*   ಕೋರ್ಟ್ ಅಂಗಳದತ್ತ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ *   ಅಧಿಕಾರಿಗಳಿಗೆ ಕೋರ್ಟ್ ಮೂಲಕ ನೋಟೀಸ್.*  ನೋಟೀಸ್ ನೀಡುವ ಮೂಲಕ ಕಾನೂನು ಸಮರ ಆರಂಭಿಸಿದ ಭಜರಂಗಸೇನೆ   

ಮಂಡ್ಯ(ಮೇ.25): ಜ್ಞಾನವಾಪಿ ರೀತಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಕೂಡ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆದಿದೆ. ಕಾನೂನು ಹೋರಾಟದ ಮೊದಲ ಹೆಜ್ಜೆ ಇಟ್ಟಿರುವ ಭಜರಂಗಸೇನೆ ಅಧಿಕಾರಿಗಳಿಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ. 30 ದಿನಗಳಲ್ಲಿ ನೊಟೀಸ್‌ಗೆ ಜವಾಬ್ದಾರಿಯುತವಾಗಿ ಉತ್ತರಿಸುವಂತೆ ಕೋರಿದೆ.

Add Asianetnews Kannada as a Preferred SourcegooglePreferred

10 ಪುಟಗಳ 20 ಅಂಶಗಳನ್ನು ಒಳಗೊಂಡ ನೊಟೀಸ್

ಜಾಮಿಯಾ ಮಸೀದಿ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ, ಮುಜರಾಯಿ, ಪುರಾತತ್ವ ಹಾಗೂ ವಕ್ಫ್ ಬೋರ್ಡ್ ಆಯುಕ್ತರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಭಜರಂಗ ಸೇನೆ ಪರ ವಕೀಲ ರವಿಶಂಕರ್ ರವರಿಂದ ಕೋರ್ಟ್ ನೋಟೀಸ್ ಜಾರಿ ಮಾಡಲಾಗಿದ್ದು. 10 ಪುಟಗಳ ನೋಟೀಸ್‌ನಲ್ಲಿ 20 ಅಂಶಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಪುರಾತತ್ವ ಇಲಾಖೆಯಿಂದ ಮಸೀದಿ ಸರ್ವೆಗೆ ಆಗ್ರಹಿಸಲಾಗಿದೆ. 

ಜ್ಞಾನವ್ಯಾಪಿ ಮ್ಯಾಪ್ ಬದಲಾಯಿಸಲು ಸ್ಕೂಲ್‌ ಮನವಿ: ಸ್ಪಷ್ಟನೆ ನೀಡಿದ ಶಾಲೆ

ಐತಿಹಾಸಿಕ ಪ್ರಮಾಣವನ್ನು ಸರಿಪಡಿಸಿ ಹಿಂದೂಗಳಿಗೆ ಮಸೀದಿ ಜಾಗ ಮರಳಿ ನೀಡಬೇಕು. ಶ್ರೀ ವೆಂಕಟರಮಣ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಮೇಲೆ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ.‌ ಟಿಪ್ಪು ಆಡಳಿತದ ವೇಳೆ ದೇವಾಲಯ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ಉದ್ದೇಶಪೂರ್ವಕ ಮತ್ತು ಧಾರ್ಮಿಕ ದ್ವೇಷದಿಂದ ದೇವಾಲಯ ಹಾನಿಹೊಳಿಸಿದ್ದಾರೆ. ಧಾರ್ಮಿಕ ಘಾಸಿಗೊಳಿಸುವಿಕೆಗೆ ಅವಕಾಶ ಮತ್ತು ಮುಂದುವರೆಸುವುದು ಹಿಂದೂಗಳ ಭಾವನೆಗೆ ಧಕ್ಕೆ ತರುವ ವಿಚಾರ. ಆಕ್ರಮಣಕಾರರು ಮಾಡಿದ ‌ಪ್ರಮಾದವನ್ನು ಕಾನೂನಾತ್ಮಕವಾಗಿ ಸರಿಪಡಿಸಿ ಎಂದು ಕೋರಲಾಗಿದೆ. ಜೊತೆಗೆ ಪುರಾತತ್ವ ಇಲಾಖೆ ಸುಪರ್ದಿಗೆ ಬರುವ ಸ್ಮಾರಕಗಳಲ್ಲಿ ಹೊರಗಿನವರ ವಾಸ್ತವ್ಯ ನಿಷಿದ್ಧ ಆದರೆ ಜಾಮಿಯಾ ಮಸೀದಿಯಲ್ಲಿ ಹೊರಗಿನ ವಿದ್ಯಾರ್ಥಿಗಳಿಗೆ ಶರೀಯಾ, ಅರೆಬಿಕ್ ಪಾಠ ಮಾಡಲಾಗ್ತಿದೆ. ಕೂಡಲೇ ಅದನ್ನು ನಿರ್ಬಂಧಿಸಬೇಕು ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಸಿಎಂ, ಪಿಎಂಗೂ ನೋಟೀಸ್ ಪ್ರತಿ ಸಲ್ಲಿಕೆ

ಜಾಮಿಯಾ ಮಸೀದಿ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿರುವ ಭಜರಂಗಸೇನೆ ಅಧಿಕಾರಿಗಳ ನೋಟೀಸ್ ಜಾರಿ ಮಾಡಿದೆ. ಆದರೆ ಅಧಿಕಾರಿಗಳಿಂದ ಉತ್ತರ ಸಿಗುವ ಬಗ್ಗೆ ಅನುಮಾನ ಹೊಂದಿರುವ ಭಜರಂಗಸೇನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವ ಕೆಲಸ ಮಾಡಿದೆ. ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡುವ ಜೊತೆಗೆ ಪ್ರಧಾನಿ ಮೋದಿ, ಸಿಎಂ ಬೊನ್ಮಾಯಿ, ಕೇಂದ್ರ ಕಾನೂನು ಮತ್ತು ಸಾಂಸ್ಕೃತಿಕ ಸಚಿವರಿಗೆ ನೋಟೀಸ್ ಪ್ರತಿ ಕಳುಹಿಸಲಾಗಿದೆ.

ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ? ಕಾಶಿ ದೇವಸ್ಥಾನದ ಮಾಜಿ ಮಹಂತ್ ಹೇಳಿದ್ದಿಷ್ಟು

1001 ಅರ್ಜಿದಾರರಿಂದ ಹೈಕೋರ್ಟ್‌ಗೆ ದಾವೆ

ಕಾನೂನು ಹೋರಾಟ ಮೊದಲ ಹೆಜ್ಜೆಯಾಗಿ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿರುವ ಭಜರಂಗಸೇನೆ. ಉತ್ತರಿಸಲು 30 ದಿನಗಳ ಕಾಲಾವಕಾಶ ನೀಡಿದೆ. ಆದರೆ ನೋಟೀಸ್‌ಗೆ ಸಮರ್ಪಕ ಉತ್ತರ ಬರದಿದ್ದರೆ ಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಲಾಗಿದೆ. 30 ದಿನಗಳ ಬಳಿಕ 1001 ಹಿಂದೂ ಪರ ಕಾರ್ಯಕರ್ತರು ಹೈ ಕೋರ್ಟ್‌ಗೆ ದಾವೆ ಹೂಡಲಿದ್ದಾರೆ. ಈಗಾಗಲೇ ಈ ವಿಚಾರವಾಗಿ ಮಂಡ್ಯದ ಬೇರೆ ಬೇರೆ ತಾಲೂಕುಗಳಲ್ಲಿ ಸಭೆ ನಡೆಸಿ ಸಂಘಟಿಸಲಾಗ್ತಿದೆ. ಜಾಮಿಯಾ ಮಸೀದಿ ವಿಚಾರವಾಗಿ ಸಾವಿರ ಜನ ಅರ್ಜಿದಾರರು ಕೋರ್ಟ್ ಮೊರೆ ಹೋಗಲಿದ್ದಾರೆ.