ಚಿಕ್ಕಮಗಳೂರಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್‌ಗಳು ಕರ್ತವ್ಯ ನಿರ್ಲಕ್ಷಿಸಿ ಆಸ್ಪತ್ರೆಯ ಬೆಡ್ ಮೇಲೆ ರೀಲ್ಸ್ ನೋಡುತ್ತಿರುವುದು ಬೆಳಕಿಗೆ ಬಂದಿದೆ. ವೈದ್ಯರು ಸಹ ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಎನ್‌ ಆರ್ ಪುರ ತಾಲೂಕಿನ ಬಾಳೆ ಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕಾದ ನರ್ಸ್‌ಗಳು ತಮ್ಮ ಕರ್ತವ್ಯವನ್ನು ನಿರ್ಲಕ್ಷ್ಯ ಮಾಡಿ ರೀಲ್ಸ್‌ಗಳಲ್ಲಿ ತೊಡಗಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಪತ್ರೆಯ ಬೆಡ್ ಮೇಲೆಯೇ ಮಲಗಿ ನರ್ಸ್‌ಗಳ ಶೋಕಿ

ಆಸ್ಪತ್ರೆಯ ಬೆಡ್ ಮೇಲೆಯೇ ಮಲಗಿ ನರ್ಸ್‌ಗಳು ಮೊಬೈಲ್‌ನಲ್ಲಿ ರೀಲ್ಸ್ ನೋಡುತ್ತಿರುವ ದೃಶ್ಯಗಳು ರೋಗಿಯೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆರೋಗ್ಯ ಇಲಾಖೆಯ ಕಾರ್ಯಪದ್ಧತಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎತ್ತುವಂತೆ ಮಾಡಿದೆ. ಇದಲ್ಲದೆ, ಮಧ್ಯಾಹ್ನ ಊಟಕ್ಕೆ ಮನೆಗೆ ತೆರಳಿದ ಕೆಲ ವೈದ್ಯರು ಸಮಯಕ್ಕೆ ಆಸ್ಪತ್ರೆಗೆ ವಾಪಸ್ ಬಾರದಿರುವ ಆರೋಪವೂ ಕೇಳಿಬಂದಿದೆ. ವೈದ್ಯರು ಲಭ್ಯವಿಲ್ಲದ ಸಂದರ್ಭದಲ್ಲಿ, ನರ್ಸ್‌ಗಳು ರೋಗಿಗಳ ಆರೈಕೆಗೆ ಮುಂದಾಗಬೇಕಾಗಿದ್ದು, ಆದರೆ ಅವರು ರೀಲ್ಸ್ ನೋಡುತ್ತಾ ಸಮಯ ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಇಲ್ಲಿ ಬೇರೆ ನರ್ಸ್ ಇದ್ದಾರೆ, ಅವರ ಬಳಿಗೆ ಹೋಗಿ

ಆಸ್ಪತ್ರೆಗೆ ಬಂದ ರೋಗಿಗಳಿಗೆ ಡಾಕ್ಟರ್ ಬರ್ತಾರೆ, ಕಾಯಿರಿ ಎಂದು ಹೇಳಿ ಕುಳ್ಳಿರಿಸುವ ನರ್ಸ್‌ಗಳು, ತಮ್ಮ ಕೆಲಸದ ಕಡೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ. ಕೆಲ ಸಂದರ್ಭಗಳಲ್ಲಿ ಇಲ್ಲಿ ಬೇರೆ ನರ್ಸ್ ಇದ್ದಾರೆ, ಅವರ ಬಳಿಗೆ ಹೋಗಿ ಎಂದು ಹೇಳಿ ರೋಗಿಗಳನ್ನು ಕಡೆಗಣಿಸುತ್ತಿರುವುದು ಕೂಡ ಇದೆಯಂತೆ.

ಈ ಘಟನೆಯಿಂದ ರೋಗಿಗಳು ಮತ್ತು ಅವರ ಕುಟುಂಬದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಿ ಆಸ್ಪತ್ರೆಗಳ ಸೇವೆಗಳ ಗುಣಮಟ್ಟದ ಬಗ್ಗೆ ಮತ್ತೆ ಪ್ರಶ್ನೆಗಳು ಕೇಳಿಬರುತ್ತಿವೆ. ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಆರೋಗ್ಯ ಸೇವೆಯಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವ ನರ್ಸ್‌ಗಳ ಈ ರೀತಿಯ ವರ್ತನೆ ಗಂಭೀರ ನಿರ್ಲಕ್ಷ್ಯವೆಂದು ಪರಿಗಣಿಸಲಾಗುತ್ತಿದ್ದು, ರೋಗಿಗಳ ಭದ್ರತೆ ಮತ್ತು ಸೇವೆಯ ಗುಣಮಟ್ಟ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ.