ಭ್ರಷ್ಟಾಚಾರ: ಈ 31 ಗುತ್ತಿಗೆದಾರರು ಕಪ್ಪುಪಟ್ಟಿಗೆ!
ಭ್ರಷ್ಟಾಚಾರ: 31 ಗುತ್ತಿಗೆದಾರರು ಕಪ್ಪುಪಟ್ಟಿಗೆ| ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅವ್ಯವಹಾರ ನಡೆಸಿದ್ದರಿಂದ ಬಿಬಿಎಂಪಿಗೆ .76 ಕೋಟಿ ನಷ್ಟ| ವರದಿ ಸಲ್ಲಿಸಿದ್ದ ನಾಗಮೋಹನದಾಸ್ ಸಮಿತಿ| ವರದಿ ಆಧರಿಸಿ ಈಗಾಗಲೇ ಸೇವೆಯಿಂದ 25 ಎಂಜಿನಿಯರ್ಗಳ ಬಿಡುಗಡೆ| ನಷ್ಟದ ಮೊತ್ತ ವಸೂಲಿಗೆ ಉನ್ನತ ಸಮಿತಿ ರಚನೆ: ಅನಿಲ್ಕುಮಾರ್
ಬೆಂಗಳೂರು[ನ.24]: ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಮಿತಿ ನೀಡಿದ್ದ ತನಿಖಾ ವರದಿ ಆಧರಿಸಿ ಈಗಾಗಲೇ 25 ಎಂಜಿನಿಯರ್ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದ್ದು, 31 ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 2008ರಿಂದ 2012ರ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಮಗಾರಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ನ್ಯಾ.ನಾಗಮೋಹನದಾಸ ನೇತೃತ್ವದ ಸಮಿತಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬಳಿಕ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮಾಜಿ ಸಚಿವ ಎ.ರಾಮದಾಸ್ ನೇತೃತ್ವದ ಸದನ ಸಮಿತಿ ರಚಿಸಿತ್ತು.
ಭ್ರಷ್ಟ 25 ಎಂಜಿನಿಯರ್ಸ್ಸ್ ಮಾತೃ ಇಲಾಖೆಗೆ!
ಸಮಿತಿ ಸದಸ್ಯರು ಈಗಾಗಲೇ ಎರಡು ಮೂರು ಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿದ 25 ಎಂಜಿನಿಯರ್ಗಳನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ. ಅದೇ ರೀತಿ ವರದಿಯಲ್ಲಿ ಉಲ್ಲೇಖಿಸಲಾಗಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ತಿಳಿಸಿದರು.
ನಾಗಮೋಹನದಾಸ ಸಮಿತಿಯ ವರದಿಯಲ್ಲಿ ಒಟ್ಟು 67 ಕಾಮಗಾರಿಗಳಲ್ಲಿ 33 ಎಂಜಿನಿಯರ್ ಹಾಗೂ 31 ಗುತ್ತಿಗೆದಾರರ ವಿರುದ್ಧ 43 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿತ್ತು. ಈ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರದಿಂದ ಬಿಬಿಎಂಪಿಗೆ ಅಂದಾಜು .76 ಕೋಟಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಿಬಿಎಂಪಿಗೆ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡುವ ಉದ್ದೇಶದಿಂದ ಬಿಬಿಎಂಪಿಯ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
2014ರಲ್ಲೇ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಿಐಡಿ ಅಧಿಕಾರಿಗಳು ಪತ್ರ ಬರೆದರೂ, ಬಿಬಿಎಂಪಿ ಆಯುಕ್ತರು ಕ್ರಮ ತೆಗೆದುಕೊಳ್ಳದೆ ಇರುವ ಬಗ್ಗೆ ಹಲವು ಬಾರಿ ಆಕ್ಷೇಪಣೆಗಳು ವ್ಯಕ್ತವಾಗಿತ್ತು. ಈ ಸಂಬಂಧ ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಎನ್.ಗೋಪಾಲಯ್ಯ ಅವರು ಬಿಬಿಎಂಪಿಗೆ ಮತ್ತೊಂದು ಪತ್ರ ಬರೆದಿದ್ದರು.
ಅಕ್ರಮ ಕಟ್ಟಡ ನಿರ್ಮಾಣ ತಡೆಯದಿದ್ದರೆ ಅಧಿಕಾರಿಗಳಿಗೆ ಭಾರೀ ದಂಡ!
ಗುತ್ತಿಗೆದಾರರ ಪಟ್ಟಿ
ಎಚ್.ಮಂಜುನಾಥ್, ಜೆ.ಎಚ್.ರುದ್ರಪ್ಪ, ಬಿ.ಎಂ.ಆನಂದ್, ಕೆ.ಎಸ್.ಭರತ್, ಎಂ.ನಾಗೇಶ್, ಎಂ.ಕೃಷ್ಣ ಮೂರ್ತಿ, ಎಂ.ನಾಗೇಶ್, ಎನ್.ಸಿ.ನಾಗರಾಜು, ಜೆ.ಎಸ್.ಶಿವಸ್ವಾಮಿ, ಜಿ.ಕುಮಾರಸ್ವಾಮಿ, ಎಂ.ಮಂಜುನಾಥ್, ಎಲ್.ಮಹೇಶ್, ಟಿ.ಜಿ.ಸುರೇಶ್, ಸಿ.ಸುಬ್ರಹ್ಮಣ್ಯ, ಆರ್.ಚಂದ್ರನಾಯ್ಕ, ಸಿ.ಕೃಷ್ಣಪ್ಪ, ಕೆ.ಜಗದೀಶ್, ಬಾಬುರಾವ್, ಟಿ.ಜಿ.ಸುರೇಶ್, ಎಂ.ಡಿ.ಶಿವಕುಮಾರ್, ಧನಂಜಯ್, ಜಿ.ಯಶೋಕುಮಾರ್, ಎಂ.ನವೀನ್, ಸಿ.ಪಿ.ಉಮೇಶ್, ಎಸ್.ಎಚ್.ಪುರುಷೋತ್ತಮ್, ಎಂ.ಕೃಷ್ಣ ಮೂರ್ತಿ, ಸಿ.ಲಕ್ಷ್ಮೇ ನಾರಾಯಣ ಹಾಗೂ ಸಿ.ಜಿ.ಚಂದ್ರಪ್ಪ ಗುತ್ತಿಗೆದಾರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸಿಐಡಿ ಶಿಫಾರಸು ಮಾಡಿದೆ.