ಭ್ರಷ್ಟ 25 ಎಂಜಿನಿಯರ್ಸ್ಸ್ ಮಾತೃ ಇಲಾಖೆಗೆ!
ಭ್ರಷ್ಟ25 ಎಂಜಿನಿಯರ್ಸ್ಸ್ ಮಾತೃ ಇಲಾಖೆಗೆ!| ಲೋಕೋಪಯೋಗಿ ಇಲಾಖೆಗೆ ವಾಪಾಸ್ ಕಳುಹಿಸಿದ ಬಿಬಿಎಂಪಿ ಆಯುಕ್ತ| ಬಹುಕೋಟಿ ಅವ್ಯವಹಾರ ಎಸಗಿದ್ದ ಅಧಿಕಾರಿಗಳು
ಬೆಂಗಳೂರು[ನ.21]: ರಾಜರಾಜೇಶ್ವರಿ ನಗರ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ 25 ಮಂದಿ ಎಂಜಿನಿಯರ್ಗಳನ್ನು ಬಿಬಿಎಂಪಿ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ 2008ರಿಂದ 2012ರ ವರೆಗಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಹುಕೋಟಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಿ ಅಕ್ರಮಗಳ ಪತ್ತೆ ಹಚ್ಚಿ ವರದಿ ನೀಡಲು ಸೂಚಿಸಿತ್ತು. ಸಮಿತಿ ನೀಡಿದ ವರದಿಯಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿತ್ತು. ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಕೈ ಜೋಡಿಸಿ ಭಾರೀ ಅಕ್ರಮ ನಡೆಸಿದ್ದಾರೆ. ಇದರಿಂದ ಪಾಲಿಕೆಗೆ ನೂರಾರು ಕೋಟಿ ರುಪಾಯಿ ನಷ್ಟವಾಗಿದೆ. ಅವರ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಕ್ರಮ ಜರುಗಿಸುವಂತೆ ಸಮಿತಿಯು ಶಿಫಾರಸು ಮಾಡಿತ್ತು.
ಅಕ್ರಮ ಕಟ್ಟಡ ನಿರ್ಮಾಣ ತಡೆಯದಿದ್ದರೆ ಅಧಿಕಾರಿಗಳಿಗೆ ಭಾರೀ ದಂಡ!
ಈ ಹಿನ್ನೆಲೆಯಲ್ಲಿ, ವರದಿಯಲ್ಲಿನ ಶಿಫಾರಸಿನಂತೆ ಸರ್ಕಾರದ ಸೂಚನೆ ಮೇರೆಗೆ ಅಕ್ರಮ ಆರೋಪ ಕೇಳಿಬಂದಿರುವ 25 ಎಂಜಿನಿಯರ್ಗಳನ್ನು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ಕುಮಾರ್ ಅವರು ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಯಾದ ಲೋಕೋಪಯೋಗಿ ಇಲಾಖೆಗೆ ವಾಪಸ್ ಕಳುಹಿಸಿ ಗುರುವಾರ ಆದೇಶ ಮಾಡಿದ್ದಾರೆ. ಅಲ್ಲದೆ, ಆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟಇಲಾಖಾ ಮುಖ್ಯಸ್ಥರಿಗೆ ಆದೇಶದಲ್ಲಿ ಕೋರಿದ್ದಾರೆ.
ವಾಪಸ್ ಹೋದವರು
ರವೀಂದ್ರ ನಾಥ್, ಪಿ.ರಾಮರಾವ್, ಶಿವರಾಮೇಗೌಡ, ಎನ್.ಆರ್.ಮಹೇಶ್, ಧರ್ಮರಾಜ್ ನಾಯಕ್, ಎಚ್.ಪಿ.ನಾಗರಾಜ್, ಎಂ.ಜೆ.ಸಿದ್ಧಿಕ್, ಎಂ.ಕೃಷ್ಣ, ಪಿ.ರವಿರಾಜ್, ಜೆ.ಎಲ್.ಕೇಶವಮೂರ್ತಿ, ಎಲ್.ರಘು, ಎಂ.ಕೆ.ಹರೀಶ್, ಚನ್ನವೀರಯ್ಯ, ಎಂ.ಎನ್.ಕಿಶೋರ್, ಎಚ್.ಕೆ.ಶ್ರೀನಿವಾಸ್, ಡಿ.ಎಸ್.ದೇವರಾಜ್, ಎಂ.ಬಿ.ಜಯಕುಮಾರ್, ಉದಯಶಂಕರ್, ದೇವರಾಜು, ಜಯಲಿಂಗಪ್ಪ, ಕೆ.ಬಿ.ನರಸಿಂಹಮೂರ್ತಿ, ಕೆ.ಪಿ.ಯೋಗೇಶ್, ಕದಿರಿಪತಿ, ಎಂ.ಬಿ.ನಾಗರಾಜ್, ಎಂ.ಜೆ.ಕುಮಾರ್ ಸೇರಿ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಎಂಜಿನಿಯರ್ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲು : ಹೊಸ ಹೆಸರೇನು ?
ಬಹುಕೋಟಿ ಅವ್ಯವಹಾರ ಎಸಗಿದ್ದ ಅಧಿಕಾರಿಗಳು
*ಮೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಕಾಮಗಾರಿಗಳಲ್ಲಿ ಅಕ್ರಮ
*2008ರಿಂದ 2012ರವರೆಗೆ ನಡೆದಿದ್ದ ಅಭಿವೃದ್ಧಿ ಕಾಮಗಾರಿಗಳು
*ನಾಗಮೋಹನ್ದಾಸ್ ಸಮಿತಿ ವರದಿಯಲ್ಲಿ ಭ್ರಷ್ಟಾಚಾರದ ಮಾಹಿತಿ
*ಗುತ್ತಿಗೆದಾರರೊಂದಿಗೆ ಸೇರಿ ಅಕ್ರಮ ನಡೆಸಿದ್ದ ಅಧಿಕಾರಿಗಳು
*ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಬಿಬಿಎಂಪಿ ಆಯುಕ್ತ ಅನಿಲ್
ಅಕ್ರಮ ನಡೆದಿದ್ದ ಕ್ಷೇತ್ರಗಳು
*ಮಲ್ಲೇಶ್ವರ, ಗಾಂಧಿನಗರ, ರಾಜರಾಜೇಶ್ವರಿ ನಗರ