Asianet Suvarna News Asianet Suvarna News

ರಾಮ​ನ​ಗರ : ಡಿಕೆಸು ನೇತೃತ್ವದಲ್ಲಿ ಕಾಂಗ್ರೆಸ್‌ ತೆಕ್ಕೆಗೆ ಸಿಕ್ಕ ಅಧಿಕಾರ

  • ಬಣ ರಾಜ​ಕೀ​ಯ​ದಿಂದಾಗಿ ತೀವ್ರ ಕುತೂ​ಹಲ ಕೆರ​ಳಿ​ಸಿದ್ದ ರಾಮ​ನ​ಗರ ನಗ​ರ​ಸಭೆ
  • ರಾಮ​ನ​ಗರ ನಗ​ರ​ಸಭೆ ​ಆ​ಡ​ಳಿ​ತದ ಚುಕ್ಕಾಣಿ ಕಾಂಗ್ರೆಸ್‌ ತೆಕ್ಕೆಗೆ 
Congress Leader  parvathamma elected as ramanagara municipality president snr
Author
Bengaluru, First Published Nov 10, 2021, 2:57 PM IST

 ರಾಮ​ನ​ಗರ (ನ.10): ಬಣ ರಾಜ​ಕೀ​ಯ​ದಿಂದಾಗಿ (politics) ತೀವ್ರ ಕುತೂ​ಹಲ ಕೆರ​ಳಿ​ಸಿದ್ದ ರಾಮ​ನ​ಗರ (ramanagara) ನಗ​ರ​ಸಭೆ ​ಆ​ಡ​ಳಿ​ತದ ಚುಕ್ಕಾಣಿ ಕಾಂಗ್ರೆಸ್‌ (Congress) ತೆಕ್ಕೆಗೆ ಬಿದ್ದಿ​ದೆ.

ನಗ​ರ​ಸಭೆ ಅಧ್ಯಕ್ಷರಾಗಿ 30ನೇ ವಾರ್ಡಿನ ಬಿ.ಸಿ.​ಪಾ​ರ್ವ​ತಮ್ಮ ಮತ್ತು ಉಪಾ​ಧ್ಯಕ್ಷರಾಗಿ 1ನೇ ವಾರ್ಡಿನ ಟಿ.ಜಯ​ಲ​ಕ್ಷ್ಮಮ್ಮ ಮಂಗಳವಾರ ನಡೆದ ಚುನಾ​ವ​ಣೆ​ಯಲ್ಲಿ ತಲಾ 9 ಮತ​ಗಳ ಅಂತ​ರ​ದಿಂದ ಗೆಲುವು ಸಾಧಿಸಿ ಆಯ್ಕೆ​ಯಾ​ಗಿ​ದ್ದಾರೆ.

ಅಧ್ಯಕ್ಷ (President) ಸ್ಥಾನಕ್ಕೆ ಸ್ಪರ್ಧೆ ಬಯಸಿ ಕಾಂಗ್ರೆಸ್‌ ನಿಂದ ಬಿ.ಸಿ.​ಪಾ​ರ್ವ​ತಮ್ಮ, 31ನೇ ವಾರ್ಡಿನ ವಿಜ​ಯ​ಕು​ಮಾರಿ, ಜೆಡಿ​ಎಸ್‌ ಪಕ್ಷ​ದಿಂದ 8ನೇ ವಾರ್ಡಿನ ಮಂಜುಳಾ ವೆಂಕ​ಟೇಶ್‌ ನಾಮ​ಪತ್ರ ಸಲ್ಲಿ​ಸಿ​ದರೆ, ಉಪಾ​ಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ನಿಂದ ಟಿ.ಜ​ಯ​ಲ​ಕ್ಷ್ಮಮ್ಮ , ಜೆಡಿ​ಎಸ್‌ನಿಂದ 21ನೇ ವಾರ್ಡಿನ ಕೆ.ರ​ಮೇಶ್‌ ಉಮೇ​ದು​ವಾ​ರಿಕೆ ಸಲ್ಲಿ​ಸಿ​ದ್ದರು.

ನಾಮ​ಪ​ತ್ರ​ಗಳ ಪರಿ​ಶೀ​ಲನೆ ನಂತರ ಉಮೇ​ದು​ವಾ​ರಿಕೆ ಹಿಂಪ​ಡೆ​ಯಲು ಅವ​ಕಾಶ ನೀಡ​ಲಾ​ಯಿತು. ಆದರೆ, ಯಾರೊ​ಬ್ಬರು ನಾಮ​ಪತ್ರ ಹಿಂಪ​ಡೆಯದ ಕಾರಣ ಚುನಾ​ವಣಾ ಪ್ರಕ್ರಿಯೆ ಪ್ರಾರಂಭ​ಗೊಂಡಿತು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ​ಸಿದ್ದ ಬಿ.ಸಿ.​ಪಾ​ರ್ವ​ತಮ್ಮ ಪರ​ ಸಂಸದ ಡಿ.ಕೆ.​ಸು​ರೇಶ್‌ (DK Suresh) ಮತ್ತು ಪಕ್ಷೇತರ ಸದಸ್ಯ ಸೇರಿ 21 ಮತ​ಗಳು ಚಲಾ​ವ​ಣೆಯಾದರೆ, ಪ್ರತಿ​ಸ್ಪರ್ಧಿ ಮಂಜುಳಾ ಪರ​ವಾಗಿ ಶಾಸ​ಕಿ ಅನಿತಾ ಸೇರಿ 12 ಮತ​ಗಳು ಲಭಿ​ಸಿ​ದವು. 9 ಮತ​ಗಳ ಅಂತ​ರ​ದಿಂದ ಪಾರ್ವತಮ್ಮ ಗೆಲು​ವಿನ ನಗೆ ಬೀರಿ​ದ​ರು. ಶೂನ್ಯ ಮತ ಸಂಪಾ​ದಿ​ಸಿದ ಮತ್ತೊರ್ವ ಅಭ್ಯರ್ಥಿ ವಿಜ​ಯ​ಕು​ಮಾರಿ ತಮ್ಮ ಮತ​ವನ್ನು ಪಾರ್ವ​ತಮ್ಮ ಅವ​ರಿಗೆ ಚಲಾ​ಯಿ​ಸಿ ಅಚ್ಚರಿ ಮೂಡಿ​ಸಿ​ದರು.

ಉಪಾ​ಧ್ಯಕ್ಷ ಸ್ಥಾನ​ದಲ್ಲಿ ಕಾಂಗ್ರೆಸ್‌ ನ ಟಿ.ಜ​ಯ​ಲ​ಕ್ಷ್ಮಮ್ಮ 21 ಮತ​ಗ​ಳನ್ನು ಪಡೆದು ಜೆಡಿ​ಎಸ್‌ನ ಕೆ.ರ​ಮೇಶ್‌ (ಪ​ಡೆ​ದ ಮತ 12) ಅವ​ರನ್ನು 9 ಮತ​ಗಳಿಂದ ಪರಾ​ಭ​ವ​ಗೊ​ಳಿ​ಸಿ​ದರು.

ಈ ಚುನಾ​ವ​ಣೆ​ಯಲ್ಲಿ (Election) ವರಿ​ಷ್ಠರ ಲೆಕ್ಕಾ​ಚಾ​ರ​ಗ​ಳನ್ನು ತಲೆ​ಕೆ​ಳ​ಗಾ​ಗಿ​ಸುವ ಮೂಲಕ ಮೇಲುಗೈ ಸಾಧಿ​ಸಲು ಕಾಂಗ್ರೆಸ್‌ ನ ಒಂದು ಬಣ ನಿರ್ಧ​ರಿ​ಸಿತ್ತು. ಸಭಾಂಗಣ ಪ್ರವೇ​ಶಿ​ಸುವ ಸಂದ​ರ್ಭ​ದಲ್ಲಿ ಕಾಂಗ್ರೆಸ್‌ ನ 19 ಸದ​ಸ್ಯರ ನಡುವೆ ಸಮ​ನ್ವ​ಯತೆ ಕೊರತೆ ಎದ್ದು ಕಂಡಿತು.

ಕಾಂಗ್ರೆಸ್‌ ನಲ್ಲಿ ಸಾಕಷ್ಟುಗೊಂದಲ ಇರು​ವುದನ್ನು ಸೂಕ್ಷ್ಮ​ವಾಗಿ ಗಮ​ನಿ​ಸಿದ್ದ ಜೆಡಿ​ಎಸ್‌ (JDS) ನಾಯ​ಕರು ಭಿನ್ನ​ಮ​ತದ ಲಾಭ ಪಡೆದು ಫಲಿ​ತಾಂಶವನ್ನೇ ತಲೆ​ಕೆ​ಳ​ಗಾ​ಗಿ​ಸುವ ಲೆಕ್ಕಾ​ಚಾರ ಹಾಕಿ​ದ್ದರು. ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಚುನಾ​ವ​ಣೆ​ಯಲ್ಲಿ ಪಾಲ್ಗೊ​ಳ್ಳಲು ಆಗ​ಮಿ​ಸು​ತ್ತಿ​ದ್ದಂತೆ ಜೆಡಿ​ಎಸ್‌ ಪಾಳ​ಯ​ದಲ್ಲಿ ಉತ್ಸಾಹ ಕಂಡು ಬಂದಿತು.

ಆದರೆ, ಸಂಸದ ಡಿ.ಕೆ.​ಸು​ರೇಶ್‌ ರವರು ಖುದ್ದಾಗಿ ಚುನಾ​ವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಾವುದೇ ಅಚ್ಚ​ರಿಯ ಬೆಳ​ವ​ಣಿ​ಗೆ​ಗ​ಳಿಗೆ ಅವ​ಕಾಶ ನೀಡಲೇ ಇಲ್ಲ.

ಮೊದಲ ಸರದಿ ಅಧ್ಯಕ್ಷ - ಉಪಾ​ಧ್ಯಕ್ಷ ಸ್ಥಾನ ತನಗೇ ಬೇಕೆಂದು ಪಟ್ಟು ಹಿಡಿದು , ಸ್ವಪ​ಕ್ಷೀಯ ನಾಯ​ಕ​ರಿಗೆ ಸೆಡ್ಡು ಹೊಡೆ​ದಿದ್ದ ಎರಡೂ ಬಣ​ಗ​ಳ ಸದ​ಸ್ಯ​ರು ಅಂತಿ​ಮ​ವಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ರವರ ಅಣ​ತಿ​ಯಂತೆ ನಡೆ​ದು​ಕೊಂಡ​ರು.

ಅಧಿ​ಕಾರ ಹಂಚಿಕೆ ಸೂತ್ರ:

ನಗ​ರ​ಸಭೆ ಅಧ್ಯಕ್ಷ ಗಾದಿ ತಲಾ 7 ತಿಂಗ​ಳಂತೆ ನಾಲ್ವರಿಗೆ ಹಾಗೂ ಉಪಾ​ಧ್ಯಕ್ಷ ಸ್ಥಾನ 14 ಮತ್ತು 16 ತಿಂಗ​ಳಂತೆ ಇಬ್ಬ​ರಿಗೆ ಹಂಚಿಕೆ ಮಾಡ​ಲಾ​ಗಿದೆ. ಕಾಂಗ್ರೆಸ್‌ ನ ಹಿರಿಯ ನಾಯ​ಕರ ಬಣ ಸೂಚಿ​ಸಿದ್ದ ಪಾರ್ವ​ತಮ್ಮ ಮೊದಲು 7 ತಿಂಗಳು ಅವಧಿ ಪೂರೈ​ಸಿದ ನಂತರ ಜಿಪಂ (zilla Panchayat) ಮಾಜಿ ಅಧ್ಯಕ್ಷ ಇಕ್ಬಾಲ್‌ ಬಣದಲ್ಲಿ ಗುರು​ತಿ​ಸಿ​ಕೊಂಡಿ​ರುವ ವಿಜ​ಯ ​ಕು​ಮಾರಿ ಎರ​ಡನೇ ಅವ​ಧಿಗೆ ಗದ್ದುಗೆ ಅಲಂಕ​ರಿ​ಸು​ವರು. ಇನ್ನಿ​ಬ್ಬರು ಆಕಾಂಕ್ಷಿ​ಗ​ಳಿಗೆ ಉಳಿದ ಅವ​ಧಿ​ ಹಂಚಿಕೆ ಮಾಡ​ಲಾ​ಗಿದೆ.

ಅದೇ ರೀತಿ ಉಪಾ​ಧ್ಯಕ್ಷ ಸ್ಥಾನ ಅಲಂಕ​ರಿ​ಸಿ​ರುವ ಇಕ್ಬಾಲ್‌ ಬಣದ ಜಯ​ಲ​ಕ್ಷ್ಮಮ್ಮ 14 ತಿಂಗಳು ಹಾಗೂ ಹಿರಿಯ ನಾಯ​ಕರ ಬಣದ ಸೋಮ​ಶೇ​ಖರ್‌ ಉಳಿದ 16 ತಿಂಗಳ ಅವ​ಧಿಗೆ ಅವಕಾಶ ನೀಡುವ ನಿರ್ಧಾ​ರ​ವನ್ನು ಕಾಂಗ್ರೆಸ್‌ ವರಿಷ್ಠರು ಕೈಗೊಂಡಿ​ದ್ದಾರೆ ಎನ್ನ​ಲಾ​ಗಿ​ದೆ.

ಕೈ ನಾಯ​ಕ​ರಲ್ಲಿ ಮೂಡದ ಒಗ್ಗಟ್ಟು

ನಗ​ರ​ಸಭೆ ಅಧ್ಯಕ್ಷ - ಉಪಾ​ಧ್ಯಕ್ಷ ಚುನಾ​ವಣೆಯನ್ನು ಪ್ರತಿ​ಷ್ಠೆ​ಯಾಗಿ ತೆಗೆ​ದು​ಕೊಂಡಿದ್ದ ಕಾಂಗ್ರೆಸ್‌ ಪಾಳ​ಯ​ದ ಎರಡು ಬಣ​ಗ​ಳಲ್ಲಿ ಒಗ್ಗಟ್ಟು ಮೂಡಲೇ ಇಲ್ಲ.

ಒಂದು ಬಣ ಮೇಲುಗೈ ಸಾಧಿ​ಸಲೇ ಬೇಕೆಂದು ಹಠಕ್ಕೆ ಬಿದ್ದು ನಗ​ರ​ಸ​ಭೆ​ಯಲ್ಲಿ ಜೆಡಿ​ಎಸ್‌ ನೊಂದಿಗೆ ಅಧಿ​ಕಾರ ಹಂಚಿ​ಕೆಗೂ ಮಾತು​ಕತೆ ನಡೆ​ಸಿತ್ತು. ಇದಕ್ಕೆ ಪುಷ್ಠಿ ನೀಡು​ವಂತೆ ಒಂದು ಬಣದ 9 ಮಂದಿ ಸದ​ಸ್ಯರು ಕಾಂಗ್ರೆಸ್‌ ಅಭ್ಯರ್ಥಿ ಪಾರ್ವ​ತಮ್ಮ ಪರ​ವಾಗಿ ಮತ ಚಲಾ​ಯಿ​ಸಲು ತೀವ್ರ ವಿರೋಧ ವ್ಯಕ್ತ​ಪ​ಡಿ​ಸಿ​ ಸಭೆ​ಯಿಂದ ಹೊರ ಬಂದಿದ್ದ​ರು.

ಇದೆ​ಲ್ಲ​ವನ್ನು ಗಮ​ನಿ​ಸಿದ ಸಂಸದ ಡಿ.ಕೆ.​ಸು​ರೇಶ್‌ ಚುನಾ​ವಣೆ ಪ್ರಕ್ರಿ​ಯೆ​ಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಸದ​ಸ್ಯ​ರೆ​ಲ್ಲರು ವರಿ​ಷ್ಠರ ಸೂಚಿ​ಸಿದ ಅಭ್ಯರ್ಥಿ ಪರ​ವಾಗಿ ಮತ ಚಲಾ​ವ​ಣೆ​ಯಾ​ಗು​ವಂತೆ ನೋಡಿ​ಕೊಂಡರು. ಚುನಾ​ವ​ಣೆ ಮುಗಿದ ನಂತರ ಸುರೇಶ್‌ ಅವ​ರತ್ತ ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ, ಕೆಪಿ​ಸಿಸಿ ಪ್ರಧಾನ ಕಾರ್ಯ​ದರ್ಶಿ ಜಿಯಾ​ವುಲ್ಲಾ ಸುಳಿ​ಯ​ಲಿ​ಲ್ಲ.

ನಗ​ರ​ಸಭೆ ಬಳಿಗೆ ಧಾವಿ​ಸಿ​ದ​ ಇಕ್ಬಾಲ್‌ ಹುಸೇನ್‌ ರವರು ಹಿರಿಯ ನಾಯ​ಕ​ರತ್ತ ತಿರು​ಗಿಯೂ ನೋಡ​ಲಿಲ್ಲ. ನೂತನ ಅಧ್ಯ​ಕ್ಷೆ ಬಿ.ಸಿ.​ಪಾ​ರ್ವ​ತಮ್ಮ ಮತ್ತು ಉಪಾ​ಧ್ಯಕ್ಷೆ ಜಯ​ಲ​ಕ್ಷ್ಮಮ್ಮ ಅವ​ರನ್ನು ಅಭಿ​ನಂದಿ​ಸ​ಲಿಲ್ಲ. ನಗ​ರ​ಸ​ಭೆ​ಯಿಂದ ಹೊರ ಬಂದ ಸಂಸದ ಡಿ.ಕೆ.​ಸು​ರೇಶ್‌ ಅವ​ರೊಂದಿಗೆ ತೆರ​ಳಿ​ದರು.

ಬಂದ ದಾರಿಗೆ ಸುಂಕ ಇಲ್ಲ​ದಂತಾ​ಯಿತು!

ಕಾಂಗ್ರೆಸ್‌ನಲ್ಲಿನ ಬಣ ರಾಜ​ಕೀ​ಯ​ದಿಂದಾಗಿ ನಗ​ರ​ಸಭೆಯಲ್ಲಿ ಅಧಿ​ಕಾರ ಹಿಡಿ​ಯುವ ಸಣ್ಣ ಆಸೆ​ಯೊಂದು ಜೆಡಿ​ಎಸ್‌ ಪಾಳ​ಯ​ದಲ್ಲಿ ಚಿಗು​ರಿತ್ತು.

ಕೈ ಬಣದ ಬೆಂಬ​ಲ​ದೊಂದಿಗೆ ಅಧ್ಯಕ್ಷ - ಉಪಾ​ಧ್ಯಕ್ಷ ಸ್ಥಾನ​ಗ​ಳನ್ನು ಹಂಚಿ​ಕೊ​ಳ್ಳುವ ಮಾತು​ಗಳು ಕೇಳಿ ಬಂದಿ​ದ್ದವು. ಹೀಗಾಗಿ ನಗ​ರ​ಸಭೆ ಬಳಿ ಜಮಾ​ಯಿ​ಸಿದ್ದ ಜೆಡಿ​ಎಸ್‌ ಮುಖಂಡರು ಹಾಗೂ ಕಾರ್ಯ​ಕ​ರ್ತರ ನಡೆ ಕುತೂ​ಹ​ಲ​ ಮೂಡಿ​ಸಿತ್ತು.

ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಚುನಾ​ವಣೆ ಪ್ರಕ್ರಿ​ಯೆ​ಯಲ್ಲಿ ಆಗ​ಮಿ​ಸು​ತ್ತಿ​ದ್ದಂತೆ ಜೆಡಿ​ಎಸ್‌ ಪಾಳ​ಯ​ದಲ್ಲಿ ಚಟು​ವ​ಟಿಕೆ ಚುರುಕು ಪಡೆ​ಯಿತು. ಅಧಿ​ಕಾರ ಗ್ಯಾರೆಂಟಿ ಎಂದು ಭಾವಿ​ಸಿದ ಕಾರ್ಯ​ಕ​ರ್ತರು ಉತ್ಸಾ​ಹ​ದಿಂದ ಹೂವಿನ ಹಾರ, ಪಟಾ​ಕಿ​ಗಳ ಸಿದ್ಧತೆ ಮಾಡಿ​ಕೊ​ಳ್ಳ​ಲು ಅಣಿ​ಯಾ​ದರು.

ಆದರೆ, ಚುನಾ​ವ​ಣೆ​ಯಲ್ಲಿ ಯಾವುದೇ ಚಮ​ತ್ಕಾರ ನಡೆಯದ ಕಾರಣ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಬಂದ ದಾರಿಗೆ ಸುಂಕ ಇಲ್ಲ​ದಂತಾಗಿ ಹೊರ ನಡೆ​ದರು. ಜೆಡಿ​ಎಸ್‌ ನಾಯ​ಕರು ಒಬ್ಬೊ​ಬ್ಬ​ರಾಗಿ ಕಾಲ್ಕಿ​ತ್ತ​ರು.

ಎಲ್ಲಾ ದಿನವೂ ಕುಡಿ​ವ ನೀರು ಸರ​ಬ​ರಾ​ಜಿಗೆ ಕ್ರಮ: ಬಿ.ಸಿ.​ಪಾ​ರ್ವ​ತ​ಮ್ಮ

ರಾಮ​ನ​ಗ​ರ:  ಮುಂದಿನ ಒಂದು ವರ್ಷ​ದೊ​ಳಗೆ ವಾರದ ಎಲ್ಲಾ ದಿನವೂ ಕುಡಿ​ಯುವ ನೀರು ಸರ​ಬ​ರಾಜು ಯೋಜನೆ ಜಾರಿಗೆ ಬರ​ಲಿದೆ ಎಂದು ನಗ​ರ​ಸ​ಭೆ ನೂತನ ಅಧ್ಯಕ್ಷೆ ಬಿ.ಸಿ.​ಪಾ​ರ್ವ​ತಮ್ಮ ತಿಳಿ​ಸಿ​ದ​ರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವರು, ನಗರ ಬೆಳೆ​ಯು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಸಮ​ಸ್ಯೆ​ಗಳು ಹೆಚ್ಚಾ​ಗು​ತ್ತಿವೆ. ನಗರ ವ್ಯಾಪ್ತಿ​ಯಲ್ಲಿ ಸ್ವಚ್ಛತೆ, ಕುಡಿ​ಯುವ ನೀರು ಮತ್ತು ಮೂಲ ಸೌಕ​ರ್ಯ​ಗ​ಳಿಗೆ ಮೊ​ದಲ ಆದ್ಯತೆ ನೀಡು​ತ್ತೇನೆ ಎಂದರು.

ತಮ್ಮ ಅಧ್ಯ​ಕ್ಷಾ​ವ​ಧಿ​ಯಲ್ಲಿ ಎಲ್ಲಾ ಸದ​ಸ್ಯ​ರನ್ನು ಮತ್ತು ಅಧಿ​ಕಾರಿ ವರ್ಗ​ವನ್ನು ವಿಶ್ವಾ​ಸಕ್ಕೆ ತೆಗೆ​ದು​ಕೊಂಡು ಉತ್ತಮ ಆಡ​ಳಿತ ನೀಡುತ್ತೇನೆ. ನಗರದ ಸಮ​ಸ್ಯೆ​ಗಳ ಪರಿ​ಹಾ​ರಕ್ಕೆ ಶಾಸ​ಕ​ರಾದ ಅನಿತಾ ಕುಮಾ​ರ​ಸ್ವಾ​ಮಿ​ಯ​ವರು ಸ್ಪಂದಿ​ಸುವ ವಿಶ್ವಾ​ಸ​ವಿದೆ. ಇನ್ನೊಂದೆಡೆ ಸರ್ಕಾ​ರ​ದಿಂದ ಸವ​ಲ​ತ್ತು​ಗ​ಳಿ​ಗಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ಅವರ ಮಾರ್ಗ​ದ​ರ್ಶ​ನ​ವನ್ನು ಸಹ ಪಡೆ​ಯು​ವು​ದಾಗಿ ತಿಳಿ​ಸಿ​ದರು.

ತಾವು ನಗ​ರ​ಸ​ಭೆಗೆ 3ನೇ ಬಾರಿಗೆ ಆಯ್ಕೆ​ಯಾ​ಗಿದ್ದೇನೆ. 1995ರಲ್ಲಿ ಪುರ​ಸ​ಭೆಗೆ ಆಯ್ಕೆ​ಯಾ​ಗಿದ್ದ ವೇಳೆ ಆರೋಗ್ಯ ಸಮಿ​ತಿಯ ಅಧ್ಯ​ಕ್ಷ​ರಾಗಿ 5 ವರ್ಷ​ಗಳ ಕಾಲ ಕರ್ತವ್ಯ ನಿರ್ವ​ಹಿ​ಸಿದ ಅನು​ಭ​ವ​ವಿದೆ. ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟ​ಕದ ಅಧ್ಯ​ಕ್ಷ​ರಾಗಿ ರಾಜ​ಕೀಯ ಅನು​ಭ​ವವೂ ಇದೆ. ಕನ್ನಡ ಸಾಹಿತ್ಯ ಪರಿ​ಷತ್ತು, ಸೇವಾ​ದಳ ಸಂಘ​ಟ​ನೆ​ಗ​ಳಲ್ಲಿ ಸಕ್ರಿ​ಯ​ವಾಗಿ ತೊಡ​ಗಿ​ಸಿ​ಕೊಂಡಿದ್ದು, ಅಂತಾ​ರಾ​ಷ್ಟ್ರೀಯ ಅಥ್ಲೆ​ಟಿಕ್ಸ್‌ ಸ್ಪರ್ಧೆ​ಗ​ಳಲ್ಲಿ ಭಾಗ​ವ​ಹಿ​ಸಿದ್ದ ಅನು​ಭ​ವ​ಗಳು ತಮ್ಮನ್ನು ಸಾರ್ವ​ಜ​ನಿಕ ಸೇವೆ​ಯಲ್ಲಿ ತೊಡ​ಗಿ​ಸಿ​ಕೊ​ಳ್ಳು​ವಂತೆ ಮಾಡಿದೆ ಎಂದು ಪಾರ್ವ​ತಮ್ಮ ಹೇಳಿದರು.

ರಾಮ​ನ​ಗರ ನಗ​ರ​ಸ​ಭೆ ಅಧ್ಯಕ್ಷ - ಉಪಾ​ಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಕ್ಷದ ಸದ​ಸ್ಯ​ರಿಗೆ ಲಭ್ಯ​ವಾ​ಗಿದೆ. ನಗ​ರದ ಒಟ್ಟಾರೆ ಅಭಿ​ವೃದ್ಧಿಗೆ ಬದ್ಧ​ರಾಗಿ ಎಲ್ಲರು ಒಗ್ಗ​ಟ್ಟಾಗಿ ಕೆಲಸ ಮಾಡಲು ಸೂಚಿ​ಸ​ಲಾ​ಗಿದೆ. ಅಧಿ​ಕಾರ ಹಿಡಿ​ಯುವ ಆಸೆ ಎಲ್ಲ​ರಿಗೂ ಇದ್ದೇ ಇರು​ತ್ತದೆ. ತಮ್ಮ ಪಕ್ಷದ ಇಬ್ಬ​ರು ಅಭ್ಯ​ರ್ಥಿ​ಗಳು ಸಹ ಇದೇ ಕಾರ​ಣಕ್ಕೆ ಅಧ್ಯಕ್ಷ ಸ್ಥಾನಕ್ಕೆ ನಾಮ​ಪ​ತ್ರ ಸಲ್ಲಿ​ಸಿ​ದ್ದರು. ಆದರೆ, ಪಕ್ಷದ ನಿರ್ಧಾ​ರಕ್ಕೆ ಎಲ್ಲರೂ ಬದ್ಧ​ರಾಗಿ, ಬಿ.ಸಿ.​ಪಾ​ರ್ವ​ತಮ್ಮ ಅವ​ರನ್ನು ಅಧ್ಯ​ಕ್ಷ​ರ​ನ್ನಾಗಿ, ಉಪಾ​ಧ್ಯ​ಕ್ಷ​ರ​ನ್ನಾಗಿ ಟಿ.ಜ​ಯ​ಲ​ಕ್ಷಮ್ಮ ಅವ​ರನ್ನು ಆಯ್ಕೆ ಮಾಡಿ​ದ್ದಾರೆ.

- ಡಿ.ಕೆ.​ಸು​ರೇಶ್‌, ಸಂಸ​ದರು,ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ.

Follow Us:
Download App:
  • android
  • ios