ಬೆಂಗಳೂರು ಬಡವರ ಬದುಕು ಅತಂತ್ರ: ಫುಟ್ಪಾತ್ ವ್ಯಾಪಾರಿಗಳ ಶೆಡ್, ತಳ್ಳುಗಾಡಿ ಹೊತ್ತೊಯ್ದ ಬಿಬಿಎಂಪಿ
ಬಿಬಿಎಂಪಿ ವತಿಯಿಂದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮಾಡುತ್ತಿದ್ದು, ಇದರಲ್ಲಿ ಬಡಜನರ ಶೆಡ್ಗಳು, ಮಾರಾಟದ ವಸ್ತುಗಳನ್ನು ಬಿಬಿಎಂಪಿ ವಶಕ್ಕೆ ಪಡೆಯುತ್ತಿದೆ. ಆದರೆ, ಬಡಜನರ ಬದುಕು ಅತಂತ್ರವಾಗುತ್ತಿದೆ.

ಬೆಂಗಳೂರು (ನ.18): ಬಿಬಿಎಂಪಿ ವ್ಯಾಪ್ತಿಯ ಪೂರ್ವ, ದಕ್ಷಿಣ ಹಾಗೂ ಪಶ್ಚಿಮ ವಲಯ ವ್ಯಾಪ್ತಿಯಲ್ಲಿಯ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ವತಿಯಿಂದ ನಡೆಸಲಾಯಿತು. ಈ ವೇಳೆ ಬಡವರು ಇಟ್ಟುಕೊಂಡಿದ್ದ ಪುಸ್ತಕ ಮಾರಾಟ, ಚಪ್ಪಲಿ ಮಾರಾಟ ಶೆಡ್, ಟೀ ಮಾರಾಟದ ಶೆಡ್, ಪಾನ್ ಬೀಡಾ ಶಾಪ್ ಇತ್ಯಾದಿಗಳನ್ನು ತೆರವುಗೊಳಿಸಿ ಫುಟ್ಪಾತ್ ವ್ಯಾಪಾರಿಗಳನ್ನು ತೆರವಿಗೊಳಿಸಲಾಯಿತು.
ಪೂರ್ವ ವಲಯದ ಇಂದಿರಾನಗರ 100 ಅಡಿ ರಸ್ತೆ ಮತ್ತು ಸಿ.ಎಂ.ಹೆಚ್ ರಸ್ತೆಯಲ್ಲಿ ಯೋಜನಾ ವಿಭಾಗದಿಂದ ಕೈಗೊಂಡಿರುವ ವೈಟ್ ಟಾಪಿಂಗ್ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿ ಇನ್ನು ಮುಂದೆ ಒತ್ತುವರಿ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿರುತ್ತದೆ. ಶನಿವಾರ ನಡೆಸಿದ ತಪಾಸಣೆಯಲ್ಲಿ ಇಂದಿರಾನಗರ 100 ಅಡಿ ರಸ್ತೆ ಮತ್ತು ಸಿ.ಎಂ.ಹೆಚ್ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ತಾತ್ಕಾಲಿಕ ನಾಮಫಲಕಗಳು, ಅಂಗಡಿಳನ್ನು ತೆರವುಗೊಳಿಸಿ ಇನ್ನುಮುಂದೆ ಪಾದಚಾರಿ ಮಾರ್ಗ ಒತ್ತುವರಿ ಮಾಡದಂತೆ ಸೂಚನೆ ನೀಡಲಾಗಿದೆ.
ಬೆಂಗಳೂರು: ಬದುಕು ಕಿತ್ತುಕೊಂಡ ಜಾಗದಲ್ಲೇ ಚಪ್ಪಲಿ ಹೊಲೆಯುವ ಕೆಲಸ ಆರಂಭಿಸಿದ ವೃದ್ಧ ನಂಜುಡಪ್ಪ
ಕೆಲವೆಡೆ ಹೊಟೇಲ್, ಕಾರ್ ಶೋರೂಮ್ ಮುಂಭಾಗ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಕಾಂಕ್ರಿಂಟ್ ರ್ಯಾಂಪ್ ಅನ್ನು ನಿರ್ಮಿಸಿದ್ದು, ಅದನ್ನು ಸ್ಥಳದಲ್ಲೇ ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ. ಅದಲ್ಲದೆ ಆಸ್ಪತ್ರೆಯ ಮುಂಭಾಗ ಸ್ಟೀಲ್ ರ್ಯಾಂಪ್ ಅಳವಡಿಸಿದ್ದು, ಅದನ್ನು ಅವಶ್ಯಕತೆಯಿರುವಾಗ ಮಾತ್ರ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಕಲ್ಟ್ ಫಿಟ್ ಬಳಿ ಶಾಶ್ವತ ನಾಮಫಲಕ ಅಳವಡಿಸಿದ್ದು, ಅದನ್ನು ಸ್ಥಳದಲ್ಲೇ ತೆರವುಗೊಳಸಲಾಗಿದೆ. ಇನ್ನು ಬಹುತೇಕ ಕಡೆ ಪಾದಚಾರಿ ಮಾರ್ಗಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದು, ಇನ್ನು ಮುಂದೆ ಪಾದಚಾರಿ ಮಾರ್ಗಗಳಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ನೋಡಿಕೊಳ್ಳಲು ಮಳಿಗೆಗಳ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಪುಲಕೇಶಿನಗರದ ಬೋರ್ ಬ್ಯಾಂಕ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅನಾಥ ವಾಹನಗಳನ್ನು ನಿಲ್ಲಿಸಿದ್ದು, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಿಲಾಗಿದೆ. ಇದೇ ವೇಳೆ ರಸ್ತೆ ಬದಿ ಬಿದ್ದಂತಹ ಭಗ್ನಾವಶೇಷಗಳನ್ನು ತೆರವುಗೊಳಿಸಲಾಯಿತು. ಇನ್ನು ಪಾದಚಾರಿ ಮಾರ್ಗದಲ್ಲಿ ಗಣೇಶ ಮೂರ್ತಿಗಳನ್ನಿಟ್ಟಿದ್ದು, ಅವುಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಸಂಬಂಧಪಟ್ಟವರಿಗೆ ಅಧಿಕಾರಿಗಳು ಸೂಚನೆ ನೀಡಿರುತ್ತಾರೆ. ತೆರವು ಕಾರ್ಯಾರಣೆಯ ವೇಳೆ ಯೋಜನಾ ವಿಭಾಗದ ಮುಖ್ಯ ಅಭಿಯಂತರರಾದ ಲೋಕೇಶ್, ಅಧೀಕ್ಷಕ ಅಭಿಯಂತರರಾದ ಹೇಮಲತಾ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಫುಟ್ಪಾತ್ ಒತ್ತುವರಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಬಿಬಿಎಂಪಿ!
ದಕ್ಷಿಣ ವಲಯ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಚಿಕ್ಕಪೇಟೆಯ ಸಿದ್ದಯ್ಯ ರಸ್ತೆ ಪಾದಚಾರಿ ಮಾರ್ಗದಲ್ಲಿ ಅನುಪಯುಕ್ತ ವಸ್ತುಗಳನ್ನು ಆಯಾ ಮಳಿಗೆಗಳ ಮುಂಭಾಗ ಹಾಕಲಾಗಿದ್ದು, ಇದರಿಂದ ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಈ ಪೈಕಿ ಕೂಡಲೆ ಎಲ್ಲಾ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಬಸವನಗುಡಿಯ ವಿದ್ಯಾಪೀಠ ವಾರ್ಡ್ನ ಸಿ.ಟಿ ಬೆಡ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ತಳ್ಳುವ ಗಾಡಿಗಳನ್ನು ಬೆರೆಕಡೆ ತೆರಳಿ ಮಾರಾಟ ಮಾಡಿಕೊಳ್ಳಲು ಸೂಚಿಸಲಾಗಿದೆ. ಸದರಿ ವೇಳೆ ಸ್ಥಳದಲ್ಲಿದ್ದ ಬುಟ್ಟಿಗಳು ಹಾಗೂ ಟೇಬಲ್ಗಳನ್ನು ಜಪ್ತಿ ಮಾಡಲಾಗಿರುತ್ತದೆ.
ಪಶ್ಚಿಮ ವಲಯ: ಗಾಂಧಿನಗರದ ಅವೆನ್ಯೂ ರಸ್ತೆ ಮೈಸೂರು ಬ್ಯಾಂಕ್ ಬಳಿಯ ಕೃಷ್ಣ ಬಿಲ್ಡಿಂಗ್ ಮುಂಭಾಗ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಪುಸ್ತಕಗಳು ಸೇರಿದಂತೆ ಇನ್ನಿತರ ವ್ಯಾಪಾರ ಮಾಡುತ್ತಿರುವವರನ್ನು ತೆರವುಗೊಳಿ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿರುತ್ತದೆ.