Asianet Suvarna News Asianet Suvarna News

25 ವಿಧಾನಸಭಾ ಕ್ಷೇತ್ರದಲ್ಲೂ ಮತದಾರ ಪಟ್ಟಿ ವಿಶೇಷ ಪರಿಶೀಲನೆ: ತುಷಾರ್‌ ಗಿರಿನಾಥ್‌

ಮತದಾರ ಪಟ್ಟಿಯ ಪರಿಷ್ಕರಣೆ ಸಂಬಂಧ ಸಾಕಷ್ಟು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಶಿವಾಜಿ ನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಜೊತೆಗೆ ಉಳಿದ 25 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಪರಿಷ್ಕರಣೆಯನ್ನು ವಿಶೇಷವಾಗಿ ಪರಿಶೀಲಿಸಲಾಗುವುದು.

Bengaluru voter id scam 12 kas officers appointed for voter id revision says bbmp commissioner tushar girinath gvd
Author
First Published Dec 17, 2022, 10:36 PM IST

ಬೆಂಗಳೂರು (ಡಿ.17): ಮತದಾರ ಪಟ್ಟಿಯ ಪರಿಷ್ಕರಣೆ ಸಂಬಂಧ ಸಾಕಷ್ಟು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಶಿವಾಜಿ ನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಜೊತೆಗೆ ಉಳಿದ 25 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿಶೇಷವಾಗಿ ಪರಿಶೀಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮನೆಗೆ ತೆರಳಿ ಪರಿಶೀಲಿಸುತ್ತಿದ್ದು, ಅದಕ್ಕಾಗಿ ವಿಶೇಷ ಅಧಿಕಾರಿಗಳನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಉಳಿದ 25 ವಿಧಾನಸಭಾ ಕ್ಷೇತ್ರಗಳಲ್ಲಿ 2022ರ ಜನವರಿಯಿಂದ ಈವರೆಗೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ತೆರವು ಸಂಬಂಧಿಸಿದಂತೆ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ಅದಕ್ಕಾಗಿ 12 ಕೆಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಶಯ ಕಂಡು ಬಂದ ಅರ್ಜಿಗಳ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ನ.2ರಂದೇ ಚಿಲುಮೆ ಅನುಮತಿ ರದ್ದು: ಬಿಬಿಎಂಪಿ ಆಯುಕ್ತ ತುಷಾರ್‌

ವಿಶೇಷ ಪರಿಶೀಲನೆಗೆ ನೇಮಿಸಿದ ಅಧಿಕಾರಿಗಳು ಡಿ.24ರಂದು ಚಿಕ್ಕಪೇಟೆ, ಶಿವಾಜಿನಗರ ಹಾಗೂ ಮಹದೇವಪುರ ಕ್ಷೇತ್ರಗಳು ಸೇರಿದಂತೆ ಉಳಿದ 25 ವಿಧಾನಸಭಾ ಕ್ಷೇತ್ರದ ಪರಿಶೀಲನೆ ವರದಿಯನ್ನು ಅಧಿಕಾರಿಗಳು ನೀಡಲಿದ್ದಾರೆ. ಆಗ ಸ್ಪಷ್ಟಮಾಹಿತಿ ಲಭ್ಯವಾಗಲಿದೆ ಎಂದು ವಿವರಿಸಿದರು.

ಪ್ರತಿ ವಾರ ರಾಜಕೀಯ ಮುಖಂಡರ ಜತೆ ಸಭೆ: ಮತದಾರ ಪರಿಷ್ಕರಣೆ ಬಗ್ಗೆ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲು ಪ್ರತಿ ವಿಧಾನಸಭಾ ಕ್ಷೇತ್ರವಾರು ವಾರಕ್ಕೊಂದು ಸಭೆ ನಡೆಸಲಾಗುವುದು. ಒಂದು ವಾರದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗುವುದು ಎಂದು ತುಷಾರ್‌ ಗಿರಿನಾಥ್‌ ತಿಳಿಸಿದರು. ಚುನಾವಣಾ ಆಯೋಗ ಆದೇಶದ ಮೇರೆಗೆ ಕೆಲವು ಬಿಎಲ್‌ಒಗಳನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಹೊಸ ಬಿಎಲ್‌ಒಗಳನ್ನು ನೇಮಿಸಲಾಗಿದೆ. ಬಿಎಲ್‌ಒಗಳ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧಕ್ಕೆ ತೀರ್ಮಾನ: ತುಷಾರ್‌ ಗಿರಿನಾಥ್‌

ಅರ್ಜಿ ಸಲ್ಲಿಕೆ ಬಗ್ಗೆ ಜಾಗೃತಿ: ಮತದಾರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮನೆ ಬದಲಾವಣೆ ಮಾಡಿದಾಗ ಹೊಸದಾಗಿ ತಮ್ಮ ಹೆಸರನ್ನು ನಮೂನೆ-6 ಮೂಲಕ ಅರ್ಜಿ ಸಲ್ಲಿಸಿ ಮತದಾರ ಪಟ್ಟಿಗೆ ಸೇರಿಸಿಕೊಳ್ಳುವುದರಿಂದ ಎರಡೆರಡು ಕಡೆ ಮತದಾರರ ಹೆಸರು ಪಟ್ಟಿಯಲ್ಲಿ ಉಳಿಯಲಿದೆ. ಈ ರೀತಿ ಮಾಡದೇ ನಮೂನೆ-8ರಲ್ಲಿ ಸ್ಥಳ ಬದಲಾವಣೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ತಿಳಿಸಿದರು.

Follow Us:
Download App:
  • android
  • ios