ಸರ್ಕಾರದ ಮತ್ತೊಂದು ಯೋಜನೆಯಾದ ಅನ್ನ ಭಾಗ್ಯ ಯೋಜನೆಗೆ ಐದು ಕೆಜಿ ಬದಲಾಗಿ ಬ್ಯಾಂಕಿಗೆ ಫಲಾನುಭವಿಗಳ ಅಕೌಂಟಿಗೆ ಹಣ ಹಾಕಲು ನಿರ್ಧರಿಸಿದ್ದರಿಂದ ಇಲ್ಲಿಯೂ ಫಲಾನುಭವಿಗಳು ಅಕೌಂಟ್‌ ಲಿಂಕ್‌ಗೆ ಪರದಾಟ ನಡೆಸುವಂತಾಗಿದೆ.

ಈಶ್ವರ್‌ ಶೆಟ್ಟರ

Add Asianetnews Kannada as a Preferred SourcegooglePreferred

ಬಾಗಲಕೋಟೆ(ಜು.21): ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸಿಗದ ತಾಂತ್ರಿಕ ಸಹಾಯ ಒಂದೆಡೆಯಾದರೆ ಜಿಲ್ಲಾ ಕೇಂದ್ರದಲ್ಲಿನ ಕರ್ನಾಟಕ 1 ಕೇಂದ್ರದಲ್ಲಿ ಸಿಗುವ ಸಹಾಯಕ ಸೌಲಭ್ಯಗಳಲ್ಲಿನ ಗೊಂದಲದಿಂದ ಫಲಾನುಭವಿಗಳು ಅತಂತ್ರಗೊಂಡು ಪರದಾಡುವಂತಾಗಿದೆ.

ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಗುರುವಾರ ಆರಂಭಗೊಂಡಿದ್ದು ಅರ್ಜಿ ಸಲ್ಲಿಕೆಗಾಗಿ ನೂರಾರು ಕುಟುಂಬಗಳು ಆಯಾ ಕೇಂದ್ರಗಳತ್ತ ಬೆಳಿಗ್ಗೆಯಿಂದಲೇ ಅಲೆದಾಡಿ ಅರ್ಜಿಗೆ ಮುಂದಾದರೆ ಅಲ್ಲಿನ ಕೇಂದ್ರಗಳಲ್ಲಿನ ಸರ್ವರ್‌ಗಳು ಸ್ಲೋ ಆಗಿರುವುದರಿಂದ ಘಂಟೆಗಳ ಕಾಲ ಕಾಯ್ದು ಕುಳಿತರು ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗದೆ ಇರುವುದು ಸಹಜವಾಗಿ ಬೇಸರ ಮೂಡಿಸಿದೆ.

ಬಾಗಲಕೋಟೆ: 3 ವರ್ಷದಿಂದ ಬಾರದ ಬಿಲ್​, ಸಂಕಷ್ಟದಲ್ಲಿ ಗುತ್ತಿಗೆದಾರರು, ಸರ್ಕಾರಕ್ಕೆ ಜು. 25 ಡೆಡ್‌ಲೈನ್‌..!

ಬಾಗಲಕೋಟೆ ನವನಗರದಲ್ಲಿನ ಕರ್ನಾಟಕ 1 ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗಾಗಿ ನೂರಾರು ಜನ ಸೇರಿದ್ದರಿಂದ ಸಹಜವಾಗಿ ಮಹಿಳೆಯರಿಂದ ಕೇಂದ್ರ ತುಂಬಿ ತುಳುಕುತ್ತಿತ್ತು. ಜೊತೆಗೆ ಅರ್ಜಿ ಸಲ್ಲಿಸಲು ಸಾಲುಗಟ್ಟಿಮಹಿಳೆಯರು ಸಹ ನಿಂತಿದ್ದರಿಂದ ಅಲ್ಲಿನ ಸಿಬ್ಬಂದಿಗೂ ತಾಂತ್ರಿಕ ತೊಂದರೆ ಕಾರಣವನ್ನು ಹೇಳುವುದೆ ಒಂದು ಕಾಯಕವಾಗಿತ್ತು.

ಪಡಿತರದ ಹಣ ಪಡೆಯಲು ಸಹ ಪರದಾಟ:

ಸರ್ಕಾರದ ಮತ್ತೊಂದು ಯೋಜನೆಯಾದ ಅನ್ನ ಭಾಗ್ಯ ಯೋಜನೆಗೆ ಐದು ಕೆಜಿ ಬದಲಾಗಿ ಬ್ಯಾಂಕಿಗೆ ಫಲಾನುಭವಿಗಳ ಅಕೌಂಟಿಗೆ ಹಣ ಹಾಕಲು ನಿರ್ಧರಿಸಿದ್ದರಿಂದ ಇಲ್ಲಿಯೂ ಫಲಾನುಭವಿಗಳು ಅಕೌಂಟ್‌ ಲಿಂಕ್‌ಗೆ ಪರದಾಟ ನಡೆಸುವಂತಾಗಿದೆ.

ಪಡಿತರ ಕಾರ್ಡ್‌ ಹೊಂದಿದ ಫಲಾನುಭವಿಗಳ ಬ್ಯಾಂಕ್‌ ಅಕೌಂಟ್‌ ಲಿಂಕ್‌ಗೂ ಕರ್ನಾಟಕ 1 ಕೇಂದ್ರದ ಮೇಲೆ ಅವಲಂಬಿತವಾಗಿದ್ದರಿಂದ ಅಲ್ಲಿ ಯಾವುದಕ್ಕೂ ಸರಿಯಾದ ಮಾರ್ಗದರ್ಶನ ಸಿಗುತ್ತಿಲ್ಲ. ಮಾಡಿರುವ ಅಕೌಂಟ್‌ ಲಿಂಕ್‌ಗೆ ಹಣ ಕಳಿಸಿದ್ದೇವೆ ಎನ್ನುತ್ತಾರೆ. ಆದರೆ, ಹಣ ಅಕೌಂಟ್‌ಗೆ ಬಾರದೇ ಇರುವುದರಿಂದ ಮತ್ತೆ ಮತ್ತೆ ಇಲ್ಲಿ ಬರಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು. ಸರ್ಕಾರ ಕೂಡಲೇ ತನ್ನ ಕ್ರಮಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿರುವ ಮಹಿಳೆಯರು ಇಲ್ಲದಿದ್ದರೆ ನಾವು ನಿತ್ಯ ಮಕ್ಕಳು ಮರಿ ಸಮೇತ ಕರ್ನಾಟಕ 1 ಕೇಂದ್ರದ ಬಳಿ ನಿಲ್ಲುವಂತಾಗುತ್ತದೆ ಎಂದು ಹೇಳಿದರು.

ಒಟ್ಟಾರೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಜಿಲ್ಲಾಡಳಿತ ಅಗತ್ಯ ನೆರವು ನೀಡುವ ಅನಿವಾರ್ಯತೆ ಇದೆ. ಇಲ್ಲದೇ ಹೋದರೆ ಸೂಕ್ತ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯ ದೊರೆಯದೆ ಹೋಗಬಹುದು. ಈ ನಿಟ್ಟಿನಲ್ಲಿ ಯೊಚಿಸುವುದು ಅಗತ್ಯವಿದೆ.

ಮನಿ ಭಾಗ್ಯ: ಅಕ್ಕಿ ರೊಕ್ಕಕ್ಕಾಗಿ ಬ್ಯಾಂಕ್‌ಗಳು ರಶ್‌..!

ವಿಳಂಬಕ್ಕೆ ಕಾರಣ ಇದು?

ತಾಲೂಕಿನಾದ್ಯಂತ ಬಂದಿರುವ ಮಹಿಳೆಯರಿಗೆ ತಮ್ಮ ಗ್ರಾಮದ ಸದಸ್ಯರಿಗೆ ಅರ್ಜಿ ಸಲ್ಲಿಸಲು ಕರ್ನಾಟಕ 1 ಸಿಬ್ಬಂದಿ ಅವಕಾಶ ಕೊಡುತ್ತಿಲ್ಲ ಇದಕ್ಕೆ ಪ್ರಮುಖ ಕಾರಣ ಸಿಬ್ಬಂದಿಗಳು ನೀಡುವುದೆ ಬೇರೆ ಅವರು ಇಂದು ಆರಂಭಿಕವಾಗಿ ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದ 60 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಉಳಿದ ಗ್ರಾಮಸ್ತರಿಗೆ ಅವಕಾಶವಿಲ್ಲ ಎಂದು ಹೇಳಿದ್ದರಿಂದ ದೂರದ ಗ್ರಾಮಗಳಿಂದ ಬಂದಿದ್ದ ಮಹಿಳೆಯರು ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಬೇಕಾಯಿತು.

ಕೇವಲ ಒಂದೇ ಗ್ರಾಮಕ್ಕೆ ಏಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಶ್ನಿಸಿದ ಮಹಿಳೆಯರು ಮತ್ತೆ ಸೂಕ್ತ ಮಾಹಿತಿ ಪಡೆಯಲು ಸಹ ಪರದಾಡಿದರು. ಬೆಳಗ್ಗೆಯಿಂದಲೇ ಅರ್ಜಿ ಸಲ್ಲಿಕೆಗೆ ಕಾಯ್ದು ಕುಳಿತಿರುವ ನಮಗೆ ಒಂದೆಡೆ ತಾಂತ್ರಿಕ ವಿಳಂಬ ಇನ್ನೊಂದೆಡೆ ಮಾಹಿತಿಯ ಕೊರತೆಯಿಂದ ಇಡೀ ದಿನ ಕುಳಿತರು ಸಹ ಕೆಲಸವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.