* ಇಂದು ರಾತ್ರಿ 12.30ಕ್ಕೆ ಹೊರಡಲಿದೆ ದ್ರೌಪದಿ ದೇವಿಯ ಕರಗ ಉತ್ಸವ* ಎರಡು ವರ್ಷಗಳ ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆಯಲು ಕಾತರರಾಗಿರುವ ಭಕ್ತರು* ದ್ರೌಪದಿ ದೇವಿಗೆ ಮಲ್ಲಿಗೆ ಅಲಂಕಾರ ವಿಶೇಷ
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು(ಏ.16): ಐತಿಹಾಸಿಕ ಕರಗ ಉತ್ಸವಕ್ಕೆ(Karaga Utsava) ಕ್ಷಣಗಣನೆ ಆರಂಭಗೊಂಡಿದೆ. ಇಂದು(ಶನಿವಾರ) ರಾತ್ರಿ 12.30ಕ್ಕೆ ಮಲ್ಲಿಗೆ ಹೂವಿನಿನಿಂದ ಸಿಂಗಾರಗೊಂಡ ದ್ರೌಪದಿ ದೇವಿಯ ಕರಗ ಶಕ್ತ್ಯೋತ್ಸವಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಕಳೆದೆರಡು ವರ್ಷದಿಂದ ಕೊರೋನಾ(Coronavirus) ಹೊಡೆತದಿಂದ ಕಳೆಗುಂದಿದ್ದ ಬೆಂಗಳೂರು ಧರ್ಮರಾಯಸ್ವಾಮಿಯ ಐತಿಹಾಸಿಕ ದ್ರೌಪದಿ ಕರಗ ಉತ್ಸವ ಈ ವರ್ಷ ಅದ್ಧೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು(Devotees) ಕಾತರರಾಗಿದ್ದಾರೆ. ಏ.8 ರಿಂದ ಪ್ರಸಿದ್ದ ಧರ್ಮರಾಯ ದೇವಸ್ಥಾನದಲ್ಲಿ ಕರಗ ಪೂಜಾ ವಿಧಿ ವಿಧಾನ ಸಂಪ್ರದಾಯಗಳು ಆರಂಭಗೊಂಡಿದ್ದು, ದೇವಾಲಯ ನವವಧುವಿನಂತೆ ಸಿಂಗಾರಗೊಂಡಿದೆ.
ಕಳೆದ ಒಂಭತ್ತು ದಿನಗಳಿಂದಲೂ ದೇವಾಲಯದಲ್ಲಿ(Temple) ಕರಗ ವಿಶೇಷ ಸಂಪ್ರದಾಯ ಪೂಜೆ ನಡೆಯುತ್ತಲೇ ಇದೆ. ಹಸಿಕರಗ, ದೇವಿಗೆ ಪೊಂಗಲ್ ಸೇವೆ, ಕರ್ಪೂರ ಸೇವೆ, ಮಡಿಲಕ್ಕಿ ಅರ್ಪಿಸೋ ಸೇವೆ ಹೀಗೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು. ಇನ್ನು ವರ್ಷಕ್ಕೊಮ್ಮೆ ನಡೆಯೋ ಕರಗ ಉತ್ಸವದಲ್ಲಿ ಭಕ್ತರು ಪೊಂಗಲ್ ಸೇವೆ, ಮಡಿಲಕ್ಕಿ ಸೇವೆ ಅರ್ಪಿಸುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸೋದು ವಾಡಿಕೆ.
ವಿಜೃಂಭಣೆಯಿಂದ ನಡೆದ ಹಸಿ ಕರಗ ಉತ್ಸವ
ದ್ರೌಪದಿ ದೇವಿಗೆ ಮಲ್ಲಿಗೆ ಅಲಂಕಾರ ವಿಶೇಷ
ಕರಗ ಅಂದರೆ ದ್ರೌಪದಿಗೆ(Draupadi Devi) ಹೂವಿನ ಅಲಂಕಾರವೇ ವಿಶೇಷತೆ. ಪ್ರತಿ ಕರಗ ಸಮಯದಲ್ಲು ಅಲಂಕಾರಕ್ಕಾರಕ್ಕಾಗಿ ವಿವಿಧ ಬಗೆಯ ಹೂಗಳನ್ನು ಹೊರ ರಾಜ್ಯದಿಂದಲೂ ಖರೀದಿ ಮಾಡಲಾಗ್ತಿದೆ. ಅದ್ರಲ್ಲು ದ್ರೌಪದಿ ದೇವಿಗೆ ಮಲ್ಲಿಗೆ ಅಲಂಕಾರ ವಿಶೇಷ. ಪೂರ್ತಿ ಮಲ್ಲಿಗೆಯಿಂದಲೇ ಅಲಂಕಾರ ಮಾಡುವ ಮೂಲಕ ದೇವಿಗೆ ಸಮರ್ಪಣೆ ಮಾಡಲಾಗುತ್ತೆ. ಹೀಗಾಗಿ ದೇವಿ ಅಲಂಕಾರಕ್ಕೆಂದೆ ಸುಮಾರು 30 ಲಕ್ಷ ರೂಪಾಯಿ ಮಲ್ಲಿಗೆ ಹೂ ಖರೀದಿ ಮಾಡಲಾಗಿದೆ.
ಇನ್ನು ಇಂದು ರಾತ್ರಿ ಕಬ್ಬನ್ ಪೇಟೆಯ ಬೀದಿಗಳಲ್ಲಿ ರಾಜ ಮಾರ್ಕೆಟ್, ಮಾರ್ಕೆಟ್ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನದವರೆಗೆ ಕರಗ ಉತ್ಸವ ನಡೆಯಲಿದೆ. ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆಯನ್ನ ಸ್ವಚ್ಚಗೊಳಿಸಿದ್ದು, ವಿದ್ಯುತ್ ದೀಪ, ಹೂಗಳಿಂದ ಅಲಂಕಾರ ಮಾಡಲಾಗಿದೆ. ಈ ಭಾರಿಯೂ ಕೂಡ ಜ್ಞಾನೇಂದ್ರ ಕರಗ ಹೊರಲಿದ್ದು 6 ಲಕ್ಷಕ್ಕು ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಬಿಬಿಎಂಪಿ(BBMP), ಪೊಲೀಸ್(Police) ಇಲಾಖೆ ಹಾಗೂ ಬೆಂಗಳೂರು(Bengaluru) ನಗರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ.
