ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಸಿದ್ದರಾಮಯ್ಯನವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಾದಾಮಿ ಕ್ಷೇತ್ರದ ಗೆಲುವಿಗೆ ಹಣದ ವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ದಲಿತರನ್ನು ಮುಖ್ಯಮಂತ್ರಿ ಮಾಡುವಂತೆಯೂ ಒತ್ತಾಯಿಸಿದ್ದಾರೆ.

ಮೈಸೂರು (ಆ.9): ದಿವಂಗತ ವೈ. ರಾಮಕೃಷ್ಣ ಅವರ ಸಾಧನೆಗಳ ವಿಚಾರ ಸಂಕೀರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದು ಮತದಾರರಿಗೆ ಹಣ ನೀಡಿ ಎಂದು ಹೇಳಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನ ಕೆ.ಎಸ್.ಓ.ಯು ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಇಬ್ರಾಹಿಂ, ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಸಾಕು. ಇನ್ನು ದಲಿತರನ್ನು ಮುಖ್ಯಮಂತ್ರಿ ಮಾಡಿ. ಸಿದ್ದರಾಮಯ್ಯ ದಲಿತರ ಮತಗಳಿಂದಲೇ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲುವ ಹಂತದಲ್ಲಿದ್ದರು. ಆಗ ನಾನು ಮತ್ತು ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು ಎಂದು ಇಬ್ರಾಹಿಂ ನೇರವಾಗಿ ಆರೋಪಿಸಿದ್ದಾರೆ. 'ಕೌಂಟಿಂಗ್ ದಿನ ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದರು. ಆಗ ನಾನು ಮ್ಯಾನೇಜ್ ಮಾಡಿದ್ದೇನೆ, 800-1000 ಚಿಕ್ಕ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಹೇಳಿದ್ದೆ. ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು' ಎಂದು ವಿವರಿಸಿದ್ದಾರೆ.

ಈ ಬಗ್ಗೆ ಮಾತನಾಡಲು ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದ ಇಬ್ರಾಹಿಂ,ಮುಂದೆ ದೇಶದಲ್ಲಿ ಬಹಳ ಕೆಟ್ಟ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ. ದಲಿತರು ಒಗ್ಗಟ್ಟಿನಿಂದ ಇರಿ. ಕಾಲೇಜು ಮಟ್ಟದಲ್ಲಿ ಸಂಘಟನೆ ಮಾಡಿ.ತಾಲೂಕು ಮಟ್ಟದಿಂದ ಮೇಲೆ ಬನ್ನಿ. ನಾಳೆ ನೋಡೋಣ ಮಾಧ್ಯಮದಲ್ಲಿ ಏನೇನು ಬರೆಯುತ್ತಾರೆ ಅಂತಾ. ದಲಿತರ ಬಗ್ಗೆ ಬರೆಯಲು ಮಾಧ್ಯಮದ ಪೆನ್ನಿನಲ್ಲಿ ಇಂಕೇ ಇರಲ್ಲ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

ಕಳೆದ ಬಾರಿ ಸಿದ್ಧರಾಮಯ್ಯಗೆ ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಹೇಳಿದ್ದೇ ನಾನು. ಚಿಮ್ಮನಕಟ್ಟಿ ಒಪ್ಪದಿದ್ದಾಗ ಪತ್ನಿ ಕಡೆಯಿಂದ ಒಪ್ಪಿಸಿದೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ 30 ಸಾವಿರದಿಂದ ಗೆಲ್ತೀನಿ ಅಂತಿದ್ದ. ಪಕ್ಕದಲ್ಲಿದ್ದ ಮಹದೇವಪ್ಪ 40 ಸಾವಿರದಿಂದ ಗೇಲ್ತೀವಿ ಅಂತಿದ್ದ. ಆಗ ನಾನು ಮುಂಡೇದೆ ನೀನೆ ಮೊದಲು ಸೋಲ್ತೀಯ ಅಂದಿದ್ದೆ. ಕೊನೆಗೆ ಫಲಿತಾಂಶ ಹಾಗೆಯೇ ಬಂದಿತ್ತು ಎಂದು ಹೇಳಿದ್ದಾರೆ.