ಭ್ರಷ್ಟಾಚಾರದ ಹಣದಿಂದ ಬಿಜೆಪಿ(BJP) ಆಡಳಿತ : ಪ್ರಿಯಾಂಕ್‌ ಖರ್ಗೆ ಟೀಕೆ ಯಾದಗಿರಿಯಲ್ಲಿ ವಿಧಾನ ಪರಿಷತ್‌ ಚುನಾವಣಾ ಪ್ರಚಾರ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

ಯಾದಗಿರಿ(ಡಿ.01): ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಕೆಲ ಶಾಸಕರನ್ನು ದುಡ್ಡುಕೊಟ್ಟು ಖರೀದಿ ಮಾಡಿ ಬಿಜೆಪಿ ಆಡಳಿತ ನಡೆಸುತ್ತಿದೆ. ಹಾಗಾಗಿ ಇದು ಸಂವಿಧಾನ ತತ್ವದಡಿಯಲ್ಲಿ ನಡೆಯುತ್ತಿರುವ ಸರ್ಕಾರವಲ್ಲ ಎಂದು ಮಾಜಿ ಸಚಿವ, ಚಿತ್ತಾಪೂರ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

Add Asianetnews Kannada as a Preferred SourcegooglePreferred

ಮಂಗಳವಾರ ಯಾದಗಿರಿ ನಗರದಲ್ಲಿ ಏರ್ಪಡಿಸಲಾಗಿದ್ದ ಕಲಬುರಗಿ- ಯಾದಗಿರಿ ವಿಧಾನಪರಿಷತ್‌ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ರೈತರ ಸಾಲಮನ್ನಾ ಮಾಡಲು ದುಡ್ಡಿಲ್ಲ. ಯುವಕರಿಗೆ ಉದ್ಯೋಗ ಕಲ್ಪಿಸಲು ದುಡ್ಡಿಲ್ಲ. ಮಧ್ಯಾಹ್ನದ ಬಿಸಿ ಊಟಕ್ಕೆ ದುಡ್ಡಿಲ್ಲ. ಆಸ್ಪತ್ರೆಗಳಿಗೆ ಔಷಧಿ ಖರೀದಿಗೂ ದುಡ್ಡಿಲ್ಲ. ಕೊರೋನಾ ನಿಯಂತ್ರಣಕ್ಕೆ ದುಡ್ಡಿಲ್ಲ ಆದರೆ, ಬೇರೆ ಪಕ್ಷದ ಶಾಸಕರಿಗೆ ಕೋಟಿಗಟ್ಟಲೇ ಕೊಡಲು ಹಣ ಎಲ್ಲಿಂದ ತರುತ್ತಾರೆ ? ಎಂದು ಪ್ರಶ್ನಿಸಿದ ಅವರು ಸರ್ಕಾರ ಪೊಲೀಸರ ಮೂಲಕ ಸಾರ್ವಜನಿಕರು ಚಾಲನೆ ಮಾಡುವ ವಾಹನಗಳಿಗೆ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಹಿರಿಯ ಪೊಲೀಸರಿಗೆ ವಿಚಾರಿಸಿದರೆ ದಿನಕ್ಕೆ ಸುಮಾರು 100 ಕೇಸು ದಾಖಲಿಸಲು ಮೇಲಾ​ಕಾರಿಗಳ ಸೂಚನೆ ಇದೆ ಎನ್ನುತ್ತಾರೆ. ನಮ್ಮ ಪಕ್ಷದ ಅ​ಧಿಕಾರದಲ್ಲಿ ಇವೆಲ್ಲ ಇರಲಿಲ್ಲ ಎಂದರು.

Corona in Karnataka : ಡಬಲ್ ಡೋಸ್ ಪಡೆಯದವರಿಗೆ ಚಿಕಿತ್ಸೆ ಇಲ್ಲ, ಸೌಲಭ್ಯ ಕಟ್?

ಹಿಂದುಳಿದ ಹೈಕ (ಕಕ) ಭಾಗಕ್ಕೆ ಅನುಕೂಲವಾಗಲು ಆರ್ಟಿಕಲ್‌ 371 (ಎ) ಜಾರಿಗೆ ತರುವಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎನ್‌. ಧರಂಸಿಂಗ್‌ ಅವರು ಹೋರಾಟ ಮಾಡಿದ್ದಾರೆ. ಆದರೆ, ಈಗಿನ ಸರ್ಕಾರ ಕಕ ಭಾಗಕ್ಕೆ ವಾರ್ಷಿಕ ಅನುದಾನವೇ ಬಿಡುಗಡೆ ಮಾಡಿಲ್ಲ. ಇದು ಬಿಜೆಪಿಯರಿಗೆ ಈ ಭಾಗದ ಕುರಿತಯ ಇರುವ ಬದ್ಧತೆ ತೋರಿಸುತ್ತದೆ. ತೀವ್ರ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ಸಚಿವರು ಈ ಕಡೆ ತಿರುಗಿಯೂ ನೋಡಿಲ್ಲ. ಆದರೆ, ಅದೇ ಕೋಲಾರ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಾರೆ. ಯಾಕೆ ಈ ತಾರತಮ್ಯ? ಬೊಮ್ಮಾಯಿ ಅ​ಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನ ನೇಮಿಸಿಲ್ಲ. ಜನರು ತಮ್ಮ ತೊಂದರೆಗೆ ಯಾರ ಬಳಿ ಹೋಗಬೇಕು? ಎಂದು ಪ್ರಶ್ನಿಸಿದರು.

ಸ್ಕಿಲ್‌ ಇಂಡಿಯಾ, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌, ಬೇಟಿ ಪಡಾವೋ ಬೇಟಿ ಬಚಾವೋ, ಜನ್‌ ಧನ್‌, ಹೀಗೆ ಬಿಜೆಪಿಯ ಹಲವಾರು ಯೋಜನೆಯಗಳು ಹಳ್ಳಹಿಡಿದಿವೆ. ಆದರೆ, ನಮ್ಮ ಕಾಲದಲ್ಲಿ ಅಭಿವೃದ್ದಿ ಮಾಡಿದ್ದೇವೆ. ಈಗ ಮತ್ತೆ ಅದೇ ಅಭಿವೃದ್ಧಿ ವಿಚಾರವನ್ನು ಇಟ್ಟುಕೊಂಡು ಮತ ಕೇಳಲು ಬಂದಿದ್ದೇವೆ ನೀವು ಶಿವಾನಂದ್‌ ಪಾಟೀಲ್‌ ಅವರನ್ನು ಗೆಲ್ಲಿಸುವ ಮೂಲಕ ಈ ಭಾಗದ ಅಭಿವೃದ್ದಿಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಡಿಸಿಸಿ ಅಧ್ಯಕ್ಷ ಮರಿಗೌಡ ಪಾಟೀಲ್‌, ವಿಧಾನ ಪರಿಷತ್ತು ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಮಾತನಾಡಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದರ್ಶನ್‌ ನಾಯಕ್‌, ಶ್ರೀನಿವಾಸ ರೆಡ್ಡಿ ಕಂದಕೂರು, ಚಿದಾನಂದಪ್ಪ ಕಾಳಬೆಳಗುಂದಿ, ಎ.ಸಿ.ಕಾಡ್ಲೂರು, ಮಂಜುಳಾ ಗೂಳಿ, ಲಾಯಕ್‌ ಹುಸೇನ್‌ ಬಾದಲ್‌, ಸ್ಯಾಮ್ಸನ್‌ ಮಾಳಿಕೇರಿ, ಮರೆಪ್ಪ ಬಿಳಾರ, ಬಸು ಬಿಳ್ಹಾರ, ಸಿದ್ದಲಿಂಗರೆಡ್ಡಿ ಉಳ್ಳೆಸೂಗೂರು, ಭೀಮಣ್ಣ ಮೇಟಿ, ಭೀಮರಾಯ ಠಾಣೆಗುಂದಿ, ರಜಾಕ್‌, ಶಾಂತರೆಡ್ಡಿ ದೇಸಾಯಿ, ನಗರಸಭೆ ಹಾಗೂ ಗ್ರಾಪಂ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಬಿಜೆಪಿ ಅಭಿವೃದ್ಧಿ ವಿಚಾರವಿಟ್ಟುಕೊಂಡು ಚುನಾವಣೆ ಎದುರಿಸುವ ಬದಲು ಧರ್ಮದ ಆಧಾರದ ಮೇಲೆ ಚುನಾವಣೆ ಎದುರಿಸುತ್ತದೆ. ಏನಾದರೂ ಕೇಳಿದರೆ ಜೈ ಶ್ರೀರಾಮ್‌ ಎನ್ನುತ್ತಾ ಕೋಮುವಿಷ ಬೀಜ ಬಿತ್ತುತ್ತಾರೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.