ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್‌ ಹೆಗ್ಡೆ ಅವರ ಚಿತಾಭಸ್ಮವನ್ನು ಶುಕ್ರವಾರ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಮಾರ್ಕಾಂಡೇಶ್ವರ ದೇವಸ್ಥಾನದ ಬಳಿಯ ಭದ್ರಾನದಿಯಲ್ಲಿ ವಿಸರ್ಜಿಸಲಾಯಿತು. ಸಿದ್ಧಾರ್ಥ್‌ ಅವರ ಮಕ್ಕಳಾದ ಅಮಾರ್ಥ್ಯ ಮತ್ತು ಈಶಾನ್‌ ಅವರು ಚಿತಾಭಸ್ಮ ವಿಸರ್ಜನೆಯ ಪೂರ್ವ ವಿಧಿ ವಿಧಾನಗಳನ್ನು ನೆರವೇರಿಸಿದರು.

ಚಿಕ್ಕಮಗಳೂರು(ಆ.10): ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್‌ ಹೆಗ್ಡೆ ಅವರ ಚಿತಾಭಸ್ಮವನ್ನು ಶುಕ್ರವಾರ ಬಾಳೆಹೊನ್ನೂರು ಸಮೀಪದ ಖಾಂಡ್ಯದ ಮಾರ್ಕಾಂಡೇಶ್ವರ ದೇವಸ್ಥಾನದ ಬಳಿಯ ಭದ್ರಾನದಿಯಲ್ಲಿ ವಿಸರ್ಜಿಸಲಾಯಿತು.

ಸಿದ್ಧಾರ್ಥ್‌ ಅವರ ಮಕ್ಕಳಾದ ಅಮಾರ್ಥ್ಯ ಮತ್ತು ಈಶಾನ್‌ ಅವರು ಚಿತಾಭಸ್ಮ ವಿಸರ್ಜನೆಯ ಪೂರ್ವ ವಿಧಿ ವಿಧಾನಗಳನ್ನು ನೆರವೇರಿಸಿದರು. ಖಾಂಡ್ಯಕ್ಕೆ ಆಗಮಿಸಿದ ಸಿದ್ಧಾರ್ಥ್‌ ಅವರ ಮಕ್ಕಳು ಚಿತಾಭಸ್ಮ ವಿಸರ್ಜನೆಗೂ ಮುನ್ನ ಅರ್ಚಕರಿಂದ ವಿವಿಧ ವಿಧಿಗಳನ್ನು ನೆರವೇರಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಸಿದ್ಧಾರ್ಥ್‌ ಅವರ ಪತ್ನಿ ಮಾಳವಿಕಾ ಸಿದ್ಧಾರ್ಥ್‌, ತಾಯಿ ವಾಸಂತಿ ಹೆಗ್ಡೆ, ಶಾಸಕ ಟಿ.ಡಿ.ರಾಜೇಗೌಡ, ವಿಧಾನಪರಿಷತ್ತು ಮಾಜಿ ಸದಸ್ಯ ಎಸ್‌.ವಿ.ಮಂಜುನಾಥ್‌, ಮಾಜಿ ಎಸ್‌.ಎಂ. ಕೃಷ್ಣ ಅವರ ಕುಟುಂಬಸ್ಥರಾದ ಮದ್ದೂರು ಕಡೆಯವರೂ ಸಹ ಭಾಗವಹಿಸಿದ್ದರು. ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ಸಿದ್ಧಾರ್ಥ್‌ ಹಾಗೂ ಮಾಳವಿಕಾ ಅವರ ಹತ್ತಿರದ ಸಂಬಂಧಿಗಳು ಮಾತ್ರ ಇದ್ದರು.

ಬೆಂಗಳೂರು: ಸಿದ್ಧಾರ್ಥ ನೆನಪಿಗೆ ಉಚಿತ ಕಾಫಿ ವಿತರಣೆ

ಖಾಂಡ್ಯದ ಮಾರ್ಕಾಂಡೇಶ್ವರ ದೇಗುಲದ ತಟದಲ್ಲಿರುವ ಭದ್ರಾನದಿಯು ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತಿದ್ದು, ಮೃತರಾದವರ ಅಸ್ಥಿಯನ್ನು ಇಲ್ಲಿ ವಿಸರ್ಜಿಸಿದರೆ ಅವರ ಆತ್ಮಗಳಿಗೆ ಶಾಂತಿ ದೊರೆಯಲಿದೆ ಎಂಬ ನಂಬಿಕೆ ಇದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಕೇಂದ್ರದ ಸಚಿವ ಅನಂತಕುಮಾರ್‌ ಅವರ ಚಿತಾಭಸ್ಮವನ್ನೂ ಸಹ ಇಲ್ಲಿ ವಿಸರ್ಜಿಸಿದ್ದನ್ನು ಸ್ಮರಿಸಬಹುದು.