ಶಾಸಕನ ರಾಜೀನಾಮೆಗೆ ಒತ್ತಡ : ಡಿಸೆಂಬರ್ ಬಳಿಕ ಶಕ್ತಿ ತೋರಿಸ್ತೀನೆಂದು ಸವಾಲ್
ರಾಜ್ಯದ ಶಾಸಕರೋರ್ವರ ರಾಜೀನಾಮೆಗೆ ಪಕ್ಷದ ಮುಖಂಡರಿಮದ ಹೆಚ್ಚಿದ ಒತ್ತಡ
ಸ್ವತಂತ್ರನಾಗಿ ಕೆಲಸ ಮುಂದುವರಿಸುತ್ತೇನೆಂದ ಶಾಸಕ
ನನ್ನ ಶಕ್ತೀ ಶೀಘ್ರ ತೋರಿಸುತ್ತೇನೆಂದು ಸವಾಲ್
ಚಾಮರಾಜನಗರ (ನ.15): ಬಿಎಸ್ಪಿಗೆ ನನ್ನದೊಂದು ದೊಡ್ಡ ನಮಸ್ಕಾರ. ಡಿಸೆಂಬರ್ ಬಳಿಕ ಕಾರ್ಯಕರ್ತರು, ಬೆಂಬಲಿಗರನ್ನು ಒಗ್ಗೂಡಿಸಿ ನನ್ನ ಶಕ್ತಿ ತೋರಿಸುತ್ತೇನೆಂದು ಶಾಸಕ ಎನ್.ಮಹೇಶ್ ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ನಾಯಕರು ಒಳಗಡೆ ಸೇರಿಸಿಕೊಳ್ಳುವ ಮಾತಾಡುತ್ತಿಲ್ಲ. ಸೇರಿಸಿಕೊಳ್ಳುವ ಮನಸ್ಥಿತಿಯಲ್ಲೂ ಅವರಿಲ್ಲ. ಶಾಸಕ ಎನ್.ಮಹೇಶ್ ಮತ್ತೆ ಬಿಎಸ್ಪಿಗೆ ಬರಬಾರದು ಅಂತ ಒಂದಷ್ಟುಪಟ್ಟಭದ್ರರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಬಿಎಸ್ಪಿಗೆ ವಾಪಸ್ ಹೋಗುವ ಪ್ರಶ್ನೆಯೇ ಉದ್ಭವಿಸಲ್ಲ. ಮನೆಯಿಂದ ಹೊರ ಹಾಕಿದ ಮಗನನ್ನು ಹೇಗೆ ವಾಪಸ್ ಕರೆಯಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಮಗನ ವಿರುದ್ಧ ಅಪಪ್ರಚಾರ ಮಾಡುವುದು ಮನೆಯೊಳಗೆ ಸೇರಿಸಿಕೊಳ್ಳುವುದಕ್ಕಾ..? ,ಬಿಎಸ್ಪಿಯ ದೊಡ್ಡ ನಾಯಕರಿಗೆ, ಬುದ್ಧಿಜೀವಿಗಳಿಗೆ ದೊಡ್ಡ ನಮಸ್ಕಾರ ಮಾಡಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
'ಬಿಎಸ್ಪಿ ಮಹೇಶ್ ಆಡಳಿತ ಪಕ್ಷದವರೆಂದೆ ಪರಿಗಣಿತರು' : ಮುನಿಸಿಕೊಂಡು ನಡೆದ ಶಾಸಕ ...
ಪಕ್ಷದಿಂದ ಉಚ್ಚಾಟನೆ ಮಾಡಿದ ನಂತರ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಅವಕಾಶವಿದ್ದು, ಈಗ ಸ್ವತಂತ್ರ ಶಾಸಕನಾಗಿ ಘೋಷಿಸಿಕೊಂಡು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದೇನೆ. ಹಾಗಾಗಿ ಬಿಎಸ್ಪಿ ನಾಯಕರಿಗೆ ನನ್ನ ರಾಜೀನಾಮೆ ಕೇಳುವ ಹಕ್ಕಿಲ್ಲ. ರಾಜೀನಾಮೆ ಹುಡುಗಾಟಿಕೆ ವಿಚಾರವಲ್ಲ. ನನ್ನ ರಾಜೀನಾಮೆ ಕೇಳಲು ಇವರು ಯಾರು ರಾಜೀನಾಮೆ ಕೊಟ್ಟು ಕ್ಷೇತ್ರದ 2.5 ಲಕ್ಷ ಜನರಿಗೆ ಏನು ಉತ್ತರ ನೀಡಲಿ ಎಂದು ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿರುವ ಬಿಎಸ್ಪಿ ಮುಖಂಡರಿಗೆ ಟಾಂಗ್ ನೀಡಿದರು.
ಇದೇ ವೇಳೆ, ಶಾಲೆಗಳ ಪ್ರಾರಂಭ, ಶುಲ್ಕ ವಸೂಲಾತಿ ಕುರಿತು ಪ್ರತಿಕ್ರಿಯಿಸಿ, ಖಾಸಗಿ ಶಾಲೆಗಳು ಪೋಷಕರು ಹಾಗೂ ಮಕ್ಕಳ ಮೇಲೆ ಒತ್ತಡ ತರುವ ಕೆಲಸ ಮಾಡಬಾರದು. ಅದು ಅಪರಾಧ. ಯಾವುದೇ ವರ್ಗದ ಜನರ ಬದುಕು ಸಹಜ ಸ್ಥಿತಿಗೆ ಬಂದಿಲ್ಲ. ಇಡೀ ಜಗತ್ತು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಶುಲ್ಕ ಪಾವತಿಸುವಂತೆ ಒತ್ತಡ ತರಬಾರದು ಎಂದು ಸಲಹೆ ನೀಡಿದರು.