ಬೆಂಗಳೂರಿನ ಅತ್ತಿಬೆಲೆಯಲ್ಲಿ, ಪತಿಯೇ ಪಾದರಸದ ಇಂಜೆಕ್ಷನ್ ನೀಡಿದ ಪರಿಣಾಮ 9 ತಿಂಗಳ ಕಾಲ ಚಿಕಿತ್ಸೆ ಪಡೆದ ಮಹಿಳೆ ಸಾವನ್ನಪ್ಪಿದ್ದಾರೆ. ಸಾವಿಗೂ ಮುನ್ನ, ಪತಿ ಹಾಗೂ ಮಾವನಿಂದ ನಡೆದ ದೌರ್ಜನ್ಯ ಮತ್ತು ವಿಷಪ್ರಾಶನದ ಬಗ್ಗೆ ಅವರು ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು (ನ.26): 9 ತಿಂಗಳ ಹಿಂದೆ ಪಾದರಸದ ಇಂಜೆಕ್ಷನ್‌ಅನ್ನು ಪತ್ನಿಗೆ ನೀಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಸಾವನ್ನಪ್ಪಿದ್ದ ಆಘಾತಕಾರಿ ಘಟನೆ ಬೆಂಗಳೂರು ಸಮೀಪದ ಅತ್ತಿಬೆಲೆಯಲ್ಲಿ ನಡೆದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಫೆಬ್ರವರಿ 26 ರಂದು ತನ್ನ ಪತಿ ಬಸವರಾಜ್ ಮತ್ತು ಅವನ ತಂದೆ ಮರಿಶ್ವಾಮಾಚಾರಿ ತನ್ನನ್ನು ಕೊಲ್ಲುವ ಉದ್ದೇಶದಿಂದ ತನ್ನ ದೇಹಕ್ಕೆ ಪಾದರಸವನ್ನು ಚುಚ್ಚಿದ್ದಾರೆ ಎಂದು ವಿದ್ಯಾ ಹೇಳಿಕೊಂಡಿದ್ದರು. ವಿದ್ಯಾ ಹೇಳಿಕೆ ನೀಡಿದ ನಂತರ ನವೆಂಬರ್ 23 ರಂದು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

Add Asianetnews Kannada as a Preferred SourcegooglePreferred

ತನ್ನ ಗಂಡ ಮತ್ತು ಮಾವನಿಂದ ಕಿರುಕುಳ, ಅವಮಾನ ಮತ್ತು ನಿರ್ಲಕ್ಷ್ಯಕ್ಕೊಳಗಾಗಿದ್ದಾಗಿ ಅವರು ಉಲ್ಲೇಖಿಸಿದ್ದಾರೆ. ನನ್ನನ್ನು ಇವರಿಬ್ಬರು ಆಗಾಗ್ಗೆ ಹುಚ್ಚಿ ಎಂದು ಕರೆಯುತ್ತಿದ್ದರು. ಹಾಗೂ ನನ್ನ ಗಂಡ ನನ್ನನ್ನು ಮನೆಯೊಳಗೆ ಕೂಡಿ ಹಾಕಿ ಬಾಗಿಲಿಗೆ ಬೀಗ ಹಾಕುತ್ತಿದ್ದರು ಎಂದು ಹೇಳಿದ್ದಾರೆ. ನನ್ನನ್ನು ಸಂಬಂಧಿಕರ ಮನೆಗೆ ಕಳಿಸಿಕೊಡಲು ಕೂಡ ಆತ ನಿರಾಕರಿಸುತ್ತಿದ್ದ. ಆಕೆಯ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದ ಎಂದು ವಿದ್ಯಾ ತಿಳಿಸಿದ್ದರು.

9 ತಿಂಗಳ ಹಿಂದೆ ಪಾದರಸದ ಇಂಜೆಕ್ಷನ್‌ ಚುಚ್ಚಿದ್ದ ಗಂಡ

ಫೆಬ್ರವರಿ 26 ರಂದು ನಾನು ನಿದ್ರೆಗೆ ಜಾರಿದ್ದೆ ಹಾಗೂ ಮರುದಿನ ಸಂಜೆಯ ವೇಳೆಗೆ ನನಗೆ ಮತ್ತೆ ಪ್ರಜ್ಞೆ ಬಂದಿತ್ತು. ಈ ವೇಳೆ ನನ್ನ ಬಲಗಾಲ ತೊಡೆಯಲ್ಲಿ ಅತಿಯಾದ ನೋವು ಬಾಧಿಸುತ್ತಿತ್ತು. ಕೆಲ ದಿನಗಳ ಬಳಿಕ ನನ್ನ ಪರಿಸ್ಥಿತಿ ಇನ್ನಷ್ಟು ಹದಗೆಟ್ಟ ಕಾರಣದಿಂದಾ ಮಾರ್ಚ್‌ 7 ರಂದು ಅತ್ತಿಬೆಲೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ನನಗೆ ಆಕ್ಸ್‌ಫರ್ಡ್‌ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ರೆಫರ್‌ ಮಾಡಲಾಗಿತ್ತು. ಇಲ್ಲಿ ವೈದ್ಯರು ಎಲ್ಲಾ ರೀತಿಯ ಪರೀಕ್ಷೆಯನ್ನು ನಡೆಸಿದ ಬಳಿಕ ನನ್ನ ದೇಹದಲ್ಲಿ ಪಾದರಸ ಸೇರಿಕೊಂಡಿದೆ ಎಂದು ತಿಳಿಸಿದ್ದರು.

ಒಂದು ತಿಂಗಳಿಗೂ ಅಧಿಕ ಕಾಲ ಆಕೆ ಅಲ್ಲಿಯೇ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿನ ವೈದ್ಯರು ವಿಷವು ಅವರ ದೇಹದಾದ್ಯಂತ ಹರಡಿ, ಬಹು ಅಂಗಗಳಿಗೆ ಹಾನಿ ಮಾಡಿದೆ ಎಂದು ತಿಳಿಸಿದ್ದರು.

ಅಂದಾಜು 9 ತಿಂಗಳ ಹೋರಾಟದ ಬಳಿಕ ನವೆಂಬರ್‌ 23 ರಂದು ವಿದ್ಯಾ ಸಾವು ಕಂಡಿದ್ದಾರೆ. ದಂಪತಿಗಳಿಗೆ ವರ್ಷದ ಮಗುವಿದೆ ಎಂದು ವರದಿಯಾಗಿದೆ.