‘ಮೆಟ್ರೊ ಟಿಕೆಟ್‌ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ದರ ಏರಿಕೆ ಮಾಡುವುದಾದರೆ, ಮುಂದಿನ ಎರಡು ವರ್ಷ ದರ ಏರಿಕೆ ಒಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸವಾಲು

ಬೆಂಗಳೂರು : ‘ಮೆಟ್ರೊ ಟಿಕೆಟ್‌ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ದರ ಏರಿಕೆ ಮಾಡುವುದಾದರೆ, ಮುಂದಿನ ಎರಡು ವರ್ಷ ದರ ಏರಿಕೆ ಒಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸವಾಲು ಹಾಕಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಬೆಂಗಳೂರು ಮೆಟ್ರೋದಲ್ಲಿ ಶೇ.87ರಷ್ಟು ಸರ್ಕಾರದ ಪಾಲಿದೆ ಎಂದು ಹೇಳುತ್ತದೆ. ಆದರೆ, ಟಿಕೆಟ್‌ ದರ ಏರಿಕೆ ಮಾಡಿರುವುದು ಕೇಂದ್ರ ಸರ್ಕಾರ ಎಂದು ಆರೋಪಿಸುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಎಂಆರ್‌ಸಿಎಲ್‌ಗೆ ವ್ಯವಸ್ಥಾಪಕ ನಿರ್ದೇಶಕರ ನೇಮಕ, ಸಾವಿರಾರು ಕೋಟಿ ರು. ಟೆಂಡರ್‌ ಕರೆಯುವುದು ರಾಜ್ಯ ಸರ್ಕಾರ. ರಾಜ್ಯ ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಟೆಂಡರ್‌ ಅಂತಿಮಗೊಳಿಸುತ್ತಾರೆ. ಇಷ್ಟೆಲ್ಲ ಅಧಿಕಾರವಿರುವಾಗ, ದರ ಏರಿಕೆಯನ್ನೂ ಇವರೇ ಮಾಡಿದ್ದಾರೆ. ಕೇಂದ್ರ ಸರ್ಕಾರ ಆದೇಶ ಮಾಡಿದರೆ ಎಲ್ಲ ಮೆಟ್ರೊ ನಿಗಮಗಳಲ್ಲೂ ಟಿಕೆಟ್‌ ದರ ಏರಿಕೆಯಾಗಬೇಕಾಗುತ್ತದೆ ಎಂದು ಹೇಳಿದರು.

ಬಿಎಂಆರ್‌ಸಿಎಲ್‌, ರಾಜ್ಯ ಸರ್ಕಾರದಿಂದ ಏರಿಕೆ:

ದರ ನಿಗದಿ ಸಮಿತಿ ಸ್ವತಂತ್ರ ಸಮಿತಿಯಾಗಿದ್ದು, ನಿವೃತ್ತ ನ್ಯಾಯಧೀಶರು, ರಾಜ್ಯ ಸರ್ಕಾರ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಸರ್ಕಾರದ ಒಬ್ಬ ಪ್ರತಿನಿಧಿ ಇರುತ್ತಾರೆ. ಈ ಸಮಿತಿ ದರ ಏರಿಕೆ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಿಲ್ಲ. ಕಳೆದ ವರ್ಷ ಇದೇ ಸಮಿತಿ ಶಿಫಾರಸ್ಸಿನಂತೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ರಾಜ್ಯ ಸರ್ಕಾರವೇ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದು ಪ್ರತಿಪಾದಿಸಿದರು.

ಕೇಂದ್ರಕ್ಕೆ ಅಧಿಕಾರ ಕೊಡಿ:

ಇದೇ ಮುಖ್ಯಮಂತ್ರಿ ಸಿದ್ಧರಾಮಯ್ಯ 2025ರ ಫೆಬ್ರವರಿಯಲ್ಲಿ ಮಾಡಿದ್ದ ಟ್ವಿಟ್‌ನಲ್ಲಿ ದರ ಇಳಿಕೆಗೆ ಸೂಚನೆ ನೀಡಿದ್ದೇನೆ ಎಂದಿದ್ದರು. ಹಾಗಾದರೆ ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಹೇಗೆ ಬಂದಿದೆ? ಸರ್ಕಾರ ಪಾಪರ್‌ ಆಗಿರುವುದರಿಂದ ಈಗ ಟಿಕೆಟ್‌ ದರ ಏರಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ದರ ಏರಿಕೆಯ ಅಧಿಕಾರ ಇದೆ ಎಂದು ಹೇಳುವುದಾದರೆ, ಇನ್ನು ಮುಂದೆ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ‌ ನೀಡಬೇಕು. ಟೆಂಡರ್‌ಗಳನ್ನು ಕರೆಯುವ ಹಾಗೂ ವರ್ಗಾವಣೆಯ ಅಧಿಕಾರವನ್ನು ಕೇಂದ್ರಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂಬಂಧ ನಾನು ಕೇಂದ್ರದ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಟಿಕೆಟ್‌ ದರ ಏರಿಕೆಯಿಂದ ತೊಂದರೆಯಾಗುತ್ತದೆ ಹಾಗೂ ಇದನ್ನು ತನಿಖೆ ಮಾಡಿ ಎಂದು ಹೇಳಿದ್ದೇನೆ. ಕೇಂದ್ರ ಸರ್ಕಾರ ಜನರ ಪರವಾಗಿ ಧ್ವನಿ ಎತ್ತಿ ದರ ಏರಿಕೆಯನ್ನು ತಡೆಹಿಡಿದಿದೆ ಎಂದು ಆರ್‌.ಅಶೋಕ್‌ ಹೇಳಿದರು.