ಪ್ರಧಾನಿಯವರಿಗೆ ಇಲ್ಲಿನ ಸಂಘಟಕರು, ಬಿಜೆಪಿ ಮುಖಂಡರು ಇಲ್ಲಿನ ಇತಿಹಾಸದ ಮಾಹಿತಿ ನೀಡುವಲ್ಲಿ ಎಡವಿದ್ದಾರೆ ಎಂಬುದಕ್ಕೆ ಆಗಿರುವ ಈ ಘಟನೆಯೇ ಸಾಕ್ಷಿ ಎಂದು ಬೇಸರ ಹೊರಹಾಕಿದ್ದಾರೆ. ಈ ಬೆಳವಣಿಗೆಯನ್ನು ಉಗ್ರವಾಗಿ ಖಂಡಿಸೋದಾಗಿ ಹೇಳಿದ ಅಲ್ಲಂಪ್ರಭು ಪಾಟೀಲ್‌ 

ಕಲಬುರಗಿ(ಜ.22): ಮಳಖೇಡಕ್ಕೆ ಆಗಮಿಸಿ ಅಲೆಮಾರಿಗಳಿಗೆ ಹಕ್ಕುಪತ್ರ ನೀಡುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆ ಪ್ರದೇಶದ ಸಮಾಜ ಸುಧಾರಕರು, ಮಹಾತ್ಮರು ಆಗಿರುವ ಮಳಖೇಡದ ಜಯತೀರ್ಥರು, ಬಿಜನಳ್ಳಿ ಹರಳಯ್ಯ ಹಾಗೂ ಅವರ ಹೆಸರಲ್ಲಿರುವ ಪುಣ್ಯಕ್ಷೇತ್ರವನ್ನು ಸ್ಮರಿಸದೆ ಮರೆತಿದ್ದರಿಂದ ಈ ಮಹಾತ್ಮರನ್ನು ಆರಾಧಿಸುವ ಲಕ್ಷಾಂತರ ಭಕ್ತರಿಗೆ ನಿರಾಶೆಯಾಗಿದೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್‌ ವಿಷಾದಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಧಾನಿಯವರಿಗೆ ಇಲ್ಲಿನ ಸಂಘಟಕರು, ಬಿಜೆಪಿ ಮುಖಂಡರು ಇಲ್ಲಿನ ಇತಿಹಾಸದ ಮಾಹಿತಿ ನೀಡುವಲ್ಲಿ ಎಡವಿದ್ದಾರೆ ಎಂಬುದಕ್ಕೆ ಆಗಿರುವ ಈ ಘಟನೆಯೇ ಸಾಕ್ಷಿ ಎಂದು ಬೇಸರ ಹೊರಹಾಕಿದ್ದಾರೆ. ಈ ಬೆಳವಣಿಗೆಯನ್ನು ಉಗ್ರವಾಗಿ ಖಂಡಿಸೋದಾಗಿ ಹೇಳಿದ್ದಾರೆ.

ತಾಂಡಾ‌ ನಿವಾಸಿಗಳಿಗೆ‌ ದಾಖಲೆ ಪ್ರಮಾಣದಲ್ಲಿ ಹಕ್ಕುಪತ್ರ: ಕಲಬುರಗಿ ಡಿಸಿಗೆ ಸಭಾಪತಿ ಪ್ರಶಂಸೆ

ಕಾಂಗ್ರೆಸ್‌ ಸರ್ಕಾರದಲ್ಲಿಯೇ ತಾಂಡಾಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡುವ ನಿರ್ಣಯವಾಗಿದ್ದರೂ ಅದನ್ನು ತಾವೇ ಮಾಡಿದ್ದಾಗಿ ಹೇಳಿಕೊಂಡು ಬಿಜೆಪಿ ಚುನಾವಣೆ ಗಿಮಿಕ್‌ ಮಾಡಿದೆ. ಮಳಖೇಡದ ಪ್ರಧಾನಿ ಸಮಾರಂಭಕ್ಕೂ ಮುಂಚೆ ಅಲ್ಲಿನ ವೇದಿಕೆಗಳಲ್ಲಿ ಅಶ್ಲೀಲ, ಧ್ವಂಧ್ವ ಅರ್ಥದ ಹಾಡು, ಕುಣಿತ ನಡೆಸಲಾಗಿದೆ. ಸರ್ಕಾರದ ಸಮಾರಂಭದಲ್ಲಿ ಇದು ಸರಿಯೆ? ಸರ್ಕಾರದ ಹಣ ಹೀಗೆ ಅಪವ್ಯಯ ಮಾಡೋದು ಸರಿಯೆ? ಪ್ರಧಾನಿ ಮೋದಿ ಸಮಾರಂಭದಲ್ಲಿ ದೇಶಭಕ್ತಿ ಗೀತೆ, ರೈತ ಗೀತೆ, ನಾಡಗೀತೆ, ಜನಪದ ಗೀತೆಗಳನ್ನು ಹಾಡಿಸುವುದು ಬಿಟ್ಟು ಧ್ವಂಧ್ವ ಅರ್ಥದ ಪದಗಳನ್ನು ಹಾಡಿಸಿ ಮೋದಿ ಸಮಾರಂಭವನ್ನು ಮ್ಯೂಸಿಕಲ್‌ ನೈಟ್‌ ರೀತಿ ಆಯೋಜಿಸಿದ್ದಾರೆ ಎಂದು ಅಲ್ಲಂಪ್ರಭು ಪಾಟೀಲ್‌ ಖಂಡಿಸಿದ್ದಾರೆ.