ದಾವಣಗೆರೆ, ಬಾಗಲಕೋಟೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ- ಕಲ್ಲೋಲ ಉಂಟಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

ಹೊಸಪೇಟೆ (ಏ.30): ದಾವಣಗೆರೆ, ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ- ಕಲ್ಲೋಲ ಉಂಟಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು. ರಾಜ್ಯದಲ್ಲಿ ಕುಡಿವ ನೀರು ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿವೆ. ಆದರೆ ರಾಜ್ಯದ ನಾಯಕರು ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ನೀಡದೇ ಪದೇಪದೇ ದೆಹಲಿಗೆ ದಂಡಯಾತ್ರೆಯಲ್ಲಿ ಬ್ಯುಸಿ ಇದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಿಂದ ದೆಹಲಿ ದಂಡಯಾತ್ರೆ ಶುರುವಾಗಿದೆ. ಸಿದ್ದರಾಮಯ್ಯ ಬಣ ದೆಹಲಿಗೆ ಭೇಟಿ ನೀಡುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಆಪ್ತರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದು ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಅಸ್ಥಿರ ವಾತಾವರಣಕ್ಕೆ ಸಾಕ್ಷಿ ಎಂದರು. ರಾಜ್ಯದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಸಂಘಟಿಸಿದ ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷ ಎಲ್ಲವನ್ನೂ ನೀಡಿ, ಗೌರವಿಸಿದೆ. ಅವರಿಗೆ ಈಗಲೂ ಅದೇ ಗೌರವವಿದೆ.

ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ಬದ್ಧರಿದ್ದೇವೆ ಎಂದು ಹೇಳಿದರು. ಚಿತ್ರದುರ್ಗದಲ್ಲಿ ನಡೆಯುವ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.

ದಸರಾ ಮಾದರಿಯಲ್ಲಿ ಅರ್ಥಪೂರ್ಣವಾಗಿ ಪುರಪ್ರವೇಶ ಕಾರ‍್ಯಕ್ರಮ ನಡೆಯಲಿದೆ. ಕಾರ‍್ಯಕ್ರಮದಲ್ಲಿ ರಾಜ್ಯದ ಎಲ್ಲ ಸಮಾಜದ ಗಣ್ಯರು ಸೇರಿ ಹಲವರು ಭಾಗಿಯಾಗಲಿದ್ದಾರೆ. ಮೇ 9 ರಂದು ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ‍್ಯಕ್ರಮ ನಡೆಯಲಿದೆ. 11:30ಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ರಾಜ್ಯದ ಪ್ರತೀ ಜಿಲ್ಲೆಯ ಗ್ರಾಮಗಳಿಂದ ಸುಮಾರು 10 ಲಕ್ಷ ಜನರು ಕಾರ‍್ಯಕ್ರಮಕ್ಕೆ ಬರಲಿದ್ದಾರೆ ಎಂದರು.

ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಸ್ಫೋಟಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮತ್ತೆ ಅಹಿಂದ ಸಮಾವೇಶದ ಕಾರ್ಡ್‌ ಬಳಸುತ್ತಿದ್ದಾರೆ. ​ಸಿದ್ದರಾಮಯ್ಯ ಅವರ ಅಧಿಕಾರಕ್ಕೆ ಯಾವಾಗ ಕಂಟಕ ಬರುತ್ತದೆಯೋ, ಆಗ ಅವರಿಗೆ ಅಹಿಂದ ಸಮಾವೇಶ ನೆನಪಾಗುತ್ತದೆ. ದೆಹಲಿಯಲ್ಲಿ ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ವಾಸ್ತವದಲ್ಲಿ ಜನರಿಗೆ ಮೋಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ''ಏಕ್ ದಿನ್ ಕಾ, ದೋ ದಿನ್ ಕಾ'', ದಸ್‌ ದಿನ್ ಕಾ ಸುಲ್ತಾನ್. ಇಂದೋ ನಾಳೆಯೋ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಮೀಸಲಾತಿ ಸಕ್ಸಸ್ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಸಿಹಿ ಹಂಚುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಜನರಿಗೆ ಮೋಸವಾಗಿದೆ. ಮುಡಾ ಪ್ರಕರಣದಲ್ಲಿ ಸಿಎಂ ಪರ ವಾದಿಸಲು ವಕೀಲರು ದೆಹಲಿಯಿಂದ ಬಂದಿದ್ದರು. ಆದರೆ, ಒಳ‌ಮೀಸಲಾತಿ ಕುರಿತ ಹೈಕೋರ್ಟ್‌ ವಿಚಾರಣೆಗೆ ಸರ್ಕಾರದ ಪರ ವಕೀಲರೇ ಹಾಜರಾಗಿಲ್ಲ. ಪರಿಣಾಮ ಎಸ್ಸಿ, ಎಸ್ಟಿ ಜನಾಂಗಕ್ಕೆ ಅನ್ಯಾಯವಾಗಿದೆ. ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ನನ್ನ ಮಾವ. ಅವರಾದರೂ ಸತ್ಯವನ್ನು ಹೇಳಬೇಕು ಎಂದು ತಾಕೀತು ಮಾಡಿದರು. ಬಳ್ಳಾರಿಯಲ್ಲಿ ರಸ್ತೆ ಅಗಲೀಕರಣ ನೆಪವೊಡ್ಡಿ ಕೆಲವು ಪ್ರಭಾವಿಗಳು ಹಲವಾರು ಮರಗಳನ್ನು ಕಡಿದಿದ್ದಾರೆ. ಇದರ ವಿರುದ್ಧ ಖಾಸಗಿ ದೂರು ದಾಖಲಿಸುವುದಾಗಿ ಅವರು ಹೇಳಿದರು.