ಬಿಜೆಪಿಗೆ ಪಕ್ಷೇತರರ ಬಲವಿದ್ದು ಇದೀಗ ಬಿಜೆಪಿಯಲ್ಲಿ ಅಧಿಕಾರಕ್ಕಾಗಿ ಪೈಪೋಟಿ ಗರಿಗೆದರಿದೆ.

ಬೀರೂರು (ಅ.11): ಪುರಸಭೆ ಚುನಾವಣೆ ನಡೆದು ಬಹುತೇಕ ಒಂದು ವರ್ಷದ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪರಿಷ್ಕೃತಗೊಂಡು ಪ್ರಕಟವಾಗಿದ್ದು, ಸದಸ್ಯರಲ್ಲಿ ಪೈಪೋಟಿ ಆರಂಭವಾಗಿದೆ.

Add Asianetnews Kannada as a Preferred SourcegooglePreferred

ಚುನಾವಣೆಗೆ ಮುನ್ನವೇ ಮೀಸಲು ಪ್ರಕಟಗೊಂಡು ಅಧ್ಯಕ್ಷ ಹುದ್ದೆ ಎಸ್‌ಸಿ ಮಹಿಳೆಗೆ ಎಂದು ನಿಗದಿಯಾಗಿತ್ತು. ಚುನಾವಣೆ ಬಳಿಕವೂ ಈ ಪಟ್ಟಿಏನೂ ಬದಲಾಗಿರಲಿಲ್ಲ. ಪಕ್ಷೇತರವಾಗಿ ಆಯ್ಕೆಯಾಗಿದ್ದ ಸದಸ್ಯೆಯೊಬ್ಬರು ಬಿಜೆಪಿ ಸೇರ್ಪಡೆಗೊಂಡು, ಅದೇ ಪಕ್ಷದಿಂದ ಆಯ್ಕೆಯಾಗಿದ್ದ ಮತ್ತೊಬ್ಬ ಸದಸ್ಯೆ ಜತೆ ಪೈಪೋಟಿ ನಡೆಸಿದ್ದರು. ಪುರಸಭೆಯಲ್ಲಿ ಬಿಜೆಪಿಯ 10 ಸದಸ್ಯರು, ಕಾಂಗ್ರೆಸ್‌ನ 9 ಮತ್ತು ಜೆಡಿಎಸ್‌ ಹಾಗೂ ಪಕ್ಷೇತರರು ತಲಾ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಅಧಿಕಾರಕ್ಕೆ ಹತ್ತಿರವಿದ್ದ ಬಿಜೆಪಿ ಶಾಸಕರ ಒತ್ತಾಸೆಯಿಂದ ಇಬ್ಬರೂ ಪಕ್ಷೇತರರನ್ನು ತನ್ನಡೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಮೊದಲು ಕಾಂಗ್ರೆಸ್‌ ಮುಖಂಡರು ಪಕ್ಷೇತರ ಸದಸ್ಯೆ ಪತಿಯ ಮೂಲಕ ಕಾಂಗ್ರೆಸ್‌ಗೆ ಬೆಂಬಲ ಘೋಷಣೆ ಮಾಡಿಸಿದ್ದರೂ, ನಂತರದ ಬೆಳವಣಿಗೆಗಳಲ್ಲಿ ಖುದ್ದು ಸದಸ್ಯೆಯೇ ಬಿಜೆಪಿಗೆ ಬೆಂಬಲ ನೀಡಿ ಗದ್ದುಗೆ ಏರಲು ಅಣಿಯಾಗಿದ್ದಾರೆ.

ಕುತೂಹಲದ ಕೇಂದ್ರವಾದ ಆರ್‌ ಆರ್ ನಗರ : ಫೈನಲ್ ಆಗಿಲ್ಲ ಬಿಜೆಪಿ ಅಭ್ಯರ್ಥಿ

ಸದ್ಯ ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಬಾರಿ ಗೆಲುವು ಸಾಧಿಸಿರುವ ಎಂ.ಪಿ.ಸುದರ್ಶನ್‌ ಬಿಜೆಪಿಯಿಂದ ಪ್ರಮುಖ ಆಕಾಂಕ್ಷಿಯಾಗಿದ್ದರೆ, ಮತ್ತೊಬ್ಬ ಅಭ್ಯರ್ಥಿ ಎನ್‌.ಎಂ.ನಾಗರಾಜ್‌ ಸಹ ರೇಸ್‌ನಲ್ಲಿದ್ದಾರೆ. ಇನ್ನು ಮೊದಲ ಬಾರಿಗೆ ಅಲ್ಪಸಂಖ್ಯಾತ ಕೋಟಾದಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ಮಾನಿಕ್‌ ಬಾಷಾ ಅವರಿಗೂ ಮೂರನೇ ಅವಧಿಯಲ್ಲಿ ಅಧ್ಯಕ್ಷಸ್ಥಾನ ಸಿಗುವ ಸಂಭವವಿದೆ.

ಜಿಲ್ಲಾಡಳಿತ ಶೀಘ್ರವಾಗಿ ಕ್ರಮ ಕೈಗೊಂಡರೆ ಇನ್ನು 10-15 ದಿನದ ಒಳಗಾಗಿ ಮೀಸಲಾತಿ ಅನ್ವಯ ಬೀರೂರು ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.