Asianet Suvarna News Asianet Suvarna News

ಆಲಿಕಲ್ಲು ಮಳೆಗೆ ಬೀದರ್‌ ರೈತ ಸಾವು: ಸಾವಿರಾರು ಎಕರೆ ಬಿಳಿಜೋಳ, ಮಾವು ಬೆಳೆ ನಷ್ಟ

ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸುರಿದ ಭಾರಿ ಪ್ರಮಾಣದ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಓರ್ವ ರೈತ ಬಲಿಯಾಗಿದ್ದು, ಸಾವಿರಾರು ಎಕರೆ ಬೆಳೆ ನಷ್ಟವಾಗಿದೆ.

Bidar farmers shaken by hailstorm one farmer died thousands of acres maize mango crop lost sat
Author
First Published Mar 18, 2023, 12:55 PM IST

ಬೀದರ್ (ಮಾ.18): ರಾಜ್ಯದ ಉತ್ತರ ಭಾಗದ ಗಡಿಜಿಲ್ಲೆಗಳಾದ ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸುರಿದ ಭಾರಿ ಪ್ರಮಾಣದ ಸಿಡಿಲು, ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಓರ್ವ ರೈತ ಬಲಿಯಾಗಿದ್ದು, ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಬೆಳೆ ನಷ್ಟವಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಈ ವರ್ಷದ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ರಾಜ್ಯದ ವಿವಿಧೆಡೆ ಆಲಿಕಲ್ಲು ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ಆಶ್ರಯದಿಂದ ಹುಲುಸಾಗಿ ಬೆಳೆದಿದ್ದ ಸಾವಿರಾರು ಎಕರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಬೆಳೆಹಾನಿ ಉಂಟಾಗಿತ್ತು. ಆದರೆ, ಈಗ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್‌ ಹಾಗೂ ಯಾದಗಿರಿಯಲ್ಲಿ ಸಯುರಿದ ಆಲಿಕಲ್ಲು ಮಳೆ ಭಾರಿ ಪ್ರಮಾಣದ ಹಾನಿಯನ್ನು ಉಂಟುಮಾಡಿದೆ. 

ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಬೇಸಿಗೆ ಮಳೆ: ಓರ್ವ ಬಲಿ

ಸಿಡಿಲಿಗೆ ಓರ್ವ ರೈತ ಬಲಿ: ಇನ್ನು ಬೀದರ್‌ ಜಿಲ್ಲೆಯ ಕಮಲನಗರ ತಾಲ್ಲೂಕಿನ ಸೋನಾಳ ಗ್ರಾಮದ ರೈತ ಮಾಧರಾವ ಬೀರ್ಗೆ ( 37) ಸಿಡಿಲಿಗೆ ಬಲಿಯಾಗಿದ್ದಾನೆ. ಪ್ರತಿನಿತ್ಯ ಹೊಲಕ್ಕೆ ಹೋಗುವ ಮಾದರಿಯಲ್ಲಿಯೇ ಜಮೀನಿಗೆ ಕೆಲಸಕ್ಕೆ ಹೋಗಿದ್ದ ಮಾಧರಾವ ಬೀರ್ಗೆ ಮಾರ್ಗ ಮಧ್ಯದಲ್ಲಿಯೇ ಮಳೆಗೆ ಸಿಲುಕಿದ್ದಾರೆ. ಇನ್ನು ಎಲ್ಲಿಯೂ ಕೂರಲು ಶೆಡ್‌ ಅಥವಾ ಇನ್ಯಾವುದೇ ವ್ಯವಸ್ಥೆ ಇಲ್ಲದ್ದರಿಂದ ಮರದ ಬಳಿ ಬಮದು ಆಶ್ರಯ ಪಡೆದುಕೊಂಡಿದ್ದಾರೆ. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ರೈತ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಕೋಳಿ ಫಾರ್ಮ್‌ ಬಿದ್ದು ಸಾವಿರಾರು ಕೋಳಿ ಬಲಿ: ಇನ್ನು ಭಾಲ್ಕಿಯ ಕೂಡಲಿ ಗ್ರಾಮದಲ್ಲಿ ಕೋಳಿ ಸಾಕಾಣಿಕೆಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯ ಭಾರಕ್ಕೆ ಕುಸಿದು ಬಿದ್ದಿದೆ. ಶೆಡ್‌ ಬಿದ್ದ ಹಿನ್ನೆಲೆಯಲ್ಲಿ ನೂರಾರು ಕೋಳಿಗಳು ಸಾವನ್ನಪ್ಪಿವೆ. ಜೊತೆಗೆ ಶೆಡ್‌ನಿಂದ ಹೊರಬಂದ ಕೋಳಿಗಳು ಆಲಿಕಲ್ಲು ಮಳೆಗೆ ಸಿಲುಕಿ ಸಾವನ್ನಪ್ಪಿವೆ. ಇದರಿಂದ ಕೋಳಿ ಸಾಕಣಿಕೆ ಮಾಡುತ್ತಿದ್ದ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಕೋಳಿಫಾರ್ಮ್‌ಗೆ ನಿರ್ಮಿಸಲಾಗಿದ್ದ ಶೆಡ್‌ಗಳು ಹಾರಿಕೊಂಡು ಹೋಗಿವೆ. 

ಬಿಳಿಜೋಳ, ಮಾವು ಬೆಳೆ ಮಣ್ಣುಪಾಲು: ಇನ್ನು ಬೀದರ್‌ನಲ್ಲಿ ಬಿಳಿಜೋಳದ ಬೆಳೆ ಆಲಿಕಲ್ಲು ಮಳೆಯಿಂದ ಮಣ್ಣು ಪಾಲಾಗಿದೆ. ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಜೋಳ ಕಟಾವಿಗೆ ಬಂದಿತ್ತು. ಇನ್ನು 15 ದಿನಗಳಲ್ಲಿ ಕಟಾವು ಮಾಡಬೇಕಿದ್ದ ಸಾವಿರಾರು ಎಕರೆ ಜೋಳದ ಬೆಳೆ ಸಂಪೂರ್ಣ ನಾಶವಾಗಿದೆ. ಆಲಿಕಲ್ಲು  ಮಳೆಯಿಂದ ಜೋಳದ ಗಿಡಗಳು ಸಂಪೂರ್ಣ ಭಾಗಿದ್ದು, ಜೋಳ ಮಣ್ಣು ಪಾಲಾಗಿದೆ. ಇನ್ನು ಕಟಾವು ಮಾಡಿ, ಒಕ್ಕಣೆ ಮಾಡಿದರೂ ಅದನ್ನು ಮಾರಾಟ ಮಾಡಲು ಬೆಲೆ ಸಿಗುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನು ಈ ವರ್ಷ ಮಾವಿನ ಮರಗಳಲ್ಲಿ ಹೂವು ಹಾಗೂ ಮಾವಿನ ಕಾಯಿ ಹೆಚ್ಚಾಗಿ ಕಚ್ಚಿಕೊಂಡಿತ್ತು. ಆದರೆ, ಈಗ ಆಲಿಕಲ್ಲು ಮಳೆಯಿಂದ ಕಾಯಿಗಳಿಗೆ ಹೊಡೆತ ಬಿದ್ದು ಬಹುತೇಕ ಕಾಯಿಗಳು ನೆಲಕ್ಕುದುರಿವೆ. ಜೊತೆಗೆ ಹೂವು ಕೂಡ ಉದುರಿದ್ದು, ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ವರುಣನ ಅಬ್ಬರ: ಇನ್ನೂ 5 ದಿನ ಮಳೆ..!

ಯಾದಗಿರಿಯಲ್ಲೂ ಆಲಿಕಲ್ಲು ಮಳೆಯ ಅನಾಹುತ: ಯಾದಗಿರಿ ಜಿಲ್ಲೆಯಲ್ಲಿಯೂ ಆಲಿಕಲ್ಲು ಮಳೆಯ ಆರ್ಭಟ ನಡೆದಿದೆ. ನಿನ್ನೆ ರಾತ್ರಿ ಸುರಿದ ಆಲಿಕಲ್ಲು ಮಳೆಯಿಮದಾಗಿ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮದ ರೈತ ಬಸವರಾಜ ಎಂಬುವರ ಹೊಲದಲ್ಲಿ ಬೆಳೆದ ಸಜ್ಜೆ, ಮೆಣಸಿನಕಾಯಿ ಬೆಳೆ ನಾಶವಾಗಿದೆ. ರೈತಬಸವರಾಜು ಅವರು ಎರಡು ಎಕರೆಯಲ್ಲಿ ಸಜ್ಜೆ ಬೆಳೆ ಬೆಳೆದಿದ್ದರು. ಇಂದು ಬೆಳಿಗ್ಗೆ ರೈತ ಬಸವರಾಜ ಹೊಲಕ್ಕೆ ಹೋಗಿ ನೋಡಿದಾಗ ಹೊಲದಲ್ಲಿ ದೊಡ್ಡ ಗಾತ್ರದ ಆಲಿಕಲ್ಲುಗಳು ಬಿದ್ದಿರುವುದು ಕಂಡುಬಂದಿದೆ. ಜೊತೆಗೆ, ಹೊಲದಲ್ಲಿನ ಎಲ್ಲ ಬೆಳಯೂ ನಷ್ಟವಾಗಿತ್ತು.

Follow Us:
Download App:
  • android
  • ios