ಬಿಜೆಪಿಗೆ ಅ​ಧಿಕಾರ ಕೊಟ್ಟು ಜನ ಬೇಸತ್ತು ಹೋಗಿದ್ದಾರೆ. ಈ ಬಾರಿ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ ಎಂದು ರಾಜ್ಯ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮೇಘಾ ವಿಶ್ವಾಸ ವ್ಯಕ್ತಪಡಿಸಿದರು.

 ರಬಕವಿ-ಬನಹಟ್ಟಿ (ಅ.06): ಬಿಜೆಪಿಗೆ ಅ​ಧಿಕಾರ ಕೊಟ್ಟು ಜನ ಬೇಸತ್ತು ಹೋಗಿದ್ದಾರೆ. ಈ ಬಾರಿ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ ಎಂದು ರಾಜ್ಯ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮೇಘಾ ವಿಶ್ವಾಸ ವ್ಯಕ್ತಪಡಿಸಿದರು.

ಬನಹಟ್ಟಿಎಂ.ಎಂ.ಬಂಗ್ಲೆ ಆವರಣದಲ್ಲಿ ಮಂಗಳವಾರ ತೇರದಾಳ ಮತ ಕ್ಷೇತ್ರದ ಭಾರತ ಐಕ್ಯತಾ ಯಾತ್ರೆಯ ನಿಮಿತ್ತ ಹಾಗೂ ಭಾರತ ಜೋಡೋ ಯಾತ್ರೆಯ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 70 ವರ್ಷದಿಂದ ಕಾಂಗ್ರೆಸ್‌ (Congress) ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಮೋದಿ ( PM Modi) ವಿನಾಕಾರಣ ಅಪಪ್ರಚಾರ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್‌ನಿಂದ ದೇಶಕ್ಕೆ ಏಷ್ಟೊಂದು ಒಳಿತಾಗಿದೆ ಎಂಬುವುದು ಜನಕ್ಕೆ ಗೊತ್ತಿದೆ, ಮೋದಿ ಬರೀ ಸುಳ್ಳು ಭಾಷಣ ಮಾಡಿ ಮಾತಿನಲ್ಲಿ ಮೋಡಿ ಮಾಡುತ್ತಿದ್ದಾರೆ. ಸ್ವಿಸ್‌ ಬ್ಯಾಂಕ್‌ನಿಂದ ಹಣ ತರುತ್ತೇನೆ ಎಂದು ಬರೀ ಬೊಗಳೆ ಬಿಡುವುದು ಬಿಜೆಪಿಯ ಪ್ರಮುಖ ಗುಣವಾಗಿದೆ. ಆದ್ದರಿಂದ ಈ ಬಾರಿ ಬಿಜೆಪಿ ರಾಜ್ಯದಲ್ಲಿ ನೆಲಕ್ಕಚ್ಚುವುದು ಖಚಿತ ಎಂದರು.

ತೇರದಾಳ ಕ್ಷೇತ್ರದಲ್ಲಿ ಅನೇಕರು ಟಿಕೆಟ್‌ ಆಕಾಂಕ್ಷಿಗಳಿದ್ದು, ಕಳೆದ ಸಾಲಿನಲ್ಲಿ ಮಾಜಿ ಸಚಿವೆ ಉಮಾಶ್ರೀಯವರು ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದು, ಅದನ್ನೇ ಮುಂದಿಟುಕೊಂಡು ನಾವು ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಬೇಕು. ಕ್ಷೇತ್ರದ ಜನ ತುಂಬಾ ಬದಲಾಗಿದ್ದಾರೆ. ಬಿಜೆಪಿಯ ಶಾಸಕರು ಅ​ಧಿಕಾರದ ದಾಹದಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಉಮಾಶ್ರೀಯವರ ಅವ​ಧಿಯಲ್ಲಿ ಮಂಜೂರಾದ ಕೆಲಸಗಳನ್ನೇ ಮುಗಿಸಲು ಸಾಧ್ಯವಾಗುತ್ತಿಲ್ಲ. ರೈತರು ತುಂಬಾ ತೊಂದರೆಯಲ್ಲಿದ್ದು, ಅವರ ಅಭಿವೃದ್ಧಿಗೆ ಕಿಂಚಿತ್ತು ಶಾಸಕರು ಶ್ರಮಿಸುತ್ತಿಲ್ಲ. ಇದರಿಂದ ಜನ ಈ ಬಾರಿ ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್‌ ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಕಾರ್ಯಾಧ್ಯಕ್ಷ ಗಿರೀಶ ಅಂಕಲಗಿ, ಕ್ಷೇತ್ರದ ಉಸ್ತುವಾರಿ ನಜೀರ ಕಂಗನೊಳ್ಳಿ, ಘಟಕದ ಸಂಚಾಲಕ ಸಿದ್ದು ಕೊಣ್ಣೂರ, ಡಾ.ಪದ್ಮಜೀತ ನಾಡಗೌಡಪಾಟೀಲ, ಜಿಲ್ಲಾ ಉಪಾಧ್ಯಕ್ಷ ಡಾ.ಎ.ಆರ್‌.ಬೆಳಗಲಿ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ರಾಜೇಂದ್ರ ಭದ್ರನ್ನವರ, ಅಶೋಕ ಆಲಗೊಂಡ, ಈಶ್ವರ ಚಮಕೇರಿ, ಮಾರುತಿ ಸೊರಗಾಂವಿ, ಭೀಮಸಿ ಸಸಾಲಾಟ್ಟಿ, ಹಾರೂಣ ಬೇವೂರ, ಸತ್ಯಪ್ಪ ಮಗದುಮ್‌, ಸಂಗಪ್ಪ ಕುಂದಗೋಳ, ಸಾಗರ ಹೊಸಮನಿ, ನೀಲಕಂಠ ಮುತ್ತೂರ, ಶಂಕರ ಸೊರಗಾಂವಿ, ಸಂಗಮೇಶ ಮಡಿವಾಳ, ಸಂಜು ಜೋತಾವರ, ಶಂಕರ ಕೆಸರಗೊಪ್ಪ, ಶಂಕರ ಜಾಲಿಗಿಡದ, ದಸ್ತಗಿರಸಾಬ ಕಾಗವಾಡ, ರಾಜೇಂದ್ರ ಪಾಟೀಲ,ಕಿರಣ ಕರಲಟ್ಟಿಸೇರಿದಂತೆ ಅನೇಕರಿದ್ದರು.

ಕಿಸಾನ್‌ ಘಟಕದ ವತಿಯಿಂದ ನಮ್ಮ ವ್ಯಕ್ತಿಗೆ ಟಿಕೆಟ್‌ ಸಿಗಲಿ ಅಥವಾ ಕ್ಷೇತ್ರದ ಯಾವುದೇ ವ್ಯಕ್ತಿಗೆ ಟಕೆಟ್‌ ದೊರತರೆ ಅವರ ಪರವಾಗಿ ಖಂಡಿತ ಕೆಲಸ ಮಾಡಿ ಒಟ್ಟಾರೆ ಕಾಂಗ್ರೆಸ್‌ ಗೆಲ್ಲುವಂತೆ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ. ಅ.21 ರಂದು ರಾಯಚೂರಿನಲ್ಲಿ ಜರುಗುವ ಬೃಹತ್‌ ಕಿಸಾನ್‌ ಯಾತ್ರೆಯ ಸಮಾವೇಶಕ್ಕೆ ಕ್ಷೇತ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಬೇಕು.

ಸಚಿನ್‌ ಮೇಘಾ, ರಾಜ್ಯ ಕಿಸಾನ್‌ ಘಟಕದ ಅಧ್ಯಕ್ಷರು.

ಭವಿಷ್ಯ ರಾಜಕಾರಣಕ್ಕೆ ದಿಕ್ಸೂಚಿ : 

ಚಿಕ್ಕಬಳ್ಳಾಪುರ (ಅ.06): ಎಐಸಿಸಿ ನಾಯಕ ರಾಹುಲ್‌ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೂ ಹಮ್ಮಿಕೊಂಡಿರುವ ಭಾರತ ಜೋಡೋ ಯಾತ್ರೆ ಭಾರತದ ಭವಿಷ್ಯದ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿದ್ದು, ಜಾತಿ, ಧರ್ಮದ ಹೆಸರಲ್ಲಿ ದೇಶ ವಿಭಜನೆಗೆ ಪಿತೂರಿ ನಡೆಸುವ ಕೋಮುವಾದಿಗಳಿಗೆ ತಕ್ಕಪಾಠ ಕಲಿಸಲಿದೆ ಎಂದು ಕೆಜಿಎಫ್‌ ಶಾಸಕಿ ರೂಪ ಶಶಿಧರ್‌ ತಿಳಿಸದರು.

ನಗರದ ಜಿಲ್ಲಾ ಕಾಂಗ್ರೆಸ್‌ (Congress) ಕಚೇರಿಯಲ್ಲಿ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ತೀವ್ರ ಸಂಚಲನ ಮೂಡಿಸಿದೆ. ಯಾತ್ರೆಗೆ ಸಿಗುತ್ತಿರುವ ಜನಸ್ಪಂದನೆ ನೋಡಿ ಬಿಜೆಪಿ ಹತಾಶೆಯಿಂದ ಕಾಂಗ್ರೆಸ್‌ ಪಕ್ಷದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದೆಯೆಂದು ಕಿಡಿಕಾರಿದರು.

ದೇಶದಲ್ಲಿ ಪರಿವರ್ತನೆ ತರಲಿದೆ

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧಿ ಕುಟುಂಬ ಎಂದೂ ಕೂಡ ಅಧಿಕಾರಕ್ಕಾಗಿ ರಾಜಕಾರಣ (Politics) ಮಾಡಿಲ್ಲ. ಮನೆ ಬಾಗಿಲಿಗೆ ಬಂದ ಅಧಿಕಾರವನ್ನು ತ್ಯಾಗ ಮಾಡಿದ ಕೀರ್ತಿ ಸೋನಿಯ ಗಾಂಧಿಗೆ ಸಲ್ಲುತ್ತದೆ. ದೇಶದಲ್ಲಿ ಕಾಂಗ್ರೆಸ್‌ ಮಾತ್ರ ಎಲ್ಲಾ ಜಾತಿ, ಧರ್ಮಗಳ ನಡುವೆ ಸಾಮಾರಸ್ಯ ಮೂಡಿಸಿ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಈ ಯಾತ್ರೆ ದೇಶದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪರಿವರ್ತನೆ ತರಲಿದ್ದು ಅಧಿಕಾರಕ್ಕಾಗಿ ಹಾತೊರೆಯುವ ಬಿಜೆಪಿಗೆ ಈ ಯಾತ್ರೆ ತಕ್ಕಪಾಠ ಕಲಿಸಲಿದೆ. ರಾಜ್ಯದ ಜನತೆ ಕೂಡ ಪಕ್ಷಾತೀತವಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ, ದೇಶಕ್ಕೆ ಬಿಜೆಪಿ ದೊಡ್ಡ ಅಪಾಯ ಎಂದರು.

ಪ್ರಿಯಾಂಕ ಗಾಂಧಿ ಭಾಗಿ

ಭಾರತ ಜೋಡೋ ದೇಶದ ಸ್ವಾತಂತ್ರ್ಯ ಬಳಿಕ ನಡೆಯುತ್ತಿರುವ ಅತಿ ದೊಡ್ಡ ಹಾಗೂ ಬೃಹತ್‌ ಯಾತ್ರೆ ಆಗಿದ್ದು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಕಾಣುವ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುವ ಕಾಂಗ್ರೆಸ್‌ 2023ಕ್ಕೆ ರಾಜ್ಯದಲ್ಲಿ, 2024ಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ದುರಾಡಳಿತ, ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಸಂಕಷ್ಟದಲ್ಲಿ ಮುಳಗಿದೆ. ಜನ ಬದಲಾವಣೆಗೆ ಎದುರು ನೋಡುತ್ತಿದ್ದಾರೆ. ಪ್ರಿಯಾಕಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕರಾದ ಎಸ್‌.ಎಂ.ಮುನಿಯಪ್ಪ. ಕೆ.ವಿ.ಅನುಸೂಯಮ್ಮ, ಹಿರಿಯ ಮುಖಂಡರಾದ ನಂದಿ ಅಂಜಿನಪ್ಪ, ಯಲುವಹಳ್ಳಿ ರಮೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯರಾಮ್‌, ರಾಮಕೃಷ್ಣ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌, ಮಂಚನಬಲೆ ಇಸ್ಮಾಯಿಲ್‌, ಮಹಿಳಾ ಮುಖಂಡರಾದ ಮಮತಾ ಮೂರ್ತಿ, ಯುವ ಮುಖಂಡರಾದ ಕೆ.ಎನ್‌.ರಘು, ಜಗದೀಶ್‌, ಕೋನಪಲ್ಲಿ ಕೋದಂಡ, ಅಡ್ಡಗಲ್‌ ಶ್ರೀಧರ್‌, ಪಟ್ರೇನಹಳ್ಳಿ ಕೃಷ್ಣ, ಕೆ.ಎನ್‌.ಮುನೀಂದ್ರ, ವಕೀಲ ನಾರಾಯಣಸ್ವಾಮಿ, ಚಿಂತಾಮಣಿ ಈರುಳ್ಳಿ ಶಿವಣ್ಣ, ಚಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.