ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಮೃತ ಅನಿಲ್‌ ಮೇಲ್ಭಾಗದ ಲೈನ್‌ ಬದಲಾವಣೆ ಮಾಡಿ, ಕೆಳಭಾಗದ ಮತ್ತೊಂದು ಭಾಗದ ಲೈನ್‌ ಬದಲಾವಣೆ ಮಾಡುವಾಗ ಬೆಸ್ಕಾಂನವರ ನಿರ್ಲಕ್ಷ್ಯದಿಂದ ವಿದ್ಯುತ್‌ ಸಂಪರ್ಕ ಇದ್ದಕ್ಕಿದ್ದಂತೆ ಆನ್‌ ಮಾಡಿದ ಹಿನ್ನೆಲೆಯಲ್ಲಿ ನೌಕರ ಸ್ಥಳದಲ್ಲೇ ಸಾವು. 

ಹೊಸಕೋಟೆ(ಆ.14): ಬೆಸ್ಕಾಂ ಅಧಿ​ಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕ ಗುತ್ತಿಗೆ ನೌಕರ ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಗೊಣಕನಹಳ್ಳಿ ಗೇಟ್‌ ಬಳಿ ವಿದ್ಯುತ್‌ ಕಂಬದಲ್ಲಿ ಲೈನ್‌ ಬದಲಾವಣೆ ಮಾಡುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್‌ ಹರಿದು ಲೈನ್‌ ಮೇಲೆ ಕೆಲಸ ಮಾಡುತ್ತಿದ್ದ ಬೆಸ್ಕಾಂ ಸಿಬ್ಬಂದಿ ಶಾಕ್‌ ಹೊಡೆದು ಸಾವನ್ನಪ್ಪಿದ್ದಾನೆ.

ಪತಿ ತೀರಿಕೊಂಡ ದಿನವೇ, ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ಮಹಿಳೆ

ಕೋಲಾರ ಮೂಲದ ಅನಿಲ್‌(35) ಮೃತ ಕಾರ್ಮಿಕ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೈವೆ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗೊಣಕನಹಳ್ಳಿ ಬಳಿ ರಸ್ತೆ ನಿರ್ಮಾಣಕ್ಕೆ ಅಡ್ಡಲಾಗುತ್ತದೆ ಎಂದು ಲೈನ್‌ ಬದಲಾವಣೆಗೆ ಬೆಸ್ಕಾಂ ಸಿಬ್ಬಂದಿ ಮುಂದಾಗಿದ್ದರು. ಈ ನಡುವೆ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. 

ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಮೃತ ಅನಿಲ್‌ ಮೇಲ್ಭಾಗದ ಲೈನ್‌ ಬದಲಾವಣೆ ಮಾಡಿ, ಕೆಳಭಾಗದ ಮತ್ತೊಂದು ಭಾಗದ ಲೈನ್‌ ಬದಲಾವಣೆ ಮಾಡುವಾಗ ಬೆಸ್ಕಾಂನವರ ನಿರ್ಲಕ್ಷ್ಯದಿಂದ ವಿದ್ಯುತ್‌ ಸಂಪರ್ಕ ಇದ್ದಕ್ಕಿದ್ದಂತೆ ಆನ್‌ ಮಾಡಿದ ಹಿನ್ನೆಲೆಯಲ್ಲಿ ನೌಕರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.