ಜಿಲ್ಲೆಯಲ್ಲಿ ಡಿ. 14 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

 ಮೈಸೂರು : ಜಿಲ್ಲೆಯಲ್ಲಿ ಡಿ. 14 ರವರೆಗೆ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆ ಬರುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

ಈ ಅವಧಿಯಲ್ಲಿ ತಿಂಗಳ ಹುರುಳಿಗೆ ಚಿಬ್ಬು ರೋಗ ಮತ್ತು ಕಾಯಿ ಕೊಳೆಯುವ ರೋಗ, ಎಲೆ ಕೋಸು ಮತ್ತು ಹೂ ಕೋಸಿಗೆ ಸಸ್ಯ ಹೇನು, ಬಾಳೆಗೆ ಎಲೆ ಚುಕ್ಕೆ ರೋಗ, ಟೊಮ್ಯಾಟೋ, ಮೆಣಸಿನಕಾಯಿ, ಬದನೆಗೆ ಸಸಿಗಳ ಉಪಚಾರದ ಅಗತ್ಯವಿದೆ. ತೊಗರಿಗೆ ಕಾಯಿಕೊರಕ, ಮುಸುಕಿನ ಜೋಳಕ್ಕೆ ಸೈನಿಕ ಹುಳು, ಅವರೆಗೆ ಕಾಯಿ ಕೊರಕ, ಶುಂಠಿಗೆ ಗಡ್ಡೆ ಕೊಳೆರೋಗ ಕಂಡುಬರುವ ಸಾಧ್ಯತೆ ಇದೆ. ರೈತರು ಹೆಚ್ಚಿನ ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಜಿ.ವಿ. ಸುಮಂತಕುಮಾರ್‌ ಮೊ. 94498 69914 ಅಥವಾ ದೂ. 0821- 2591267 ಸಂಪರ್ಕಿಸಬಹುದು.

 ವಾತಾವರಣ ವೈಪರೀತ್ಯಕ್ಕೆ ಭತ್ತ ರಕ್ಷಣೆಗೆ ರೈತರ ಹರಸಾಹಸ

ಕುರುಗೋಡು : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮೋಡ (Cloudy) ಮುಸುಕಿದ ವಾತಾವರಣ ಹಾಗೂ ತುಂತುರು ಮಳೆಯಿಂದಾಗಿ ಭತ್ತದ (Paddy) ಕಟಾವಿಗೆ ಅಡಚಣೆಯಾಗಿರುವುದು ಒಂದೆಡೆಯಾದರೆ, ಕಟಾವು ಮಾಡಿದ ಭತ್ತವನ್ನು ರಾಶಿ ಮಾಡಿ ರಕ್ಷಿಸುವುದೇ ರೈತರಿಗೆ ದೊಡ್ಡ ಸವಾಲಾಗಿದೆ.

ಈ ಮಧ್ಯೆ ತಾಲೂಕಿನಲ್ಲಿ ಶೇ.50% ರಷ್ಟುಭತ್ತದ ಕಟಾವು ಮುಗಿದು ಸಣ್ಣ ಪುಟ್ಟರೈತರು ಭತ್ತವನ್ನು ದಲ್ಲಾಳಿ, ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದರೂ ಭತ್ತದ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಕ್ರಮ ಕೈಗೊಳ್ಳದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ತಾಲೂಕಿನ ತುಂಗಭದ್ರಾ ಕಾಲುವೆಗಳ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 8ಸಾವಿರ ಹೆಕ್ಟೇರ್‌ನಲ್ಲಿ ವಿವಿಧ ತಳಿಯ ಭತ್ತ ಬೆಳೆಯಲಾಗಿದೆ. ನದಿ ನೀರಾವರಿ ಜಮೀನಿನಲ್ಲಿ ಈಗಾಗಲೇ ಭತ್ತದ ಕಟಾವು ನಡೆದು, ಮಾರಾಟ ಮಾಡಿ ಹಿಂಗಾರು ಹಂಗಾಮಿನ ಭತ್ತದ ನಾಟಿಗೆ ಭತ್ತದ ಸಸಿಗಳನ್ನು ಹಾಕುತ್ತಿದ್ದಾರೆ. ಆದರೆ, ತುಂಗಭದ್ರಾ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಮತ್ತು ವಿಜಯನಗರ ಕಾಲುವೆ, ಕೆರೆಗಳ ವ್ಯಾಪ್ತಿಯಲ್ಲಿ ಭತ್ತದ ಕಟಾವು ಭರದಿಂದ ನಡೆದಿದ್ದರೆ, ಇನ್ನು ಕೆಲವು ಭಾಗದಲ್ಲಿ ಹದಿನೈದು ದಿನಗಳಲ್ಲಿ ಭತ್ತದ ಕಟಾವು ಆರಂಭವಾಗಲಿದೆ.

ಭತ್ತಕ್ಕೆ ಕಾಡಿಗೆ ರೋಗ, ತೆನೆ ಜೊಳ್ಳಾಗುವುದು ಸೇರಿದಂತೆ ಇತರೆ ರೋಗಗಳು ಕಾಣಿಸಿಕೊಂಡಿದ್ದರಿಂದ ಎಕರೆಗೆ 45 ರಿಂದ 50 ಚೀಲ ನಿರೀಕ್ಷಿಸಿದ್ದ ರೈತರಿಗೆ 35 ರಿಂದ 40 ಚೀಲ ಇಳುವರಿ ಬರುತ್ತಿದೆ, ಎಕರೆ ಭತ್ತ ಬೆಳೆಯಲು ಸುಮಾರು .35ರಿಂದ .40 ಸಾವಿರ ವ್ಯಯಿಸಲಾಗಿದೆ, ಗುತ್ತಿಗೆ ಆಧಾರದಲ್ಲಿ ಭತ್ತ ಬೆಳೆದ ರೈತರು ಎಕರೆಗೆ 12ರಿಂದ 15 ಚೀಲ ಗುತ್ತಿಗೆ ನೀಡಬೇಕಾಗಿದೆ. ಆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿತವಾಗಿದ್ದು, ಮಧ್ಯವರ್ತಿಗಳು ಬೇಕಾಬಿಟ್ಟಿಬೆಲೆಗೆ ಕೇಳುತ್ತಿದ್ದಾರೆ, ಪಟ್ಟಣದಲ್ಲಿ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ, ಬೆಲೆ ಹೆಚ್ಚಾಗಿ ಭತ್ತ ಬೆಳೆದ ಖರ್ಚನ್ನು ಸರಿದೂಗಿಸಬಹುದೆಂದು ರೈತ ಸೋಮಲಾಪುರ ಪಂಪಾಪತಿ ತಿಳಿಸಿದರು.

ಭತ್ತ ದಾಸ್ತಾನು ಮಾಡಲು ಗೋದಾಮು ವ್ಯವಸ್ಥೆ ಇಲ್ಲ, ಬಾಡಿಗೆ ಗೋದಾಮಿನಲ್ಲಿ ದಸ್ತಾನು ಮಾಡಬೇಕಾದರೆ ಒಂದು ಚೀಲಕ್ಕೆ .100 ರಿಂದ .150ಕ್ಕೂ ಅಧಿಕ ಖರ್ಚು ಬರುತ್ತದೆ,ಜೊತೆಗೆ ಹಿಂಗಾರು ಹಂಗಾಮಿನ ಭತ್ತದ ನಾಟಿಗೆ ಹಣಕಾಸಿನ ತೊಂದರೆ ಎದುರಾಗುತ್ತದೆ.

ಮಾರುಕಟ್ಟೆಯಲ್ಲಿ ವಿವಿಧ ತಳಿ ಭತ್ತದ ಬೆಲೆ

ಪ್ರಸ್ತುತ ಮಾರುಕಟ್ಟೆಯಲ್ಲಿ 75 ಕೆಜಿ ಸೋನಾಮಸೂರಿ ಭತ್ತ .1410 ರಿಂದ .1510 ಆರ್‌ಎನ್‌ಆರ್‌ ಭತ್ತದ ತಳಿ .1480 ರಿಂದ . 1580 ನೆಲ್ಲೂರು ಸೋನಾ .1380 ರಿಂದ .1430 ಮತ್ತು (ಐಆರ್‌-54) ಭತ್ತದ ತಳಿ . 1320ರಿಂದ 1360 ಇದೆ.

ಈಗಾಗಲೇ ಕುರುಗೋಡದಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಡ ತಂದಿದ್ದೇನೆ. ಅದಷ್ಟುಬೇಗ ಖರೀದಿ ಕೇಂದ್ರ ಪ್ರಾರಂಭಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ.

ಜೆ.ಎನ್‌.ಗಣೇಶ್‌, ಶಾಸಕರು ಕಂಪ್ಲಿ