* ಬೆಂಗಳೂರಲ್ಲಿ ಗಾಳಿ ಜೊತೆಗೆ ಗುಡುಗು ಸಹಿತ ಭಾರೀ ಮಳೆ* ಶಿವನಂದ ಸರ್ಕಲ್, ಮಲ್ಲೇಶ್ವರಂ , ಶೇಷಾದ್ರಿ ಪುರಂ, ಮಾಗಡಿ ರೋಡ್ , ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆ* ಕಳೆದ ವಾರರದಿಂದ ಪ್ರತಿದಿನ ಸಂಜೆ  ವರುಣನ ಆರ್ಭಟ 

ಬೆಂಗಳೂರು, (ಏ.18): ಇನ್ನೂ ಮಳೆಗಾಲ ಆರಂಭವಾಗಿಲ್ಲ ಆಗಲೇಕಳೆದ ಒಂದು ವಾರದಿಂದ ಪ್ರತಿದಿನ ಸಂಜೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇಂದು(ಸೋಮವಾರ) ಸಹ ರಾಜ್ಯ ರಾಜ್ಯಧಾನಿಯಲ್ಲಿ ಹಲವೆಡೆ ಗುಡುಗು ಸಹಿತ ಮಳೆಯ ಅಬ್ಬರ ಮುಂದುವರೆದಿದೆ.

ಹೌದು..ಬೆಂಗಳೂರು ನಗರದ ಹಲವೆಡೆ ಧಾರಾಕಾರವಾಗಿ ವರುಣ ಆರ್ಭಟ ಶುರುವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತಿನಿತ್ಯ ಬೆಂಗಳೂರಿನ ಜನರಿಗೆ ಮಳೆರಾಯ ದರ್ಶನ ನೀಡುತ್ತಿದ್ದು, ಮಳೆಯಿಂದಾಗಿ ಹೈರಾಣಾಗಿದ್ದಾರೆ.

ಶಿವನಂದ ಸರ್ಕಲ್, ಮಲ್ಲೇಶ್ವರಂ , ಶೇಷಾದ್ರಿ ಪುರಂ, ಮಾಗಡಿ ರೋಡ್ , ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ. ಸರಿಯಾಗಿ ಕಚೇರಿಗಳು ಬಿಡುವ ಸಮಯದಲ್ಲೇ ಮಳೆ ಆರಂಭವಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುತ್ತಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಬೈಕ್​ಗಳನ್ನು ಪಾರ್ಕ್ ಮಾಡಿ ಮಳೆಯಿಂದ ರಕ್ಷಿಸಿಕೊಳ್ಳುತ್ತಿದ್ದಾರೆ. 

Bengaluru Rain: ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ: ಬಿಬಿಎಂಪಿ ವಿರುದ್ಧ ಜನಾಕ್ರೋಶ!

ಬಿರುಗಾಳಿ ಸಹಿತ ಜೋರು ಮಳೆ ಹಿನ್ನೆಲೆಯಲ್ಲಿ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಮರ ಧರಗೆ ಉರುಳಿದಿದೆ. ಇದರಿಂದ ಆರು ವಾಹನಗಳು‌ ಜಕಂ ಆಗಿವೆ. ಎರಡು ಕಾರು, ಒಂದು ಟ್ರಕ್, ಎರಡು ಟೂ ವೀಲರ್ , ಒಂದು ಆಟೋಗೆ ಹಾನಿಯಾಗಿದೆ.

ನಗರದ ತಗ್ಗು ಪ್ರದೇಶದ ಬಹುತೇಕ ರಸ್ತೆಗಳು ಮಳೆ‌ ನೀರಿನಿಂದ ಆವೃತಗೊಂಡಿವೆ. ಜಲಾವೃತವಾಗಿ ರಸ್ತೆಗಳು ಕೆರೆಯಂತಾಗಿವೆ. ಸುಲ್ತಾನ್ ಪೇಟೆ ರಸ್ತೆಗಳಲ್ಲಿ ಸೇರಿದಂತೆ ಹಲವೆಡೆ ರಸ್ತೆಗಳು ಜಾಲಾವೃತಗೊಂಡಿದ್ದು, ಬೈಕ್ ಸವಾರರು ನೀರು ತುಂಬಿದ ರಸ್ತೆಗಳಲ್ಲಿ ಸಂಚರಿಸಲು ಪರದಾಡುವಂತ್ತಾಗಿದೆ. ಇನ್ನು ಕೆಲ ಕಡೆ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ನೀರು ಹೊರಹಾಕಲು ನಿವಾಸಿಗಳು ಹರಸಾಹಸ ಪಡುತ್ತಿದ್ದಾರೆ. 

ಇನ್ನೂ ಮಳೆಗಾಲ ಆರಂಭವಾಗಿಲ್ಲ ಆಗಲೇ ಬೆಂಗಳೂರಿಗರಿಗೆ ಮಳೆ ಕಾಟ ಶುರುವಾಗಿದೆ. ಇನ್ನೂ ಮಳೆಗಾಲದಲ್ಲಿ ವರುಣ ಏನೆಲ್ಲಾ ಅವಾಂತ ಸೃಷ್ಟಿಸುತ್ತಾನೋ ಎನ್ನುವ ಆತಂಕ ಸಹ ಜನರಲ್ಲಿ ಶುರುವಾಗಿದೆ.

ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಗುಡುಗು ಸಹಿತ ಮಳೆ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕಳೆದ ಕೆಲವು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳೂ ಇದೇ ರೀತಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉ.ಒಳನಾಡಿನಲ್ಲಿ ಇಂದು ಮತ್ತು ನಾಳೆ ಬಹುತೇಕ ಕಡೆ ಮಳೆಯಾಗಲಿದೆ. ಏಪ್ರಿಲ್ 18, 19 ರಂದು ಕೆಲ ಜಿಲ್ಲೆಗಳಿಗೆ ಮಾತ್ರ ಮಳೆಯಾಗುತ್ತೆ ಎಂದು ಹವಾಮಾನ ಇಲಾಖೆಯ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.

ಚಾಮರಾಜನಗರ, ಬೆಂಗಳೂರು, ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ಇಂದು(ಸೋಮವಾರ) ಮತ್ತು ನಾಳೆ(ಮಂಗಳವಾರ) ಭಾರೀ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿಗೆ ಗುಡುಗು ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ.