ಸಿದ್ದರಾಮಯ್ಯ ಅವರೇ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಕಾಲಕ್ಕೆ ನೀವು ಮಾಡಿದ್ದು ಏನು?  13ನೇ ಚುನಾವಣೆಯಲ್ಲಿ (ನಂಜನಗೂಡು ಉಪ ಚುನಾವಣೆ) ಆದ ನೋವು ಯಾವಾಗಲೂ ಆಗಿಲ್ಲ - ಶ್ರೀನಿವಾಸ ಪ್ರಸಾದ್

ಮೈಸೂರು (ಅ.26):  ಸಿಂದಗಿ (Sindagi), ಹಾನಗಲ್‌ (Hanagal) ಉಪ ಚುನಾವಣೆಯಲ್ಲಿ (By Election) ಬಿಜೆಪಿ (BJP) ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ, ಮತದಾರರಿಗೆ ಒಂದು ಸಾವಿರ, ಎರಡು ಸಾವಿರ ಹಣ (Money) ಹಂಚುತ್ತಿದೆ ಎಂದು ಆರೋಪಿಸುತ್ತಿರುವ ಸಿದ್ದರಾಮಯ್ಯ (Siddaramaiah) ಅವರೇ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಕಾಲಕ್ಕೆ ನೀವು ಮಾಡಿದ್ದು ಏನು? ಎಂದು ಚಾಮರಾಜನಗರ (Chamarajanagar ಸಂಸದ ವಿ. ಶ್ರೀನಿವಾಸ ಪ್ರಸಾದ್‌ (V Shrinivas Prasad) ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದುವನ್ನು ತಾಲಿಬಾನ್‌ಗೆ ಕಳುಹಿಸಿ : ಬಿಜೆಪಿ ಮುಖಂಡ

ನಾನು ಈವರೆಗೆ 14 ಚುನಾವಣೆಗಳನ್ನು ಎದುರಿಸಿದ್ದೇನೆ. ಆರು ಬಾರಿ ಲೋಕಸಭೆ (Loksabha), ಎರಡು ಬಾರಿ ವಿಧಾನಸಭೆಗೆ (Assembly) ಆಯ್ಕೆಯಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಚುನಾವಣೆಗಳಲ್ಲಿ ಗೆದ್ದಿದ್ದೇನೆ, ಸೋತಿದ್ದೇನೆ. ಆದರೆ 13ನೇ ಚುನಾವಣೆಯಲ್ಲಿ (ನಂಜನಗೂಡು ಉಪ ಚುನಾವಣೆ) ಆದ ನೋವು ಯಾವಾಗಲೂ ಆಗಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿಎಂ ಪರಮಾಧಿಕಾರ: ಮಂತ್ರಿ ಸ್ಥಾನದಿಂದ ಕೈಬಿಟ್ಟಿದ್ದು ಮುಖ್ಯಮಂತ್ರಿ (CM) ಪರಮಾಧಿಕಾರ. ಆ ಬಗ್ಗೆ ನಾನು ಪ್ರಶ್ನೆ ಮಾಡಲ್ಲ. ಆದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿ, ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಒತ್ತಾಯದ ಮೇರೆಗೆ ಬಿಜೆಪಿ (BJP) ಅಭ್ಯರ್ಥಿಯಾದಾಗ ಯಾವ ರೀತಿ ತೊಂದರೆ ಕೊಟ್ಟಿರಿ? ಸಿಎಂ ಸ್ಥಾನ ಹಾಗೂ ಅಧಿಕಾರವನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡಿರಿ? ಎಂಬುದನ್ನು ಜ್ಞಾಪಿಸಿಕೊಳ್ಳಿ ಎಂದರು.

ಕಾಂಗ್ರೆಸ್‌ಗೆ (congress) 10 ದಿನಗಳಾದರೂ ಅಭ್ಯರ್ಥಿ ಇರಲಿಲ್ಲ. 2013ರ ಚುನಾವಣೆಯಲ್ಲಿ (Election) ನನ್ನ ವಿರುದ್ಧ ಸ್ಪರ್ಧಿಸಿ ಸೋತಿದ್ದ ಜೆಡಿಎಸ್‌ (JDS) ತಾ. ಅಧ್ಯಕ್ಷ ಕಳಲೆ ಕೇಶವಮೂರ್ತಿ ಅವರನ್ನು ಅಂದಿನ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರ ಸಲಹೆಯಂತೆ ಕರೆತಂದು ಕಾಂಗ್ರೆಸ್‌ ಟಿಕೆಟ್‌ ನೀಡಿದಿರಿ. ಎಚ್‌.ಡಿ. ದೇವೇಗೌಡ (HD Devegowda), ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಜೊತೆ ಮಾತನಾಡಿ, ಜೆಡಿಎಸ್‌ ಅಭ್ಯರ್ಥಿ ಹಾಕದಂತೆ ನೋಡಿಕೊಂಡಿರಿ. ಅಂದಿನ ಲೋಕೋಪಯೋಗಿ ಸಚಿವರ (ಡಾ.ಎಚ್‌.ಸಿ. ಮಹದೇವಪ್ಪ) ಮಾತು ಕೇಳಿ, ವಿವಿಧ ನಿಗಮಗಳ ಮೂಲಕ ಕೋಟ್ಯಂತರ ರು. ಸರ್ಕಾರಿ ಅನುದಾನ ಹಂಚಿದಿರಿ.1-6 ಕೋಟಿ ರು.ಗಳ ತುಂಡು ಗುತ್ತಿಗೆ ನೀಡಿದಿರಿ. ಬೂತ್‌ಗಳ ಮುಂದೆಯೇ ಪೊಲೀಸರೆದುರು ಮತದಾರಿಗೆ 1000, 2000 ರು. ಹಂಚಿದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ . ನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತು ಸುಣ್ಣಿವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಾ? ಎಂದು ಕೇಳಿದರು.

ಉಪಕಾರ ಸ್ಮರಣೆಯೇ ಇಲ್ಲ :

ಸಿದ್ದರಾಮಯ್ಯನಿಗೆ ಉಪಕಾರ ಸ್ಮರಣೆ ಎಂಬುದೇ ಇಲ್ಲ. ಕಾಂಗ್ರೆಸ್‌ ಸೇರಿದ ನಂತರ ಚಾಮುಂಡೇಶ್ವರಿ (Chamundeshwari) ಉಪ ಚುನಾವಣೆಯಲ್ಲಿ ದೇವೇಗೌಡ, ರಾಜಶೇಖರಮೂರ್ತಿ, ಎಚ್‌.ಡಿ. ಕುಮಾರಸ್ವಾಮಿ ಸೇರಿಕೊಂಡು ಸೋಲಿಸುತ್ತಾರೆ. ಗೆಲುವು ಕಷ್ಟಇದೆ ಎಂದು ನೀವು, ಖರ್ಗೆ, ಧರ್ಮಸಿಂಗ್‌, ಕಾಗೋಡು ತಿಮ್ಮಪ್ಪ ನನ್ನ ಮನೆ ಬಾಗಿಲಿಗೆ ಬರಲಿಲ್ಲವೇ?. ಆವತ್ತು ನಾನು ಬರದಿದ್ದರೆ ಗೆಲ್ಲುತ್ತಿದ್ದರೇ? ಈ ಉಪಕಾರ ಸ್ಮರಣೆ ಬೇಡ‚ವೆ?. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ 1600 ಮತಗಳಿಂದ ಗೆಲ್ಲದಿದ್ದರೆ ನಿಮ್ಮ ಕಥೆ ಏನಾಗುತ್ತಿತ್ತು? . ಚಾಮುಂಡೇಶ್ವರಿಯಲ್ಲಿ ಸೋತಿದ್ದ ನೀವು ಕಾಟೂರು ಜಮೀನಿಗೆ, ಸಿದ್ದರಾಮನಹುಂಡಿ ಅಥವಾ ಬೆಂಗಳೂರು ವಿಜಯನಗರ ಮನೆಗೆ ಹೋಗಿ ಹೋಗಿರಬೇಕಿತ್ತು ಎಂದರು.

ಪ್ರಧಾನಿ ಬಗ್ಗೆ ಗೌರವ ಬೇಡವೆ?:

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಏಕವಚನದಲ್ಲಿ ಟೀಕಿಸುವ ಸಿದ್ದರಾಮಯ್ಯ ನಿಮಗೆ ಸಾಂವಿಧಾನಿಕ ಹುದ್ದೆಗಳ ಬಗ್ಗೆ ಗೌರವ ಇರಲಿ. ಕಳೆದ ಏಳು ವರ್ಷಗಳಿಂದ ದೇಶಕ್ಕೆ ಮೋದಿ ಸ್ಥಿರ ಸರ್ಕಾರ ನೀಡಿದ್ದಾರೆ ಎಂಬುದು ನೆನಪಿರಲಿ ಎಂದರಲ್ಲದೇ, ಮತ್ತೊಮ್ಮೆ ತಾಲಿಬಾನ್‌ ಆಡಳಿತ ನೋಡಿಕೊಂಡು ಬರಲು ಸಿದ್ದರಾಮಯ್ಯ ಅವರನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

2023ರ ಚುನಾವಣೆಗೆ ಪಕ್ಷ ಸಂಘಟನೆ ಮಾಡಿಕೊಂಡು ಯಾರಾದರೂ ಅಧಿಕಾರಕಕ್ಕೆ ಬರಲಿ ನ ಮ್ಮದೇನು ಅಭ್ಯಂತರವಿಲ್ಲ. ಆದರೆ ಬಾಯಿಗೆ ಬಂದಂತೆ ಟೀಕೆ ಮಾಡುವುದು ಸರಿಯಲ್ಲ ಎಂದರು.

ಕೇಂದ್ರ ಸರ್ಕಾರ ಬೆಲೆ ಏರಿಕೆ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿಲ್ಲ ಎಂಬುದು ಸರಿಯಲ್ಲ. ಎಲ್ಲಕ್ಕೂ ಪ್ರಧಾನಿ ಮಾತುಕತೆ ನಡೆಸಲಾಗದು. ಸಂಬಂಧಪಟ್ಟಮಂತ್ರಿಗಳು ಮಾತನಾಡುತ್ತಾರೆ ಎಂದರು.

ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಭರತ್‌ ರಾಮಸ್ವಾಮಿ, ಶಿವಕುಮಾರ್‌ ಇದ್ದರು.