದೂ ಸಂಘಟನೆಗಳಿಗೆ ಗೊತ್ತಾಗುತ್ತದೆ. ಆದರೆ, ಪೊಲೀಸರಿಗೆ(Police) ಗೊತ್ತಾಗುತ್ತಿಲ್ಲವೇಕೆ ಎಂದು ಆಡಳಿತ ವ್ಯವಸ್ಥೆಯ ಬಗ್ಗೆಯೂ ಮುತಾಲಿಕ ಕಿಡಿಕಾರಿದರು.

Religious Conversion| ಬ್ಲ್ಯಾಕ್‌ ಮ್ಯಾಜಿಕ್‌ ಮೂಲಕ ಮತಾಂತರ: ಪ್ರಮೋದ್‌ ಮುತಾಲಿಕ್‌

ಗೋ ಹಂತಕರನ್ನು, ಕಸಾಯಿಖಾನೆಗಳನ್ನು ಬೆಳೆಸಿದ್ದೇ ಕಾಂಗ್ರೆಸ್ಸಿಗರು. ಇದೀಗ ಈ ವಿಷಯದಲ್ಲಿ ಕಾಂಗ್ರೆಸ್‌ ಹಾದಿಯಲ್ಲಿಯೇ ಬಿಜೆಪಿ ನಡೆಯುತ್ತಿದೆ. ಕೇಂದ್ರದಿಂದ ವರ್ಷಕ್ಕೆ 50 ಸಾವಿರ ಕೋಟಿ ಗೋಮಾಂಸ(Beef) ರಫ್ತು ಆಗುತ್ತಿದೆ. ಗೋ ಕಳ್ಳತನ, ಕಸಾಯಿಖಾನೆಗೆ ಪ್ರೋತ್ಸಾಹ ಬಿಜೆಪಿ ಸರ್ಕಾರ ನೀಡಿದಂತೆ ಅಲ್ಲವೇ? ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ರಾಕ್ಷಸರು, ದೇಶದ್ರೋಹಿಗಳು, ಕಿಡಿಗೇಡಿಗಳು ಬೆಳೆಯುತ್ತಿದ್ದಾರೆ. ಹದ್ದುಬಸ್ತಿನಲ್ಲಿ ಇಡದೇ ಇದ್ದಲ್ಲಿ ನೀವು ಧೂಳಿಪಟ ಆಗಲಿದ್ದೀರಿ. ಆರ್‌ಎಸ್‌ಎಸ್‌(RSS) ಗುಂಡಾಗಳಿಗೆ ಗುಂಡು ಹೊಡೀತೇವಿ ಎಂದೆಲ್ಲಾ ಹೇಳುತ್ತಿರುವುದು ಬಿಜೆಪಿ ಅವರನ್ನು ಪೋಷಣೆ ಮಾಡಿದ್ದಲ್ಲವೇ ಎಂದು ಪ್ರಶ್ನಿಸಿದರು.

ಮಠ ಬಿಟ್ಟು ಹೊರ ಬನ್ನಿ...

ಪಂಚಮಸಾಲಿ ಮಠಾಧಿಪತಿಗಳೇ, ಬರೀ ಮೀಸಲಾತಿಗೆ(Reservation) ಹೋರಾಟ ಮಾಡಿದರೆ ಸಾಲದು. ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರನ್ನು ಉಳಿಸಿಕೊಳ್ಳುವ ಕೆಲಸ ಮಾತ್ರ ನಿಮ್ಮದಲ್ಲ. ಈ ದೇಶ, ಹಿಂದೂ ಸಮಾಜ ಉಳಿಸುವಲ್ಲಿ ಮಠ ಬಿಟ್ಟು ಹೊರ ಬನ್ನಿ. ನಿಮ್ಮ ಕಣ್ಣಿನ ಎದುರೇ ಮತಾಂತರ, ಗೋ ಹತ್ಯೆ, ಲವ್‌ ಜಿಹಾದ್‌ ನಡೆಯುತ್ತಿದೆ. ಇದು ಬರೀ ಹಿಂದೂ ಸಂಘಟನೆಗಳ ಕೆಲಸವಲ್ಲ. ಹಿಂದೂಗಳ ರಕ್ಷಣೆ ಪ್ರಮೋದ ಮುತಾಲಿಕಗೆ ಮಾತ್ರ ಬೇಕಾ? ನಿಮಗೆ ಮಠಗಳಲ್ಲಿ ಭಕ್ತರು ಬರುವ ದಿನಗಳಲ್ಲಿ ಬರಬೇಕಾದರೆ ಇಂದು ಮಠ ಬಿಟ್ಟು ಹೊರ ಬನ್ನಿ. ಹಿಂದೂ ಸಂಘಟನೆಗಳ ಜತೆಗೆ ಹೋರಾಟ ಮಾಡಬೇಕಿದೆ. ಇತ್ತೀಚೆಗೆ 50 ಸ್ವಾಮೀಜಿಗಳನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ಭೇಟಿಯಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗದೇ ಇದ್ದಲ್ಲಿ ಜ. 1ರಿಂದ ಹೋರಾಟ ನಿಶ್ಚಿತ ಅಂತ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. 
 

Follow Us:
Download App:
  • android
  • ios