ಬೆಳಗಾವಿಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ, ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ಅಥಣಿ ತಾಲೂಕಿನ ಗಡಿಭಾಗದ ಬಳ್ಳಿಗೇರಿ ವಲಯದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಓರ್ವ ಮಹಿಳೆಯನ್ನ ರಕ್ಷಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಳ್ಳಿಗೇರಿ ಗ್ರಾಮದ ಲಾಡ್ಜ್ ಮಾಲೀಕ ಸರದಾರ ಭಗವಂತ ಕಾಂಬಳೆ, ವಿಜಯಪುರ ಜಿಲ್ಲೆಯ ಚಡಚಣ ಮೂಲದ ಪ್ರವೀಣ ಬಸವರಾಜ ಮಲ್ದಾರಿ ಎನ್ನಲಾಗಿದೆ.

Add Asianetnews Kannada as a Preferred SourcegooglePreferred

ಹೋಟೆಲ್ ಉದ್ಯಮದ ಜೊತೆಗೆ ವೇಶ್ಯಾವಾಟಿಕೆ ದಂಧೆ

ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಬಳ್ಳಿಗೇರಿ ಗ್ರಾಮದಲ್ಲಿ ಅಕ್ರಮ ಸರಾಯಿ, ಶಿಂಧಿ ಮಾರಾಟ, ಅಕ್ರಮ ತಂಬಾಕು ಉತ್ಪನ್ನಗಳ ಸಾಗಾಣಿಕೆ, ಮಟ್ಕಾ ದಂಧೆ ತೀವ್ರವಾಗಿದ್ದು, ಜೊತೆಗೆ ಇತ್ತೀಚಿಗೆ ಹೋಟೆಲ್ ಉದ್ಯಮದ ಜೊತೆಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ. ಅನೇಕ ತಿಂಗಳುಗಳಿಂದ ನಡೆಯುತ್ತಿದ್ದ ಇಲ್ಲಿನ ವೇಶ್ಯಾವಾಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಅಥಣಿ ಪೊಲೀಸರು ಶುಕ್ರವಾರ ದಾಳಿ ನಡೆಸಿ ಹೊಟೇಲ್ ಮಾಲೀಕ ಮತ್ತು ದಂಧೆಗೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ್ ಹಳ್ಳೂರು ನೇತೃತ್ವದಲ್ಲಿ ಪ್ರೊಬೇಷನರಿ ಪಿಎಸ್‌ಐ ಆರತಿ ತೇಲಿ ಹಾಗೂ ಸಿಬ್ಬಂದಿಗಳಾದ ಬಿ.ಆರ್.ಪಾಟೀಲ, ಬಿ.ವೈ.ಮನ್ನಾಪೂರ, ಎಸ್.ಬಿ.ಖೋತ ಹಾಗೂ ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಮುಡಸಿ ಭಾಗವಹಿಸಿದ್ದರು.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: 'ನಮ್ಮ ಊರಿಗೆ ಬಂದು ವೇಶ್ಯಾವಾಟಿಕೆ ನಡೆಸುತ್ತೀರಾ?..' ಯುವತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಿಡಿಗೇಡಿಗಳು ಅರೆಸ್ಟ್

ಇದನ್ನೂ ಓದಿ: ರಾಯಚೂರಲ್ಲೂ ಮಾಂಸದಂಧೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಮೂವರು ಪಿಂಪ್‌ಗಳು ಅಂದರ್