ಬೆಂಗಳೂರಿನಿಂದ ಇಲ್ಲಿಗೂ ಇನ್ಮುಂದೆ ಬಿಎಂಟಿಸಿ ಸಂಚಾರ
ಇನ್ಮುಂದೆ ಬೆಂಗಳೂರಿನಿಂದ ಈ ಜಾಗಕ್ಕೂ ಕೂಡ ಬಿಎಂಟಿಸಿ ಬಸ್ಗಳು ಸಂಚಾರ ಮಾಡಲಿವೆ.
ಆನೇಕಲ್ (ನ.10): ಪಂಚಾಯ್ತಿಂದ ಅಂಗೀಕೃತವಾದ ಬಡಾವಣೆಗಳಿಗೆ ಬಸ್, ಬ್ಯಾಂಕ್, ನಂದಿನಿ ಮಳಿಗೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬನ್ನೇರುಘಟ್ಟದ ಜಯರಾಂ ಬಡಾವಣೆಯಿಂದ ಮೆಜೆಸ್ಟಿಕ್ಗೆ ಬಿಎಂಟಿಸಿ ಬಸ್ ಸೌಲಭ್ಯಕ್ಕೆ ಚಾಲನೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ನಗರದ ಹೊರವಲಯದಲ್ಲಿ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಮೂಲ ಸೌಕರ್ಯ ಉನ್ನತೀಕರಿಸಲು ಪಂಚಾಯ್ತಿಗೆ ಸೂಚಿಸಲಾಗುವುದು ಎಂದರು.
ಬಸ್ ಚಾಲನೆ ನೀಡಿದ ಬಳಿಕ ಸಚಿವರೇ ಸ್ಥಳೀಯರಿಗೆ ಸಿಹಿ ಹಂಚಿ, ಅವರ ಸಮಸ್ಯೆಗಳನ್ನು ಆಲಿಸಿದರು.
MSRTC ಬಸ್ ಕಂಡಕ್ಟರ್ ಆತ್ಮಹತ್ಯೆ, ಸಂಬಳ ನೀಡದ ಉದ್ಧವ್ ಸರ್ಕಾರ ವಿರುದ್ಧ ಆಕ್ರೋಶ! ..
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಹೊರವಲಯದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಬನ್ನೇರುಘಟ್ಟರಸ್ತೆ ಅಗಲೀಕರಣ ಒಂದು ಸವಾಲಾಗಿದೆ. ವಿದ್ಯುತ್, ಅರಣ್ಯ ಸೇರಿದಂತೆ ಕೆಲವು ಇಲಾಖೆಗಳ ಸಹಕಾರ ಅಗತ್ಯವಿದೆ. ಇವೆಲ್ಲವುಗಳ ಜೊತೆಗೆ ಕೆರೆ ಅಭಿವೃದ್ಧಿ, ವಾಕಿಂಗ್ ಪಾತ್ ನಿರ್ಮಾಣ ಸೇರಿದಂತೆ ಹಲವು ಜನಪರ ಕಾರ್ಯಗಳೂ ನಡೆಯುತ್ತಿವೆ. ಕೆಲ ಕಾರ್ಖಾನೆಗಳ ಸಿಎಸ್ಆರ್ ಫಂಡ್ಗಳ ಜೊತೆಗೆ ಸ್ಥಳೀಯ ಮುಖಂಡರ ನೆರವೂ ಪಡೆಯಲಾಗಿದೆ ಎಂದರು.
ಮುಖಂಡರಾದ ಜಯರಾಂ, ರಾಜಶೇಖರರೆಡ್ಡಿ, ಬಾಬು ಸಿಂಗ್, ವೆಂಕಟೇಶಗೌಡ ಇದ್ದರು.