ಪಂಚಮಸಾಲಿ ಸಮಾವೇಶದ ವೇಳೆ ನಿಯಮ ಉಲ್ಲಂಘನೆ| ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌| ಫೆ.21ರಂದು ನಡೆದ ಪಂಚಮಸಾಲಿ ಸಮಾವೇಶದಲ್ಲಿ 80 ಸಾವಿರ ಮಂದಿ ಭಾಗಿ| 

ಬೆಂಗಳೂರು(ಮಾ.25): ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ನಡೆಸಲಾಗಿದ್ದ ಸಮಾವೇಶದ ವೇಳೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್‌ ಕಿಟ್‌ ಫೌಂಡೇಷನ್‌ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ನ್ಯೂಸ್ ಅವರ್; ಸಿಂಗಲ್ ಹೆಂಡ್ತಿ ಚಾಲೆಂಜ್, ಕೊರೋನಾ ಕಂಟ್ರೋಲ್‌ಗೆ ಹೊಸ ರೂಲ್ಸ್

ಈ ವೇಳೆ ಸರ್ಕಾರಿ ವಕೀಲರು ಮೆಮೋ ಸಲ್ಲಿಸಿ, ಫೆ.21ರಂದು ನಡೆದ ಪಂಚಮಸಾಲಿ ಸಮಾವೇಶದಲ್ಲಿ 80 ಸಾವಿರ ಮಂದಿ ಭಾಗಿಯಾಗಿದ್ದರು. ಸ್ವಾತಂತ್ರ್ಯ ಉದ್ಯಾನದವರೆಗಿನ ರಾರ‍ಯಲಿಯಲ್ಲಿ ನಾಲ್ಕು ಸಾವಿರ ಜನ ಇದ್ದರು. ಈ ವೇಳೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ವಿಜಯಾನಂದ ಕಾಶಪ್ಪನವರ್‌ ವಿರುದ್ಧ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ನೀಡಿದರು. ಅಲ್ಲದೇ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸುವವರಿಗೆ 250 ರು. ಹಾಗೂ ಇತರ ಪ್ರದೇಶಗಳಲ್ಲಿ 100 ರು. ದಂಡ ವಿಧಿಸಲಾಗುತ್ತಿದೆ. ಮಾರ್ಗಸೂಚಿ ಪಾಲಿಸದ ಪಾರ್ಟಿ ಹಾಲ್‌ಗಳಿಗೆ ಐದು ಸಾವಿರ, ಎಸಿ ಪಾರ್ಟಿ ಹಾಲ್‌, ಶೋರೂಂಗಳು, ಕಲ್ಯಾಣಮಂಟಪ, ಸ್ಟಾರ್‌ ಹೋಟೆಲ್‌ಗಳಿಗೆ ಹತ್ತು ಸಾವಿರ ರು. ಹಾಗೂ ರಾರ‍ಯಲಿ, ಸಾರ್ವಜನಿಕ ಸಭೆಗಳ ಆಯೋಜಕರಿಗೆ ಹತ್ತು ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿ ಮಾರ್ಷಲ್‌ಗಳು, ಹೆಡ್‌ ಕಾನ್‌ಸ್ಟೆಬಲ್‌ ಶ್ರೇಣಿ ಹಾಗೂ ಅದಕ್ಕೂ ಮೇಲಿನ ಪೊಲೀಸ್‌ ಅಧಿಕಾರಿಗಳು, ಹೆಲ್ತ್‌ ಇನ್‌ಸ್ಪೆಕ್ಟರ್‌ಗಳು ಹಾಗೂ ಬಿಲ್‌ ಕಲೆಕ್ಟರ್‌ಗಳು ದಂಡ ಸ್ವೀಕರಿಸಲಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.