ಬೋಟ್ನಲ್ಲಿಯೇ ಜನ, ಜಾನುವಾರು ರಕ್ಷಿಸಿದರು ಇಲ್ಲಿ ಅಂಬಿಗರು
ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈ ವೇಳೆ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡರು. ಬೆಳಗಾವಿ ಜಿಲ್ಲೆಗೆ ರಕ್ಷಣಾ ಪಡೆಗಳು ಆಗಮಿಸುವ ಮುನ್ನವೇ ಇಲ್ಲಿನ ಅಂಬಿಗರು ನೂರಾರು ಜನರನ್ನು ರಕ್ಷಣೆ ಮಾಡಿದರು.
ಅಥಣಿ [ಆ.17]: ದಿನವೂ ಬೋಟ್ ನಡೆಸಿಯೇ ಹೊಟ್ಟೆತುಂಬಿಕೊಳ್ಳುವ ಅಂಬಿಗರಿಬ್ಬರು ಕೃಷ್ಣಾ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 300 ಜನರನ್ನು ರಕ್ಷಿಸುವ ಜೊತೆಗೆ ಕೊಚ್ಚಿ ಹೋಗುತ್ತಿದ್ದ ನೂರಾರು ಜಾನುವಾರಗಳನ್ನು ಬೋಟ್ ಮೂಲಕ ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ನಾವಿಕರಾದ ತಂದೆ ರಾವಸಾಬ ಅಂಬಿ ಮತ್ತು ಇವರ ಮಗ ಧನಂಜಯ ಅಂಬಿ ಜೀವದ ಹಂತು ತೊರೆದು ಜನ, ಜಾನುವಾರುಗಳನ್ನು ರಕ್ಷಿಸಿದವರು.
ಖೇಮಲಾಪುರ ಮತ್ತು ಕೃಷ್ಣಾ ಕಿತ್ತೂರ ಗ್ರಾಮದ ಸಂಪರ್ಕ ಸೇತುವೆಯಂತೆ ಇವರು ದಿನವೂ ಬೋಟ್ ನಡೆಸುತ್ತಿದ್ದಾರೆ. ಈ ಅಂಬಿಗರ ರಕ್ಷಣಾ ಕಾರ್ಯ ಮೆಚ್ಚಿದ ಇಡೀ ಗ್ರಾಮವೇ ಸಲಾಮ್ ಹೊಡೆಯುತ್ತಿದ್ದರೆ, ಇವರ ಸಹಾಯದಿಂದ ಬದುಕುಳಿದ ಸಂತ್ರಸ್ತರಂತೂ ಇವರನ್ನು ನಮ್ಮ ಪಾಲಿನ ದೇವರು ಎನ್ನುತ್ತಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಚೆಗೆ ಮಹಾರಾಷ್ಟ್ರದಲ್ಲಿನ ವಿಪರೀತ ಮಳೆ ಹಾಗೂ ಅಲ್ಲಿನ ಜಲಾಶಯಗಳಿಂದ ಬಿಟ್ಟಅಪಾರ ಪ್ರಮಾಣದ ನೀರಿನಿಂದಾಗಿ ಕಾಗವಾಡ ತಾಲೂಕಿನ ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು. ಈ ವೇಳೆ ಅನೇಕ ಕುಟಂಬಗಳು ಹಾಗೂ ಜಾನುವಾರುಗಳು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವು. ಇದನ್ನರಿತ ನಾವಿಕರು ತಮ್ಮ ಪ್ರಾಣದ ಹಂಗುಬಿಟ್ಟು ಹಗಲು ರಾತ್ರಿ ಎನ್ನದೆ ಬೋಟ್ ಕಾರ್ಯಾಚರಣೆ ನಡೆಸಿದ್ದಾರೆ.