ತಾಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಧೀಶ ಕೆ.ಜೆ. ಸತೀಶ್‌ ಕಳವಳ ವ್ಯಕ್ತಪಡಿಸಿದರು.

 ಎಚ್‌.ಡಿ. ಕೋಟೆ (ಡಿ.13): ತಾಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಧೀಶ ಕೆ.ಜೆ. ಸತೀಶ್‌ ಕಳವಳ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಜಿಲ್ಲಾ ಜವಹಾರ ಬಾಲ ಭವನ ಸೊಸೈಟಿ, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ (woman) ಮತ್ತು ಮಕ್ಕಳ (Child) ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಾಲ ಕಾರ್ಮಿಕ ಯೋಜನೆ ಸೊಸೈಟಿ, ಮಡಿಳು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ವಾರಾಂತ್ಯ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಹಕ್ಕು ಕರ್ತವ್ಯ ಸಂವಿಧಾನಾತ್ಮಕವಾಗಿ ಅಗತ್ಯವಾಗಿ ಅನುಭವಿಸಬೇಕು. ಅವುಗಳಲ್ಲಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ ಮತ್ತು ವಿಕಾಸದ ಹಕ್ಕು ಪ್ರಮುಖವಾದದ್ದು. 18 ವರ್ಷದ ಒಳಗಿನ ಎಲ್ಲರಿಗೂ ಯಾವುದೇ ತಾರತಮ್ಯ ಮಾಡಬಾರದು. ಮಕ್ಕಳನ್ನು ಸರ್ಕಾರ ಪೋಷಕರ ಅನುಮತಿ ಇಲ್ಲದೆ ನಿರಾಶ್ರಿತರಾಗದಂತೆ ರಕ್ಷಿಸಬೇಕು. ವಿಶೇಷ ಅಗತ್ಯತೆ, ವಿಶೇಷ ಸೌಲಭ್ಯ, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಬಾಲಕಾರ್ಮಿಕ ನಿಷೇದ ಹಕ್ಕು ಇದೆ ಎಂದರು.

ತಾಲೂಕಿನಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದೆ. 18 ವರ್ಷದ ಒಳಗೆ ಹೆಣ್ಣು ಮಕ್ಕಳು ಅನುಮತಿ ನೀಡಿದರು ಮದುವೆ ಆಗುವಂತಿಲ್ಲ. ಹೆಣ್ಣು ಮಕ್ಕಳು ಓದು ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಬಾಲ ಕಾರ್ಮಿಕ ಪದ್ಧತಿಯಲ್ಲಿ ಮಕ್ಕಳನ್ನು ದುಡಿಸುವಂತಿಲ್ಲ ಎಂದು ಅವರು ಕಿವಿಮಾತು ಹೇಳಿದರು.

ಪೋಷಕರು ಮಕ್ಕಳಿಗೆ ಪೂರ್ವ ಶಿಕ್ಷಣ ನೀಡಬೇಕು. ಬಾಲಕಾರ್ಮಿಕ ಪದ್ಧತಿಯಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಧಿಕಾರಿ ಆಶಾ ಮಾತನಾಡಿ, ಬಾಲ್ಯ ವಿವಾಹ ನಿಲ್ಲಿಸಲು ಹೋದರೆ ಗ್ರಾಮೀಣ ಪ್ರದೇಶದಲ್ಲಿ ಅಡ್ಡಿಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹ ಜರುಗುತ್ತಿದೆ. ಗ್ರಾಮೀಣ ಭಾಗದ ಬಾಲಕಿಯರು ಮಾತನಾಡಿ, ನನಗೆ ಓದು ತಲೆಗೆ ಹತ್ತುತ್ತಿಲ್ಲ. ಆದ್ದರಿಂದ ನಮ್ಮ ಪೋಷಕರು ವಿವಾಹ ಮಾಡುತ್ತಿದ್ದಾರೆ ಎಂದು ತಿಳಿಸಿರುವ ಘಟನೆ ಜರಗಿದೆ. ಮಕ್ಕಳು ಓದಿನ ಜೊತೆಗೆ ಆಟೋಟ ಸ್ಪರ್ಧೆ, ಸಂಗೀತ ಸ್ಪರ್ಧೆ, ಮಕ್ಕಳಲ್ಲಿ ಕಲಾತ್ಮಕ ಪ್ರತಿಭೆಯನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಟಿಎಚ್‌ಒ ಡಾ.ಟಿ. ರವಿಕುಮಾರ್‌ ಮಾತನಾಡಿ, 18 ವರ್ಷದ ಒಳಗೆ ಮದುವೆ ಮಾಡಬಾರದು. 18ರವರೆಗೆ ದುಡಿಮೆ ಮಾಡಿಸಿಕೊಳ್ಳಬಾರದು. ಸ್ವಾಸ್ಥ ಭೀಮಾ ಯೋಜನೆ ಅಡಿಯಲ್ಲಿ ಒಂದರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು. ಆರೋಗ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು. ಜೇಮ್ಸ…ಗೆ ಮಕ್ಕಳು ಮಾರುಹೋಗುತ್ತಿದ್ದು, ನಮ್ಮಲ್ಲಿ ಪ್ರತಿದಿನ ನಾಲ್ಕರಿಂದ ಐದು ಕ್ಯಾನ್ಸರ್‌ ರೋಗಿಗಳನ್ನು ಕಾಣುತ್ತಿದ್ದೇವೆ. ಆದ್ದರಿಂದ ಮಕ್ಕಳು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಇಒ ಉದಯಕುಮಾರ್‌, ಉಪ ಪ್ರಾಂಶುಪಾಲ ವಿ.ಜಿ. ಮಂಜುನಾಥ್‌, ಕಾರ್ಯನಿರ್ವಾಹಕ ನಿರ್ದೇಶಕ ಕೆ. ಶ್ರೀನಿವಾಸ್‌, ಬಿಆರ್‌ಸಿ ಕೃಷ್ಣಯ್ಯ ಮತ್ತು ಇಲಾಖೆ ಅಧಿಕಾರಿಗಳು ಇದ್ದರು.

  • ತಾಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಪೋಕ್ಸೋ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ
  • ಮಕ್ಕಳ ಹಕ್ಕು ಕರ್ತವ್ಯ ಸಂವಿಧಾನಾತ್ಮಕವಾಗಿ ಅಗತ್ಯವಾಗಿ ಅನುಭವಿಸಬೇಕು
  • ಅವುಗಳಲ್ಲಿ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ ಮತ್ತು ವಿಕಾಸದ ಹಕ್ಕು ಪ್ರಮುಖವಾದದ್ದು.
  • 18 ವರ್ಷದ ಒಳಗಿನ ಎಲ್ಲರಿಗೂ ಯಾವುದೇ ತಾರತಮ್ಯ ಮಾಡಬಾರದು