ವಿಜಯಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ₹2 ಸಾವಿರ ನೀಡಿ, ತೆರಿಗೆಗಳ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು,

ವಿಜಯಪುರ (ಫೆ.28): ಮಹಿಳೆಯರು 5 ಗ್ಯಾರಂಟಿಗಳ ಪೈಕಿ ₹2 ಸಾವಿರಕ್ಕೆ ಮರುಳಾಗುತ್ತಿದ್ದಿರಿ. ಒಂದು ವೇಳೆ ನಾವು ಅಧಿಕಾರದಲ್ಲಿ ಇದ್ದಿದ್ದರೆ ₹5 ಸಾವಿರ ಕೊಡುತ್ತಿದ್ದೇವು. ₹2 ಸಾವಿರ ಕೊಟ್ಟಂತೆ ಮಾಡಿ, ನಿಮ್ಮ ಮೇಲೆ ತೆರಿಗೆ ಹಾಕಿ ಬದುಕು ಬೀದಿಗೆ ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪರೋಕ್ಷವಾಗಿ ಆರೋಪಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದ ಸಿಂದಗಿ ಬೈಪಾಸ್ ರಸ್ತೆ ಬಳಿ ಶುಕ್ರವಾರ ನಡೆದ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ ಹಾಗೂ ಕಿತ್ತೂರು ಕರ್ನಾಟಕ ಬೃಹತ್ ಜನತಾ ಸಮಾವೇಶದಲ್ಲಿ ಅವರು ಮಾತನಾಡಿ, ಸರ್ಕಾರವು ಎರಡೂವರೆ ವರ್ಷದಲ್ಲಿ ವಸ್ತುಗಳ ಖರೀದಿಗೆ ಹಾಕಿದ ಟ್ಯಾಕ್ಸ್, ಮದ್ಯಕ್ಕೆ ಹಾಕಿದ ತೆರಿಗೆಯನ್ನು ನೀವು ಲೆಕ್ಕ ಹಾಕಿ. ಆ ತೆರಿಗೆ ದುಡ್ಡನ್ನು ನಿಮ್ಮ ಮನೆ ಯಜಮಾನರು ಸರ್ಕಾರಕ್ಕೆ ನೀಡಬೇಕು. ಆಸ್ತಿ ನೋಂದಣಿ, ವಿದ್ಯುತ್ ದರ ಏರಿಕೆ ಸೇರಿದ ಹಲವು ವಿಷಯಗಳಿವೆ ಎಂದು ಹೇಳಿದರು.

ರಾಜ್ಯದಲ್ಲಿ ಲೂಟಿ ಹೊಡೆಯಲಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಕಮಿಷನ್ ಆರೋಪ ಕೇಳಿ ಬಂದಿದೆ. ನನ್ನ ಅವಧಿಯಲ್ಲಿ ಎಂದಾದರೂ ಗುತ್ತಿಗೆದಾರರು ಆರೋಪ ಮಾಡಿದ್ದರಾ? ನನ್ನ ಅವಧಿಯಲ್ಲಿ ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಹಣ ನೀಡಲಾಗಿದೆ ಎಂದರು.

ಸಾಲ ಮನ್ನಾ ಮಾಡುವಾಗ ನಿಮ್ಮ ಮೇಲೆ ಹೊರೆ ಹಾಕಿಲ್ಲ

ನಾನು ಸಾಲ ಮನ್ನಾ ಮಾಡುವಾಗ ನಿಮ್ಮ ಮೇಲೆ ಹೊರೆ ಹಾಕಿಲ್ಲ. ಗ್ಯಾರಂಟಿ ಹೊರೆಯಾಗಿದೆ ಎಂದು ಅವರೇ ಹೇಳುತ್ತಿದ್ದಾರೆ. ಹಳ್ಳಿಗಳಲ್ಲಿ ಚರಂಡಿ ಸಹಿತ ಚೆನ್ನಾಗಿಲ್ಲ, ನೀರು ಹರಿದುಕೊಂಡು ರಸ್ತೆ ಮೇಲೆ ಬರುತ್ತದೆ ಎಂದ ಅವರು, ಯಾವುದೇ ಸರ್ಕಾರಗಳು 50 ವರ್ಷಗಳಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ. ದೇವೇಗೌಡರು ₹20 ಸಾವಿರ ಕೋಟಿ ಅನುದಾನವನ್ನು ಯೋಜನೆಗೆ ನೀಡಿದರು. ಇದನ್ನು ಉತ್ತರ ಕರ್ನಾಟಕ ಜನ ಮರೆಯುವ ಹಾಗಿಲ್ಲ ಎಂದರು. ಕಾಂಗ್ರೆಸ್‌ ಸರ್ಕಾರ ₹7 ಲಕ್ಷ 65 ಸಾವಿರ ಕೋಟಿ ಸಾಲ ಮಾಡಿದೆ. ಈಗ ಬಜೆಟ್ ಮಂಡನೆ ವೇಳೆ ಮತ್ತೆ ಸಾಲ ಮಾಡಲು ಹೊರಟಿದ್ದಾರೆ. ಈ ಸಾಲ ತೀರಿಸೋರು ಯಾರು? ಈ ಸಾಲವನ್ನು ನೀವೇ ತೀರಿಸಬೇಕು ಎಂದರು.

ಧಾರವಾಡದಲ್ಲಿ ಯುವಕರ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ನಾನು ಸಿಎಂ ಆಗಿದ್ದಾಗ 56 ಸಾವಿರ ಶಿಕ್ಷಕರ ನೇಮಕ ಮಾಡಿದ್ದೆ. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ? ಎಂದು ಪ್ರಶ್ನಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾದಗಿರಿ ಸಭೆಯಲ್ಲಿ ‘ನಮಗೆ ಸಿಂಗಾಪುರ ಮಾಡಬೇಡಿ, ಮೈಸೂರು ಕನಕಪುರ ಕೆಲಸ ಮಾಡಿಕೊಡಿ’ ಎಂದಿದ್ದಾರೆ. ಕೆಲ ನಾಯಕರು ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ, ಪ್ರತ್ಯೇಕ ರಾಜ್ಯ ಕೊಡಿ ಎನ್ನುವವರನ್ನು ನಂಬಬೇಡಿ. ಇವರೆ ನಿಜವಾದ ಶತ್ರುಗಳು. ನಿಮ್ಮ ಕಲಬುರಗಿ ಭಾಗ ಯಾಕೆ ಅಭಿವೃದ್ಧಿಯಾಗಿಲ್ಲ? ನೀವು ಎಷ್ಟು ವರ್ಷ ಅಧಿಕಾರಲ್ಲಿದ್ದಿರಿ? ನಿಮ್ಮ ಮಗ ಅಧಿಕಾರದಲ್ಲಿದ್ದಾರೆ, ಆದರೂ ಯಾಕೆ ಅಭಿವೃದ್ಧಿ ಮಾಡಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿದರೆ ಮುಗಿತಾ ಏನು ಅಭಿವೃದ್ಧಿ ಮಾಡಿದ್ದಿರಿ ಎಂದು ಪ್ರಶ್ನಿಸಿದರು.