Asianet Suvarna News Asianet Suvarna News

'ಸಿಎಂ ಬೊಮ್ಮಾಯಿಗೆ ತಂದೆ ಮಾರ್ಗದರ್ಶನ ಆಗಬೇಕು-ಅತ್ತೆಯದ್ದಲ್ಲ'

  •  ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ತಂದೆಯ ಮಾರ್ಗದರ್ಶನ ದೊರೆಯಬೇಕು
  • ಅತ್ತೆಯ ಮಾರ್ಗದರ್ಶನ ಆಗಬಾರದು ಎಂದ ಬಿಜೆಪಿ ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌
CM Bommai Should take guidance from fatherly person says H vishwanath snr
Author
Bengaluru, First Published Aug 17, 2021, 12:56 PM IST

 ಮೈಸೂರು (ಆ.17):  ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ತಂದೆಯ ಮಾರ್ಗದರ್ಶನ ದೊರೆಯಬೇಕು ಹೊರತು ಅತ್ತೆಯ ಮಾರ್ಗದರ್ಶನ ಆಗಬಾರದು ಎಂದು ಬಿಜೆಪಿ ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾರ್ಗದರ್ಶನ ಕುರಿತು ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಯಾರಿಂದಲಾದರೂ ಮಾರ್ಗದರ್ಶನ ಪಡೆಯಲಿ. ಆದರೆ ಮಾರ್ಗದರ್ಶಕರು ತಂದೆ ಅಥವಾ ಮಾವನ ಸ್ಥಾನದಲ್ಲಿರಬೇಕು. ಅತ್ತೆಯ ಸ್ಥಾನದಲ್ಲಿ ಅಲ್ಲ. ನಾನು ಯಾವ ಅರ್ಥದಲ್ಲಿ ಹೇಳುತ್ತಿದ್ದೇನೆ ಎಂಬುದು ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಖಾತೆ ಕ್ಯಾತೆ: ಸಚಿವರಿಗೆ ದಿಲ್ಲಿಯಿಂದಲೇ ಒಂದು ಮನವಿ ಮಾಡಿದ ಬಿಜೆಪಿ ನಾಯಕ

ಖಾತೆ ಹಂಚಿಕೆ ಬಗ್ಗೆ ಕೆಲವು ಸಚಿವರ ಅಸಮಾಧಾನದ ವ್ಯಕ್ತಪಡಿಸುತ್ತಿದ್ದಾರೆ. ಪ್ರಬಲ ಖಾತೆ ಕೇಳುವವರು ಆ ಇಲಾಖೆಗಳ ಬಗ್ಗೆ ತಿಳಿದಿರುವ ಎಕ್ಸ್‌ಪರ್ಟ್‌ಗಳೇ? ದೊಡ್ಡ ದೊಡ್ಡ ದುಡ್ಡಿರುವ ಇಲಾಖೆ ಕೇಳಿದರೆ ಏನರ್ಥ? ಪ್ರತಿ ಇಲಾಖೆ ಚೆನ್ನಾಗಿವೆ. ಎಲ್ಲ ಇಲಾಖೆಯಲ್ಲೂ ಕೆಲಸ ಇದೆ. ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಬಸವರಾಜ್‌ ಬೊಮ್ಮಾಯಿ ಕೆಲಸ ಶುರು ಮಾಡಿದ್ದಾರೆ. ವಿಭಿನ್ನವಾಗಿ ವಿಶೇಷವಾಗಿ ಆಲೋಚನೆ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿ ಉತ್ತಮ ಆಡಳಿತ ನೀಡಬೇಕಿದೆ. ಹೀಗಾಗಿ ಸಚಿವರು, ಶಾಸಕರು ಅಸಮಾಧಾನ ಬಿಟ್ಟು ಮುಖ್ಯಮಂತ್ರಿಗಳೊಂದಿಗೆ ಸೇರಿ ಕೆಲಸ ಮಾಡಬೇಕು. ಅವರನ್ನು ಕೆಲಸ ಮಾಡಲು ಬಿಡಬೇಕು ಎಂದರು.

ನಾವೇನು ನಿರುದ್ಯೋಗಿಗಳೇ?

ಶಾಸಕರು, ವಿಧಾನಪರಿಷತ್‌ ಸದಸ್ಯರು ನಿರುದ್ಯೋಗಿಗಳಲ್ಲ. ಸಹಕಾರ ಸಚಿವರು ಬೆಂಗಳೂರಿನಿಂದ ಹೊರಡುವಾಗ ಸಭೆಗೆ ಬರುವಂತೆ ತಿಳಿಸುತ್ತಾರೆ. ನಾವೇನು ಕೆಲಸದ ಇಲ್ಲದವರೇ? ಅದಕ್ಕೊಂದು ಶಿಸ್ತು ಬೇಡವೇ ಎಂದು ಅವರು ಪ್ರಶ್ನಿಸಿದರು.

ಶಾಲೆಗಳನ್ನು ಆರಂಭಿಸುವುದು ಸಣ್ಣ ವಿಚಾರವಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು, ತಜ್ಞರ ಜೊತೆ ಚರ್ಚಿಸಿ ಸಲಹೆ ಪಡೆಯಬೇಕು. ಶಾಲೆ ಆರಂಭದ ಬಗ್ಗೆ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಈ ಕುರಿತು ಪೋಷಕರು, ತಜ್ಞರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆ ನಂತರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

Follow Us:
Download App:
  • android
  • ios