Asianet Suvarna News Asianet Suvarna News

ಬೃಹತ್ ಸಮಾವೇಶಕ್ಕೆ ಸಜ್ಜುಗೊಂಡ ಕೊಡಗು: ವಿವಿಧ ಕಾಮಗಾರಿಗಳ ಉದ್ಘಾಟನೆ, 16 ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ

ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಮತ್ತೆ ಕಮಲ ಅರಳಿಸಲು ಪಣತೊಟ್ಟಿರುವ ಸಿಎಂ ಬೊಮ್ಮಾಯಿ ಅವರು ಚುನಾವಣೆ ಹೊಸ್ತಿಲಲ್ಲಿ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಾಳೆ ಫಲಾನುಭವಿಗಳ ಸಮಾವೇಶ ನಡೆಸಲಿದ್ದಾರೆ.

CM Bommai lays foundation stone to various development works in kodagu gow
Author
First Published Mar 17, 2023, 5:15 PM IST

ವರದಿ ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮಾ.17): ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಮತ್ತೆ ಕಮಲ ಅರಳಿಸಲು ಪಣತೊಟ್ಟಿರುವ ಸಿಎಂ ಬೊಮ್ಮಾಯಿ ಅವರು ಚುನಾವಣೆ ಹೊಸ್ತಿಲಲ್ಲಿ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಾಳೆ ಫಲಾನುಭವಿಗಳ ಸಮಾವೇಶ ನಡೆಸಲಿದ್ದಾರೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮತ್ತು 16 ಕ್ಕೂ ಹೆಚ್ಚು ನಿರ್ಮಾಣ ಆಗಬೇಕಾಗಿರುವ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದಾರೆ.

ಮಡಿಕೇರಿ ನಗರದಲ್ಲಿ 28.7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನ, 45 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆಗೊಂಡಿರುವ ಗ್ರೇಟರ್ ರಾಜಸೀಟ್ ಉದ್ಯಾನ, 40 ಕೋಟಿ ರೂಪಾಯಿಯ ಜಿಲ್ಲಾ ತರಬೇತಿ ಸಂಸ್ಥೆ, 40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 150 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕುಶಾಲನಗರದಲ್ಲಿ 38 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಪಶು ಆಸ್ಪತ್ರೆ ಕಟ್ಟಡ ಹಾಗೂ ಸೋಮವಾರಪೇಟೆಯಲ್ಲಿ 25 ಕೋಟೆ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಇವುಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಿದ್ದಾರೆ.

ಇವುಗಳಲ್ಲದೆ 16 ವಿವಿಧ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇನ್ನು ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ 4 ಸಾವಿರ ಕೋಟಿ ರೂಪಾಯಿ ಮೌಲ್ಯದ ಸೌಲಭ್ಯಗಳನ್ನು ಜನರಿಗೆ ವಿತರಣೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಲಿದ್ದಾರೆ. ಅದಕ್ಕಾಗಿ ಗಾಂಧಿ ಮೈದಾನದಲ್ಲಿ 4 ಸಾವಿರ ಚೇರ್ಗಳನ್ನು ಹಾಕಲಾಗಿದೆ. ಫಲಾನುಭವಿಗಳನ್ನು ಕರೆತರುವುದಕ್ಕಾಗಿ ಜಿಲ್ಲಾಡಳಿತದಿಂದ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಗೆ ಸಿಎಂ ಬೊಮ್ಮಾಯಿಯವರು ಹೆಲಿಕಾಫ್ಟರ್ ಮೂಲಕ ಕೆ. ಬಾಡಗದ ಗಾಲ್ಫ್ ಮೈದಾನದ ಹೆಲಿಪ್ಯಾಡ್ಗೆ ಬರಲಿದ್ದಾರೆ. 12.15 ಕ್ಕೆ ಗಾಂಧಿ ಮೈದಾನಕ್ಕೆ ಆಗಮಿಸಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಲಿದ್ದಾರೆ.

ನಂತರ 3.10 ಕ್ಕೆ ನಾಪೋಕ್ಲುವಿನಲ್ಲಿ ನಡೆಯಲಿರುವ 23 ನೇ ಕೊಡವ ಹಾಕಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಲ್ಕು ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಡವ ಹಾಕಿ ಉತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ 1 ಕೋಟಿ ಅನುದಾನ ಘೋಷಿಸಿದ್ದಾರೆ. ಇನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯುತ್ತಿರುವ ಫಲಾನುಭವಿಗಳ ಸಮಾವೇಶಕ್ಕೆ ಸಾವಿರಾರು ಜನರು ಬರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಟ್ರಾಫಿಕ್ ಕಿರಿ ಕಿರಿ ಆಗದಂತೆ ಕ್ರಮ ವಹಿಸಲಾಗಿದೆ.

ಮಾಡಾಳ್‌ ಕೇಸ್‌: ಸಿನಿಮಾ ರೀತಿ ಥರ್ಡ್‌ ಡಿಗ್ರಿ ಟ್ರೀಟ್ಮೆಂಟ್‌ ಕೊಡ್ಬೇಕಾ?, ವಕೀಲರಿಗೆ ನ್ಯಾಯಾಧೀಶರ ಪ್ರಶ್ನೆ

 ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ. ಜನರಲ್ ತಿಮ್ಮಯ್ಯಯ ವೃತ್ತದಿಂದ ಸುದರ್ಶನ್ ವೃತ್ತದವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅಲ್ಲದೆ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆಯಲ್ಲಿ ದೊಡ್ಡ ತಿರುವಿನವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

 ಕೇಸರಿ ಕೋಟೆಯಲ್ಲಿ ದಾಯಾದಿ ಕಲಹ,ಶಿಸ್ತಿನ ಪಕ್ಷದಲ್ಲಿ ಇದೆಂಥಾ ಅಂತರ್ಯುದ್ಧ..?

ಹಾಗೆಯೇ ಕರ್ನಲ್ ಮಂಗೇರ ಮುತ್ತಣ್ಣ ವೃತ್ತದಿಂದ ರಾಜಸೀಟ್ ಮಾರ್ಗವಾಗಿ ಸಾಯಿ ಮೈದಾನದ ವೃತ್ತದವರೆಗೆ ವಾಹನಗಳ ನಿಲುಗಡೆ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ. ಇನ್ನು ಸಮಾವೇಶಕ್ಕೆ ಬರುವ ಬಸ್ಸುಗಳಿಗೆ ನೂತನ ಖಾಸಗಿ ಬಸ್ಸು ನಿಲ್ದಾಣ, ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಾಲ್ಕು ಚಕ್ರ ಹಾಗೂ ದ್ವಿಚಕ್ರ ವಾಹನಗಳ ನಿಲುಗಡೆಗೆ ಮಡಿಕೇರಿ ನಗರ ಎಪಿಎಂಸಿ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. 

Follow Us:
Download App:
  • android
  • ios