'ಸಂಸದ ಪ್ರತಾಪ್ ಸಿಂಹರ ಬೇಳೆ ಬೇಯುವುದಿಲ್ಲ'
ರಾಜ್ಯದಲ್ಲಿ ಅಮಾಯಕರ ಶವದ ಮೇಲೆ ರಾಜಕಾರಣ ಮಾಡುವುದನ್ನು ಮೊದಲಿಗೆ ಹೇಳಿಕೊಟ್ಟಿದ್ದು ಸಂಸದರಾದ ಶೋಭಾ ಕರಂದ್ಲಾಜೆ, ನವೀನ್ ಕುಮಾರ್ ಕಟೀಲ್ ಅವರು, ಈಗ ಸಂಸದ ಪ್ರತಾಪ್ ಸಿಂಹ ಅವರೂ ಇದೇ ದಾರಿಯಲ್ಲಿ ಸಾಗಿದ್ದು, ಇವರ ಬೇಳೆ ಬೇಯುವುದಿಲ್ಲ
ಮೈಸೂರು[ಸೆ.21]: ಸಚಿವ ಡಿ.ಕೆ. ಶಿವಕುಮಾರ್ ಅವರಂತಹ ಸಮರ್ಥ ನಾಯಕರಿಗೆ ಸಮಸ್ಯೆ ತಂದೊಡ್ಡುವ ಮೂಲಕ ಕಾಂಗ್ರೆಸ್ ಪಕ್ಷದ ಬೆನ್ನುಮೂಳೆ ಮುರಿಯಬಹುದು ಅಂದುಕೊಂಡಿರುವ ಬಿಜೆಪಿಯವರಿಗೆ ಕೇವಲ ಭ್ರಮನಿರಸನವಾಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರೊ. ಕೆ.ಇ. ರಾಧಾಕೃಷ್ಣ ವ್ಯಂಗ್ಯವಾಡಿದರು.
ಬಿಜೆಪಿ ರಾಷ್ಟ್ರೀಯ ಅಮಿತ್ ಶಾ ಅವರ ಪುತ್ರ ಕೇವಲ ಹತ್ತು ಸಾವಿರ ಬಂಡವಾಳದೊಂದಿಗೆ ವಾಣಿಜ್ಯ ಚಟುವಟಿಕೆ ಆರಂಭಿಸಿದವರು. ಆದರೆ, ಈಗ ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ಗಣಿಗಾರಿಕೆ ನಡೆಸಲು ಹಣ ಹೇಗೆ ಬಂತು ಎಂಬುದನ್ನು ತಿಳಿಸಬೇಕು. ಚೆಕ್ ಮೂಲಕ ಲಂಚ ಪಡೆದ ಯಡಿಯೂರಪ್ಪ ಅಂತಹವರನ್ನು ಹೊಂದಿರುವ ಬಿಜೆಪಿ ನಾಯಕರಿಗೆ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಲು ಯಾವ ನೈತಿಕ ಹಕ್ಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕಾಂಗ್ರೆಸ್ ಎಂದೂ ಅಬ್ಬರದ ಗಂಟಲನ್ನು ಪ್ರದರ್ಶಿಸುವುದಿಲ್ಲ. ಆದರೆ, ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಮಾಯಕರನ್ನು ಸುಳ್ಳಿನ ಮೂಲಕ ತಮ್ಮ ಭಕ್ತರಂತೆ ಪರಿವರ್ತಿಸುತ್ತಿದ್ದಾರೆ. ಅವರ ಬಗ್ಗೆ ಜನರಿಗೆ ಭ್ರಮನಿರಸನವಾಗಿ ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆಂಬ ಕಾರಣ ದಿಂದಲೇ ಆರ್ಎಸ್ಎಸ್ ವರಿಷ್ಠರು ಈಗ ಕಾಂಗ್ರೆಸ್ ಹೊಗಳಲಾರಂಭಿಸಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಅಮಾಯಕರ ಶವದ ಮೇಲೆ ರಾಜಕಾರಣ ಮಾಡುವುದನ್ನು ಮೊದಲಿಗೆ ಹೇಳಿಕೊಟ್ಟಿದ್ದು ಸಂಸದರಾದ ಶೋಭಾ ಕರಂದ್ಲಾಜೆ, ನವೀನ್ ಕುಮಾರ್ ಕಟೀಲ್ ಅವರು, ಈಗ ಸಂಸದ ಪ್ರತಾಪ್ ಸಿಂಹ ಅವರೂ ಇದೇ ದಾರಿಯಲ್ಲಿ ಸಾಗಿದ್ದು, ಇವರ ಬೇಳೆ ಬೇಯುವುದಿಲ್ಲ ಎಂದು ಅವರು ಕುಟುಕಿದರು.
ಕೋಮು ವಿಚಾರವನ್ನು ಬಳಸಿಕೊಳ್ಳುವುದು ಬಿಜೆಪಿ ಜಾಯಮಾನ. ಹೀಗಾಗಿಯೇ, ಲೋಕಸಭಾ ಚುನಾವಣೆಗೆ ಕೇವಲ 6 ತಿಂಗಳು ಇರುವಾಗ ತ್ರಿವಳಿ ತಲಾಖ್ ವಿಷಯ ಕೆದಕಿದ್ದಾರೆ. ಇವರಿಗೆ ಆ ಬಗ್ಗೆ ಕಾಳಜಿ ಇದ್ದಿದ್ದಲ್ಲಿ ಮೊದಲೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಕಾಂಗ್ರೆಸ್ ವಿರೋಧವಿದೆ. ಯಾವುದೇ ವಿಷಯದಲ್ಲಿ ಹಿಂಸೆಯ ಬಳಕೆಯನ್ನು ಕಾಂಗ್ರೆಸ್ ಪ್ರತಿರೋಧಿಸುತ್ತದೆ ಎಂದರು.
ವಿಧಾನಸಭಾ ಚುನಾವಣಾ ಫಲಿತಾಂಶ ಬರುವ ಕೆಲವು ಗಂಟೆ ಮೊದಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಜಾತ್ಯಾತೀತ ತತ್ವ ಸಿದಾಟಛಿಂತ ಗಮನಿಸಿ ಕಾಂಗ್ರೆಸ್ ಅವರೊಡನೆ ಸಂಪರ್ಕದಲ್ಲಿತ್ತು. ಚುನಾವಣೆಯಲ್ಲಿ ಪರಸ್ಪರ ಎದುರಾಗಿ ಹೋರಾಡಿದ್ದರೂ ಸೈದಾತಿಕತೆ ಅಡಿಯಲ್ಲಿ ಮೈತ್ರಿ ಮಾಡಿ ಕೊಂಡಿದ್ದು, ಸರ್ಕಾರ ಸುಭದ್ರವಾಗಿದೆ ಎಂದು ಅವರು ಹೇಳಿದರು.
ಮಾಜಿ ಶಾಸಕ ವಾಸು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ. ವೆಂಕಟೇಶ್, ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ ಇದ್ದರು.