ಬೀದರ್‌ನ ದುಬಲಗುಂಡಿ ಗ್ರಾಮದಲ್ಲಿ, ಮನೆಯೊಳಗೆ ಮಲಗಿದ್ದ ನಾಲ್ಕು ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ ಮಾಡಿ, ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಈ ಘಟನೆಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಚಿವರಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ.

ಬೀದರ್ (ಮೇ.10): ಮನೆಯ ಒಳಗಡೆ ಮಲಗಿದ್ದ ನಾಲ್ಕು ತಿಂಗಳ ಕಂದಮ್ಮನನ್ನು ಬೀದಿ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನಪ್ಪಿದ ಘಟನೆ ಶನಿವಾರ ಬೆಳಗ್ಗೆ ಹುಮನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಸುಧಾ ಹಾಗೂ ಸಿದ್ಧಪ್ಪ ದಂಪತಿಯ ಮಗು ಬೀದಿ ನಾಯಿ ದಾಳಿಗೆ ಬಲಿಯಾಗಿದ್ದು, ನಾಯಿ ದಾಳಿಯಿಂದ ಮಗುವಿನ ಮುಖ, ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಇದರಿಂದ ದುಬಲಗುಂಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು, ಆದರೆ ಮಗು ಚಿಕಿತ್ಸೆ ಫಲಿಸದೆ ಅಸುನೀಗಿದೆ ಎಂದು ತಿಳಿದು ಬಂದಿದೆ.

ಮಗುವನ್ನು ಮನೆಯೊಳಗೆ ಮಲಗಿಸಿ ತಾಯಿ ಹೊರಗೆ ಕೆಲಸ ಮಾಡುವಾಗ ಬೀದಿ ನಾಯಿಯೊಂದು ಮನೆಯೊಳಗೆ ನುಗ್ಗಿ ಮಗುವಿನ ದೇಹದ ವಿವಿಧ ಭಾಗಗಳನ್ನು ಕಚ್ಚಿದ್ದರಿಂದ ಮಗು ಗಂಭೀರವಾಗಿ ಗಾಯಗೊಂಡು ಅತ್ತಿರುವ ಶಬ್ದ ಕೇಳಿ ಪಾಲಕರು ಓಡಿ ಬಂದು ನೋಡುವಷ್ಟರಲ್ಲಿ ಮಗು ನಾಯಿ ದಾಳಿಕ್ಕೆ ತುತ್ತಾಗಿತ್ತು ಎಂದು ಹೇಳಲಾಗಿದೆ. ಈ ನಾಯಿ ಗ್ರಾಮದ ಇತರೇ ಒಬ್ಬ ಬಾಲಕ ಸೇರಿ ಮೂರು ಜನರಿಗೂ ನಾಯಿ ದಾಳಿ ನಡೆಸಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಇನ್ನು, ಮಗು ಸಾವಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಕಾರಣವಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಖಂಡ್ರೆ ಕಂಬನಿ:

ಮೃತ ಕಂದಮ್ಮನ ಕುಟುಂಬದವರೊಂದಿಗೆ ಈ ನೋವಿನ ಸಂದರ್ಭದಲ್ಲಿ ಸರ್ಕಾರ ನಿಲ್ಲುತ್ತದೆ. ದೇವರು ಮೃತ ಮಗುವಿನ ಆತ್ಮಕ್ಕೆ ಚಿರಶಾಂತಿ ನೀಡಲಿ, ತಂದೆ ತಾಯಿಗಳಿಗೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಕೂಡಲೇ ನಿಯಮಾನುಸಾರ ಪರಿಹಾರ ನೀಡುವಂತೆ ಬೀದರ್‌ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.