ಬೆಂಗಳೂರಿನ ಪೊಲೀಸರು ಪ್ರತಿಷ್ಠಿತ ಕಾಲೇಜು ಯುವತಿಯರನ್ನು ಅತ್ಯಾ*ಚಾರ ಮಾಡುತ್ತಿದ್ದ ದಂಧೆ ಭೇದಿಸಿದ್ದಾರೆ. ಈವರೆಗೆ 19 ಯುವತಿಯರನ್ನ ವಿಲ್ಲಾ ಪಾರ್ಟಿಗೆ ಆಹ್ವಾನಿಸಿ, ಡ್ರಗ್ಸ್ ನೀಡಿ ಅತ್ಯಾ*ಚಾರ ಎಸಗುತ್ತಿದ್ದಾರೆನ್ನಲಾಗಿದೆ. ಮಾಸ್ಟರ್ ಮೈಂಡ್ ನಿಕಿಲ್ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ.
ಬೆಂಗಳೂರು (ಫೆ.27): ರಾಜಧಾನಿಯ ಪ್ರತಿಷ್ಠಿತ ಕಾಲೇಜು ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಭೀಕರ 'ಅತ್ಯಾ*ಚಾರ ದಂಧೆ'ಯನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಸಕಲೇಶಪುರ ಮೂಲದ ನಿಕಿಲ್ ಮತ್ತು ಆತನಿಗೆ ಸಾಥ್ ನೀಡುತ್ತಿದ್ದ ಪಶ್ಚಿಮ ಬಂಗಾಳದ ಡಿಕ್ಸನ್ ಸಾಂಡ್ರಾ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ, ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಇದು ಕೇವಲ ಒಬ್ಬ ಯುವತಿಯ ಮೇಲೆ ನಡೆದ ಹಲ್ಲೆಯಲ್ಲ, ಬದಲಿಗೆ ಹತ್ತಾರು ಹೆಣ್ಣುಮಕ್ಕಳ ಜೀವನದೊಂದಿಗೆ ಆಟವಾಡಿರುವ ದೊಡ್ಡ ಜಾಲ ಎನ್ನುವುದು ಪತ್ತೆಯಾಗಿದೆ.
ದಂಧೆಯ ಸ್ವರೂಪ: ಇನ್ಸ್ಟಾಗ್ರಾಮ್ ಟು ವಿಲ್ಲಾ ಪಾರ್ಟಿ
ಆರೋಪಿ ನಿಕಿಲ್ ಬಸವೇಶ್ವರ ನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಹಾಗೂ ಕಾರ್ ವಾಶಿಂಗ್ ಸೆಂಟರ್ ನಡೆಸುತ್ತಿದ್ದನು. ಆದರೆ ಈ ಉದ್ಯೋಗದ ಮರೆಯಲ್ಲಿ ಆತ ನಡೆಸುತ್ತಿದ್ದದ್ದೇ ಬೇರೆ. ನಿಕಿಲ್ ತನ್ನ ಗ್ಯಾಂಗ್ನಲ್ಲಿದ್ದ ಡಿಕ್ಸನ್ ಹಾಗೂ ಇನ್ನಿತರ ಮೂರ್ನಾಲ್ಕು ಹುಡುಗರಿಗೆ ನಗರದ ಪ್ರತಿಷ್ಠಿತ ಕಾಲೇಜುಗಳ ಶ್ರೀಮಂತ ಯುವತಿಯರನ್ನು ಸೆಳೆಯುವ 'ಟಾಸ್ಕ್' ನೀಡಿದ್ದನು. ಈ ಹುಡುಗರು ಇನ್ಸ್ಟಾಗ್ರಾಮ್ ಮೂಲಕ ಯುವತಿಯರ ಜೊತೆ ಸ್ನೇಹ ಬೆಳೆಸುತ್ತಿದ್ದರು. ಗೆಳೆತನ ಗಾಢವಾದ ಮೇಲೆ, 'ಜಕ್ಕೂರು ಬಳಿಯ ವಿಲ್ಲಾದಲ್ಲಿ ಅದ್ಭುತ ಪಾರ್ಟಿ ಇದೆ, ಬನ್ನಿ ಎಂಜಾಯ್ ಮಾಡೋಣ' ಎಂದು ಆಹ್ವಾನಿಸುತ್ತಿದ್ದರು.
ಮತ್ತು ಬರುವ ಮಾತ್ರೆ, ಡ್ರಗ್ಸ್ ನೀಡಿ ಪೈಶಾಚಿಕ ಕೃತ್ಯ
ಪಾರ್ಟಿಗೆ ಬರುತ್ತಿದ್ದ ಯುವತಿಯರಿಗೆ ಮೊದಲು ಮದ್ಯಪಾನ ಹಾಗೂ ಡ್ರಗ್ಸ್ ನೀಡಲಾಗುತ್ತಿತ್ತು. ಕೆಲವು ಯುವತಿಯರು ಆರೋಪಿಗಳ ಆಸೆಗೆ ಒಪ್ಪದಿದ್ದಾಗ, ಅವರಿಗೆ ತಿಳಿಯದಂತೆ ಪಾನೀಯಗಳಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಲಾಗುತ್ತಿತ್ತು. ಯುವತಿಯರು ಅರೆಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆಯೇ ನಿಕಿಲ್ ಮತ್ತು ಆತನ ತಂಡ ಪೈಶಾಚಿಕವಾಗಿ ಅತ್ಯಾ*ಚಾರ ಎಸಗುತ್ತಿದ್ದರು. ಮರುದಿನ ಬೆಳಿಗ್ಗೆ ಯುವತಿಯರು ಪ್ರಶ್ನಿಸಿದರೆ, 'ನಾವೆಲ್ಲರೂ ಕುಡಿದ ನಶೆಯಲ್ಲಿದ್ದೆವು, ಏನಾಗಿದೆ ಎಂದು ನಮಗೂ ಗೊತ್ತಿಲ್ಲ' ಎಂದು ಹೇಳಿ ನಂಬಿಸಿ ಕಳುಹಿಸುತ್ತಿದ್ದರು. ಮರ್ಯಾದೆಗೆ ಅಂಜಿ ಇದುವರೆಗೆ ಯಾರು ದೂರು ನೀಡಿರಲಿಲ್ಲ, ಆದರೆ ಒಬ್ಬ ಧೈರ್ಯವಂತ ಯುವತಿ ನೀಡಿದ ದೂರಿನಿಂದ ಇಡೀ ದಗಾಕೋರರ ತಂಡ ಸಿಕ್ಕಿಬಿದ್ದಿದೆ.
ಐಪಿಎಸ್ ಅಧಿಕಾರಿಯ ವಿಲ್ಲಾ ಲಿಂಕ್ ಹಾಗೂ ಪ್ರಭಾವಿಗಳ ಒತ್ತಡ!
ತನಿಖೆಯ ವೇಳೆ ಪೊಲೀಸರಿಗೂ ಆಘಾತಕಾರಿ ವಿಷಯವೊಂದು ತಿಳಿದುಬಂದಿದೆ. ಈ ಪಾರ್ಟಿಗಳು ನಡೆಯುತ್ತಿದ್ದ ಜಕ್ಕೂರು ಸಮೀಪದ ವಿಲ್ಲಾ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಗೆ ಸೇರಿದ್ದೆನ್ನಲಾಗಿದೆ. ಈ ಬಗ್ಗೆ ಪೊಲೀಸರು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ನಿಕಿಲ್ ಬಂಧನವಾಗುತ್ತಿದ್ದಂತೆಯೇ ಕೆಲವು ಪ್ರಭಾವಿಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದರು. 'ನಿಕಿಲ್ ಒಳ್ಳೆಯವನು, ಸ್ವಲ್ಪ ನೋಡಿಕೊಂಡು ತನಿಖೆ ಮಾಡಿ' ಎಂಬ ಶಿಫಾರಸುಗಳು ಬಂದಿದ್ದವು. ಆದರೆ ನಿಕಿಲ್ ಮಾಡಿರುವ ಕೃತ್ಯಗಳ ಸಾಕ್ಷ್ಯಗಳು ಸಿಗುತ್ತಿದ್ದಂತೆಯೇ ಆ ಪ್ರಭಾವಿಗಳು ಕೂಡ ಹಿಂದೆ ಸರಿದಿದ್ದಾರೆ.
ಬಲಿಪಶುಗಳಾದವರ ಸಂಖ್ಯೆ 19ಕ್ಕೆ ಏರಿಕೆ!
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇದುವರೆಗೆ ಸುಮಾರು 19 ಯುವತಿಯರು ಪೊಲೀಸರನ್ನು ಸಂಪರ್ಕಿಸಿ ತಮಗಾದ ಅನ್ಯಾಯವನ್ನು ವಿವರಿಸಿದ್ದಾರೆ ಎನ್ನಲಾಗಿದೆ. ಅಮೃತಹಳ್ಳಿ ಪೊಲೀಸರು ಈ ಎಲ್ಲಾ 19 ಸಂತ್ರಸ್ತೆಯರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ನಿಕಿಲ್ ಮತ್ತು ಆತನ ತಂಡ ಕೇವಲ ಕಾಮದ ಹಸಿವಿಗಾಗಿ ಮಾತ್ರವಲ್ಲದೆ, ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.


