6 ತಿಂಗಳ ಹಿಂದೆ ಉಡುಪಿ ನಗರದಲ್ಲಿ ಸುತ್ತಾಡುತ್ತಿದ್ದ ಮಾನಸಿಕ ಅಸ್ವಸ್ಥ  ಬಾಲಕ ದೀಪಕ್‌ನನ್ನು ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಉಪ್ಪೂರಿನ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ ಸ್ಪಂದನಾಕ್ಕೆ ಸೇರಿಸಿದ್ದರು. ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದ ಓಡಿಸ್ಸಾ ರಾಜ್ಯದ ಪಟ್ನಾಘಡ್‌ನ ನಿವಾಸಿ ಜೋಗೇಂದ್ರ ಮೆಹರ್. 

ಉಡುಪಿ(ಜು.23): ಯುಟ್ಯೂಬ್ ಸಹಾಯದಿಂದ, ಕಾಣೆಯಾಗಿದ್ದ ಬಾಲಕನೊಬ್ಬ 6 ತಿಂಗಳ ನಂತರ ಹೆತ್ತವರನ್ನು ಸೇರಿದ ಅಪರೂಪದ ಘಟನೆ ಉಡುಪಿಯಲ್ಲಿ ನಡೆದಿದೆ. ದೂರದ ಒಡಿಸ್ಸಾದ ಬಾಲಕ ದೀಪಕ್ (19) ಇಲ್ಲಿನ ಸಮಾಜ ಸೇವಕ ಮಾನವೀಯತೆಯಿಂದಾಗಿ ಮನೆಗೆ ಮರಳಿದ್ದಾನೆ.

6 ತಿಂಗಳ ಹಿಂದೆ ಉಡುಪಿ ನಗರದಲ್ಲಿ ಸುತ್ತಾಡುತ್ತಿದ್ದ ಮಾನಸಿಕ ಅಸ್ವಸ್ಥ ಬಾಲಕ ದೀಪಕ್ (19) ನ್ನು ಸಮಾಜ ಸೇವಕ ವಿಶು ಶೆಟ್ಟಿ ರಕ್ಷಿಸಿ ಉಪ್ಪೂರಿನ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ ಸ್ಪಂದನಾಕ್ಕೆ ಸೇರಿಸಿದ್ದರು. ಅತ್ತ ಓಡಿಸ್ಸಾ ರಾಜ್ಯದ ಪಟ್ನಾಘಡ್‌ನ ನಿವಾಸಿ ಜೋಗೇಂದ್ರ ಮೆಹರ್ ಅವರು ತಮ್ಮ ಮಗ ಕಾಣೆಯಾಗಿರುವ ಬಗ್ಗೆ ಅಲ್ಲಿ ಪೊಲೀಸರಿಗೆ ದೂರು ನೀಡಿದ್ದರು. 

ಬಿ.ಕೆ.ಹರಿಪ್ರಸಾದ್‌ ನೋವು ಸರ್ಕಾರಕ್ಕೆ ಅಪಾಯಕಾರಿ: ಕೋಟ ಶ್ರೀನಿವಾಸ ಪೂಜಾರಿ

ಇತ್ತೀಚಿಗೆ ಗ್ರೇಟ್ ಇಂಡಿಯನ್ ಎಎಸ್‌ಎಂಆರ್ ಎಂಬ ಯೂಟ್ಯೂಬ್ ಚಾನಲ್‌ನವರು ಸ್ಪಂದನಾಕ್ಕೆ ಬಂದು ಭೋಜನ ನೀಡಿ, ಈ ಸಂದರ್ಭದಲ್ಲಿ ಸ್ಪಂದನಾವಾಸಿಗಳನ್ನು ಚಿತ್ರೀಕರಿಸಿ ಯೂಟ್ಯೂಬ್‌ಗೆ ಹಾಕಿದ್ದರು. ಒಡಿಸ್ಸಾದಲ್ಲಿ ಮೆಹರ್ ಅವರ ಕುಟುಂಬದ ಸ್ನೇಹಿತರೊಬ್ಬರು ಈ ಯುಟ್ಯೂಬ್ ವಿಡಿಯೋವನ್ನು ನೋಡಿದಾಗ ಅದರಲ್ಲಿದ್ದ ದೀಪಕ್‌ನ ಗುರುತು ಹಿಡಿದು ಮೆಹರ್ ಅವರಿಗೆ ಮಾಹಿತಿ ನೀಡಿದರು. ತಕ್ಷಣ ಮೆಹರ್ ಅವರು ಪಟ್ನಾಘಡ್ ಎಎಸ್‌ಐ ಅಜಿತ್ ಮೋಹನ್ ಸೇಟಿ ಅವರೊಂದಿಗೆ ಉಡುಪಿಗೆ ಆಗಮಿಸಿ, ಸ್ಪಂದನಾದ ಮುಖ್ಯಸ್ಥ ಜನಾರ್ಧನ ಮತ್ತು ವಿಶು ಶೆಟ್ಟಿ ಅವರನ್ನು ಭೇಟಿಯಾದರು.

ನಂತರ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಿ ಬಾಲಕನನ್ನು ತಂದೆಯ ವಶಕ್ಕೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಮೆಹರ್ ಅವರು ಮಗನನ್ನು ಕಂಡು ಆನಂದಬಾಷ್ಪ ಸುರಿಸಿದರು. ಬಾಲಕನನ್ನು ಹೆತ್ತವರಿಗೆ ಒಪ್ಪಿಸಿದ ವಿಶು ಶೆಟ್ಟಿ, ಜನಾರ್ದನ ಅವರು ಧನ್ಯತೆಯನ್ನು ವ್ಯಕ್ತಪಡಿಸಿದ್ದಾರೆ.