ಚಿತ್ರದುರ್ಗದಲ್ಲಿ ಶಾಲಾ ಬಾಲಕಿಯ ಮೇಲೆ ನಿರಂತರ ಅತ್ಯಾ೧ಚಾರ ಎಸಗಿ, ಗರ್ಭಪಾತ ಮಾಡಿಸಿದ ಆರೋಪದ ಮೇಲೆ ಶಿಕ್ಷಕ ಎಚ್.ಒ. ರಾಜಣ್ಣನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದ ಈತನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಕೃತ್ಯಕ್ಕೆ ಸಹಕರಿಸಿದ ವೈದ್ಯೆ ನಾಪತ್ತೆ

ಚಿತ್ರದುರ್ಗ (ಏ.11): ಶಾಲಾ ಬಾಲಕಿಯ ಮೇಲೆ ನಿರಂತರ ಬಲತ್ಕಾರ ಮತ್ತು ಗರ್ಭಪಾತ ಮಾಡಿಸಿದ ಆರೋಪದಡಿ ಶಿಕ್ಷಕ ಎಚ್.ಒ. ರಾಜಣ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಕರಣ ಮುಚ್ಚಿಹಾಕಲು ಗರ್ಭಪಾತ!

ಅಪ್ರಾಪ್ತ ಬಾಲಕಿಯನ್ನ ಪುಸಲಾಯಿತಿ ನಿರಂತರ ಬಲತ್ಕಾರ ಎಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು ಎನ್ನಲಾಗಿದ್ದು, ಈ ವಿಷಯ ಹೊರಬರದಂತೆ ತಡೆಯಲು ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಷಯ ಕುಟುಂಬಸ್ಥರಿಗೆ ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪ್ರಕರಣ ಒಂದೊಂದೇ ಬಯಲಾಗಿವೆ.

ಪ್ರಕರಣ ಬಯಲಾಗಿದ್ದಕ್ಕೆ ಆರೋಪಿ ಸಾಯಲು ಯತ್ನ

ಏಪ್ರಿಲ್ 9ರಂದು ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಬಂಧನದ ಭೀತಿಯಿಂದ ಶಿಕ್ಷಕ ರಾಜಣ್ಣ ವಿಷ ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದನು. ಕೂಡಲೇ ಈತನನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗುತ್ತಿದ್ದಂತೆ, ನಿನ್ನೆ ಸಂಜೆ ಪೊಲೀಸರು ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮುಂದಿನ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಗರ್ಭಪಾತ ಮಾಡಿದ್ದ ವೈದ್ಯೆ ನಾಪತ್ತೆ

ಆರೋಪಿ ಶಿಕ್ಷಕ ಹೇಳಿದಂತೆ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರೋಪ ಎದುರಿಸುತ್ತಿರುವ ಶ್ರೀ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಆಸ್ಪತ್ರೆಯ ವೈದ್ಯೆ ಶಂಕರಲಕ್ಷ್ಮೀ ಬಂಧನ ಭೀತಿಯಿಂದ ಸದ್ಯ ನಾಪತ್ತೆಯಾಗಿದ್ದಾರೆ. ಪೊಲೀಸರು ವೈದ್ಯೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಘಟನೆ ಬೆನ್ನಲ್ಲೇ ಸರ್ಕಾರಿ ಶಾಲೆಗೆ ಡಿಡಿಪಿಐ ಭೇಟಿ

ಶಾಲಾ ಶಿಕ್ಷಕನಿಂದಲೇ ಬಾಲಕಿ ಮೇಲೆ ನಿರಂತರ ಬಲತ್ಕಾರ, ಗರ್ಭಪಾತ ಮಾಡಿಸಿದ ಪ್ರಕರಣ ಜಿಲ್ಲೆಯಾದ್ಯಂತ ಹರಿದಾಡಿದ ಘಟನೆ ಬೆನ್ನಲ್ಲೇ ಜಿಲ್ಲಾ ಆರೋಗ್ಯಧಿಕಾರಿ ರೇಣುಪ್ರಸಾದ್ ಹಾಗೂ ತಹಸೀಲ್ದಾರ್ ರೆಹನ್ ಪಾಷಾ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಡಿಡಿಪಿಐ ಎಂ.ಆರ್. ಮಂಜುನಾಥ್ ಅವರು ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಆರೋಪಿ ಶಿಕ್ಷಕ ಅಮಾನತು

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಬಂಧನಕ್ಕೊಳಗಾಗಿರುವ ಶಿಕ್ಷಕ ಎಚ್.ಒ. ರಾಜಣ್ಣನನ್ನು ಸೇವೆಯಿಂದ ಅಮಾನತುಗೊಳಿಸಿ ಡಿಡಿಪಿಐ ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ.