Asianet Suvarna News Asianet Suvarna News

ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಂದೂಕು ಫ್ಯಾಕ್ಟರಿ ಕಟ್ಟಿದ್ದ ಶ್ರೀ!

  •  ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿರುವ ರಾಜ್ಯದ ಅನೇಕ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠವು ಒಂದು
  • ಸ್ವಾತಂತ್ರ್ಯಪೂರ್ವದಲ್ಲಿ ಇಂಚಗೇರಿ ಮಠದಲ್ಲಿ ಶ್ರೀಗಳಾಗಿದ್ದವರು ಶ್ರೀ ಮಾಧವಾನಂದ ಪ್ರಭುಜಿಗಳು
  • ಶ್ರೀಗಳು ತಾವಷ್ಟೇ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ತಮ್ಮ ಭಕ್ತರನ್ನು ಕರೆತಂದು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು
chadchan inchageri Mutt swamiji builts gun factory for freedom fight snr
Author
Bengaluru, First Published Aug 15, 2021, 9:00 AM IST

 ಚಡಚಣ (ಆ.15): ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿರುವ ರಾಜ್ಯದ ಅನೇಕ ಮಠಗಳಲ್ಲಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠವು ಒಂದು. ಸ್ವಾತಂತ್ರ್ಯಪೂರ್ವದಲ್ಲಿ ಇಂಚಗೇರಿ ಮಠದಲ್ಲಿ ಶ್ರೀಗಳಾಗಿದ್ದವರು ಶ್ರೀ ಮಾಧವಾನಂದ ಪ್ರಭುಜಿಗಳು. ಶ್ರೀಗಳು ತಾವಷ್ಟೇ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ತಮ್ಮ ಭಕ್ತರನ್ನು ಕರೆತಂದು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.

"

1938ರಲ್ಲಿ ಶ್ರೀ ಮಾಧವನಾನಂದ ಪ್ರಭುಜಿ ತಮ್ಮ 20 ಸಾವಿರ ಭಕ್ತರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹುಲಕೋಟೆ, ಸಾವಳಗಿ, ಹೊರ್ತಿ ಪೊಲೀಸ್‌ ಠಾಣೆಗಳಿಗೆ ಮುತ್ತಿಗೆ ಹಾಕಿ ಶಸ್ತ್ರಾಸ್ತ್ರಗಳನ್ನ ಅಪಹರಿಸಿದ್ದರು. ಮಾತ್ರವಲ್ಲ, ಹಲವು ಅಂಚೆ, ನಾಡ ಕಚೇರಿಗೆ ಬೆಂಕಿ ಹಚ್ಚಿದ್ದರು. ಬ್ರಿಟಿಷರಿಗೆ ಪ್ರಮುಖ ಸಂಪರ್ಕ ಸಾಧನವಾಗಿದ್ದ ರೈಲು ಹಳಿಗಳನ್ನು ಕಿತ್ತುಹಾಕಿ ಠಾಣೆಗಳನ್ನು ಧ್ವಂಸಗೊಳಿಸಿದ್ದರು. ಇಷ್ಟುಮಾತ್ರವಲ್ಲ, ಬ್ರಿಟಿಷ್‌ ಸರ್ಕಾರಕ್ಕೆ ಸೇರಬೇಕಿದ್ದ ಬೊಕ್ಕಸವನ್ನು ದೋಚಿದ್ದರು. ಇದರ ಫಲವಾಗಿ ಶ್ರೀಗಳು 27 ಬಾರಿ ಜೈಲು ವಾಸ ಅನುಭವಿಸಿದ್ದರು.

ಭಾರತ ಆಚರಿಸುತ್ತಿರುವುದು 74 ಅಥವಾ 75ನೇ ಸ್ವಾತಂತ್ರ್ಯ ದಿನಾಚರಣೆ? ಗೊಂದಲಕ್ಕೆ ಇಲ್ಲಿದೆ ಉತ್ತರ!

ತಮ್ಮ 22ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಚಲೆಜಾವ್‌ ಚಳವಳಿ, ಉಪ್ಪಿನ ಸತ್ಯಾಗ್ರಹ, ಗೋವಾ ವಿಮೋಚನೆಯಂತಹ ಅನೇಕ ಹೋರಾಟಗಳಲ್ಲಿ ತಮ್ಮ ಮಠದ ಭಕ್ತರೊಂದಿಗೆ ಪಾಲ್ಗೊಂಡಿದ್ದರು. ಬ್ರಿಟಿಷರನ್ನು ಬಗ್ಗುಬಡಿಯಬೇಕು ಎಂಬ ಪ್ರಬಲ ಹಂಬಲದೊಂದಿಗೆ ಶ್ರೀಗಳು ತಮ್ಮ ಅನುಯಾಯಿಗಳೊಂದಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಹಾಗೂ ಮಹಾರಾಷ್ಟ್ರದ ಜತ್‌ ತಾಲೂಕಿನ ಸೊನ್ಯಾಳದಲ್ಲಿ ಎರಡು ಬಂದೂಕು ಫ್ಯಾಕ್ಟರಿಗಳನ್ನು ತೆರೆದಿದ್ದರು. ಇದು ಬ್ರಿಟಿಷರ ಎದೆ ನಡುಗುವಂತೆ ಮಾಡಿತ್ತು.

ಕಂಡಲ್ಲಿ ಗುಂಡಿಗೆ ಆದೇಶ: 1942ರಲ್ಲಿ ಬ್ರಿಟಿಷ್‌ ಸರ್ಕಾರ ಮಾಧವಾನಂದ ಶ್ರೀಗಳ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿತ್ತು. ಅದರಂತೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ಬಳಿ ಬ್ರಿಟಿಷ್‌ ಪೊಲೀಸರು ಇವರ ಮೇಲೆ ಗುಂಡು ಹಾರಿಸಿದರು. ಆದರೆ ಪೊಲೀಸರು ಬಂದು ನೋಡಿದಾಗ ಅಲ್ಲಿ ಮಾಧವಾನಂದರು ಇರಲೇ ಇಲ್ಲ. ಅವರು ಅಂದುಕೊಂಡಂತೆ ಗೋಕಾಕ ಬಳಿಯ ಹಳ್ಳಿಯೊಂದರಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದೇಶಕ್ಕಾಗಿ ನಡೆದ ಗುಪ್ತ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದನ್ನ ಮಾಧವಾನಂದ ಪ್ರಭುಗಳ ಪವಾಡ ಎಂದೇ ಭಕ್ತರು ನಂಬಿದ್ದಾರೆ. ಈ ಪವಾಡ ನಂಬಿದ ಬ್ರಿಟಿಷರು ಕೂಡ ಮತ್ತೆ ಗುಂಡಿನ ದಾಳಿಯನ್ನೇ ನಡೆಸಲಿಲ್ಲ ಎನ್ನಲಾಗಿದೆ.

Follow Us:
Download App:
  • android
  • ios