Bengaluru: ಎಚ್ಎಎಲ್ನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಕಾಪ್ಟರ್ ಟ್ಯಾಕ್ಸಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಮಧ್ಯೆಯ 35 ಕಿ.ಮೀ. ಪ್ರಯಾಣವು ಪ್ರಯಾಣಿಕರ ಪಾಲಿಗೆ ಹರಸಾಹಸವೇ ಸರಿ. ಟ್ರಾಫಿಕ್ ದಟ್ಟಣೆಯ ಕಾರಣದಿಂದ ಸುಮಾರು ಅರ್ಧ ಗಂಟೆಯ ಪ್ರಯಾಣಕ್ಕೆ ಕನಿಷ್ಠ ಪಕ್ಷ ಎರಡು ಗಂಟೆ ತೆಗೆದುಕೊಳ್ಳುತ್ತಿರುವುದು ಐಟಿ ನಗರಿಯ ಪ್ರಯಾಣಿಕರಿಗೆ ನುಂಗಲಾರದ ತುಪ್ಪವಾಗಿದೆ.
![Blade to start copter service in Bengaluru gvd Blade to start copter service in Bengaluru gvd](https://static-ai.asianetnews.com/images/01ge3dvg47agwrrmarxzs4gtpp/copter-taxi_363x203xt.jpg)
ಬೆಂಗಳೂರು (ಸೆ.29): ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಮಧ್ಯೆಯ 35 ಕಿ.ಮೀ. ಪ್ರಯಾಣವು ಪ್ರಯಾಣಿಕರ ಪಾಲಿಗೆ ಹರಸಾಹಸವೇ ಸರಿ. ಟ್ರಾಫಿಕ್ ದಟ್ಟಣೆಯ ಕಾರಣದಿಂದ ಸುಮಾರು ಅರ್ಧ ಗಂಟೆಯ ಪ್ರಯಾಣಕ್ಕೆ ಕನಿಷ್ಠ ಪಕ್ಷ ಎರಡು ಗಂಟೆ ತೆಗೆದುಕೊಳ್ಳುತ್ತಿರುವುದು ಐಟಿ ನಗರಿಯ ಪ್ರಯಾಣಿಕರಿಗೆ ನುಂಗಲಾರದ ತುಪ್ಪವಾಗಿದೆ. ಈ ಹಿನ್ನೆಲೆಯಲ್ಲಿ ಬ್ಲೇಡ್ ಇಂಡಿಯಾ ಸಂಸ್ಥೆಯು ವಿಮಾನ ನಿಲ್ದಾಣ ಮತ್ತು ನಗರಕ್ಕೆ ತ್ವರಿತ ಸಂಪರ್ಕ ಕಲ್ಪಿಸಲು ಹೆಲಿಕಾಪ್ಟರ್ ಸೇವೆ ಆರಂಭಿಸಲು ಮುಂದಾಗಿದೆ.
ಅಕ್ಟೋಬರ್ 10ರಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮಧ್ಯೆ ಹೆಲಿಕಾಪ್ಟರ್ ಸೇವೆ ಆರಂಭಗೊಳ್ಳಲಿದೆ. ಇದರಿಂದಾಗಿ ರಸ್ತೆಯ ಮೂಲಕ ಸುಮಾರು ಒಂದೂವರೆಯಿಂದ ಎರಡು ಗಂಟೆ ತೆಗೆದುಕೊಳ್ಳುತ್ತಿರುವ ಪ್ರಯಾಣ ಬರೀ ಹನ್ನೆರಡು ನಿಮಿಷಕ್ಕೆ ತಗ್ಗಲಿದೆ.
Bengaluru: ಹೊಸ ವರ್ಷಕ್ಕೆ ಪೀಣ್ಯ ಮೇಲ್ಸೇತುವೆ ಭಾರಿ ವಾಹನಗಳಿಗೆ ಮುಕ್ತ?
ಬ್ಲೇಡ್ ಇಂಡಿಯಾ ಸಂಸ್ಥೆಯು ಐದು ಆಸನ ಸಾಮರ್ಥ್ಯದ ಎಚ್125 ಡಿವಿಜಿ ಏರ್ಬಸ್ ಹೆಲಿಕಾಪ್ಟರನ್ನು ಬಳಸಿ ಸೇವೆ ನೀಡಲಿದೆ. ವಾರದ ಐದು ದಿನ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಬೆಳಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 8.30ಕ್ಕೆ ಎಚ್ಎಎಎಲ್ಗೆ ಮತ್ತು 9ಕ್ಕೆ ಎಚ್ಎಎಲ್ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೆ ಸಂಜೆ, 4.15ಕ್ಕೆ ಎಚ್ಎಎಲ್ನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, 4.45ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ಎಎಲ್ಗೆ ವಿಮಾನ ನಿಲ್ದಾಣಕ್ಕೆ ಸೇವೆ ಇರಲಿದೆ.
ಏಕಮುಖ ಪ್ರಯಾಣಕ್ಕೆ 3,250 ತೆರಿಗೆ ಹೊರತುಪಡಿಸಿ ನಿಗದಿ ಪಡಿಸಲಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣವು ಇಂದಿರಾ ನಗರ, ಕೋರಮಂಗಲ ಮುಂತಾದ ನಗರದ ಶ್ರಿಮಂತ ಪ್ರದೇಶಕ್ಕೆ ಹತ್ತಿರವಾಗಿದ್ದು, ಕಾರ್ಪೋರೆಟ್ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಸೇವೆ ಹೆಚ್ಚು ಪ್ರಯೋಜನವಾಗಲಿದೆ ಎಂಬುದು ಬ್ಲೇಡ್ ಇಂಡಿಯಾದ ಲೆಕ್ಕಾಚಾರ. ಬ್ಲೇಡ್ ಇಂಡಿಯಾ ಮುಂದಿನ ಹಂತದಲ್ಲಿ ವೈಟ್ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಸೇವೆ ನೀಡುವ ಚಿಂತನೆ ಹೊಂದಿದೆ. ಏರ್ಪೋರ್ಟ್ ಜೊತೆ ನಗರವನ್ನು ಕ್ಷಿಪ್ರವಾಗಿ ಬೆಸೆಯಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ನೇರ ಬಸ್ ಸಂಪರ್ಕದ ಜೊತೆಗೆ ಇದೀಗ ರೈಲು ಸೇವೆ ಪ್ರಾರಂಭಿಸಿದೆ.
ಐಷಾರಾಮಿ ಪ್ರವಾಸಕ್ಕೆ ಬಂತು ಸುಸಜ್ಜಿತ ಕ್ಯಾರವಾನ್!
ಬಸ್ ಟ್ರಾಫಿಕ್ನಲ್ಲಿ ಸಿಲುಕುವ ಭಯದಿಂದ ವಿಮಾನದ ನಿಗದಿತ ಸಮಯಕ್ಕಿಂತ ಬಹುಬೇಗ ಪ್ರಯಾಣಿಕರು ಮನೆಯಿಂದ ನಿಲ್ದಾಣಕ್ಕೆ ಹೊರಡಬೇಕಾದ ಅನಿವಾರ್ಯತೆಯಿದೆ. ರೈಲು ಸೇವೆ ಪ್ರಾರಂಭಗೊಂಡಿದ್ದರೂ ಕೆಲವೇ ಕೆಲವು ರೈಲು ಮಾತ್ರ ರೈಲುಗಳು ಲಭ್ಯವಿವೆ. ಇನ್ನು ಓಲಾ, ಉಬೆರ್ ನಂತಹ ಟ್ಯಾಕ್ಸಿಗಳು ಜನದಟ್ಟಣೆಯ ಅವಧಿಯಲ್ಲಿ ಸಾವಿರ ರು.ಗಳಿಗಿಂತ ಹೆಚ್ಚು ದರ ವಿಧಿಸುತ್ತವೆ. ಮೆಟ್ರೋ ಕಾಮಗಾರಿ ಮುಕ್ತಾಯಕ್ಕೆ ಇನ್ನೂ ಎರಡ್ಮೂರು ವರ್ಷ ಕಾಯಲೇಬೇಕಿದೆ. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಸೇವೆ ಪ್ರಾರಂಭಗೊಳ್ಳುತ್ತಿರುವುದು ಟಿಕೆಟ್ ದರ ದುಬಾರಿ ಆದರೂ ತ್ವರಿತವಾಗಿ ಪ್ರಯಾಣಿಸುವ ಉದ್ದೇಶ ಹೊಂದಿರುವವರಿಗೆ ಅನುಕೂಲಕಾರಿಯಾಗಿದೆ.