ಬೆಂಗಳೂರು: ಸರ್ಕಾರ ಕೈ ಹಿಡಿಯದಿದ್ದರೆ ಬಿಬಿಎಂಪಿಗೆ ಸಂಕಷ್ಟ..!
ಹಿಂದಿನ ಸರ್ಕಾರ ಘೋಷಿಸಿದ್ದ ಯೋಜನೆಗಳು ಈಗಾಗಲೇ ಅನುಷ್ಠಾನ, ಈ ಕಾಮಗಾರಿಗಳ ಬಿಲ್ ಪಾವತಿಗೆ ಹೊಸ ಸರ್ಕಾರದ ನೆರವು ಅಗತ್ಯ, ಒಂದು ವೇಳೆ ಸರ್ಕಾರ ಅನುದಾನ ನೀಡದಿದ್ದರೆ ಗುತ್ತಿಗೆದಾರರಿಗೆ ಬಿಲ್ ನೀಡಲು ಸಂಕಷ್ಟ, ಹೆಚ್ಚು ಅನುದಾನಕ್ಕೆ ಎದುರು ನೋಡುತ್ತಿದೆ ಪಾಲಿಕೆ.
ಗಿರೀಶ್ ಗರಗ
ಬೆಂಗಳೂರು(ಮೇ.26): ಬಿಜೆಪಿ ಅಧಿಕಾರಾವಧಿಯಲ್ಲಿ ಘೋಷಿಸಿದ, ಅನುಮೋದನೆ ನೀಡಿದ ಯೋಜನೆಗಳು ಇದೀಗ ಬಿಬಿಎಂಪಿ ಆರ್ಥಿಕ ಸ್ಥಿತಿ ಹದಗೆಡುವಂತೆ ಮಾಡಿದೆ. ಅಲ್ಲದೆ, ಬಿಬಿಎಂಪಿಯನ್ನು ನಂಬಿ ಕೆಲಸ ಮಾಡಿದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಕಾಮಗಾರಿ ಸೇರಿದಂತೆ ಇನ್ನಿತರ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತದೆ. ಪ್ರತಿ ವರ್ಷದ ರಾಜ್ಯ ಬಜೆಟ್ನಲ್ಲಿ ಬಿಬಿಎಂಪಿಗೇ ಪ್ರತ್ಯೇಕ ಅನುದಾನ ಘೋಷಿಸಲಾಗುತ್ತಿದೆ. ಅದರಂತೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದ ಚಾಲ್ತಿ ಕಾಮಗಾರಿಗಳಿಗಾಗಿ 2023-24ನೇ ಸಾಲಿನಲ್ಲಿ 7ರಿಂದ 8 ಸಾವಿರ ಕೋಟಿ ರುಪಾಯಿ ಅನುದಾನ ನೀಡುವಂತೆ ಬಿಬಿಎಂಪಿ ಹಣಕಾಸು ವಿಭಾಗ ಮನವಿ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ .3,632 ಕೋಟಿ ಮಾತ್ರ ಅನುದಾನ ನೀಡುವುದಾಗಿ ಬಜೆಟ್ನಲ್ಲಿ ಘೋಷಿಸಿತ್ತು.
Bengaluru: ನಗರದ ಎಲ್ಲಾ 243 ವಾರ್ಡಲ್ಲೂ ಬಡಜನರ ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟೀನ್ ಆರಂಭ?
ಇದೀಗ ಸರ್ಕಾರ ಬದಲಾಗಿದ್ದು, ಹಿಂದಿನ ಸರ್ಕಾರ ಅನುಮೋದನೆ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದ ಯೋಜನೆಗಳ ಬಿಲ್ ಪಾವತಿಗೆ ನೂತನ ಸರ್ಕಾರ ನೆರವು ನೀಡಬೇಕಿದೆ. ಒಂದು ವೇಳೆ ರಾಜ್ಯ ಸರ್ಕಾರ ಹೆಚ್ಚುವರಿ ಅನುದಾನ ನೀಡದಿದ್ದರೆ, ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಬಿಬಿಎಂಪಿ ಪರದಾಡಬೇಕಿದೆ.
ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ .11 ಸಾವಿರ ಕೋಟಿ ಬಜೆಟ್ ಮಂಡಿಸಿದ್ದು, ಅದರಲ್ಲಿ ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗಾಗಿ .6,264 ಕೋಟಿ ವ್ಯಯಿಸುವುದಾಗಿ ತಿಳಿಸಿದೆ. ಅದರ ಜತೆಗೆ .493 ಕೋಟಿ ಚಾಲ್ತಿ ಕಾಮಗಾರಿಗಳು ಎಂದು ಹೇಳಲಾಗಿದೆ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳೆಲ್ಲವೂ ರಾಜ್ಯ ಸರ್ಕಾರದ ಅನದಾನದಿಂದ ಕೈಗೊಳ್ಳುವಂತಹದ್ದಾಗಿದೆ. ಆದರೆ, ರಾಜ್ಯ ಸರ್ಕಾರದಿಂದ 2023-24ನೇ ಸಾಲಿಗೆ .3,632 ಕೋಟಿ ಅನುದಾನ ಬರಲಿದೆ ಎಂದು ತಿಳಿಸಲಾಗಿದೆ. ಇದನ್ನು ಗಮನಿಸಿದರೆ ಬಿಬಿಎಂಪಿಗೆ .3125 ಕೋಟಿ ರಾಜ್ಯ ಸರ್ಕಾರದಿಂದ ಬರಬೇಕಿದೆ.
ಅದರ ಜತೆಗೆ ರಾಜ್ಯ ಸರ್ಕಾರ ಘೋಷಿಸಿ, ಅನುಮೋದಿಸಿರುವ .273 ಕೋಟಿಯ ಹೈಡೆನ್ಸಿಟಿ ಕಾರಿಡಾರ್ಗಳ ಅಭಿವೃದ್ಧಿ, .1,813 ಕೋಟಿ ವೆಚ್ಚದಲ್ಲಿ 195 ಕಿ.ಮೀ. ಉದ್ದದ ಚರಂಡಿ, ರಾಜಕಾಲುವೆಗಳ ಅಭಿವೃದ್ಧಿ, .1 ಸಾವಿರ ಕೋಟಿ ವೆಚ್ಚದಲ್ಲಿ 120 ಕಿ.ಮೀ. ವೈಟ್ಟಾಪಿಂಗ್ ಕಾಮಗಾರಿಗಳು ಈಗಾಗಲೇ ಚಾಲನೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಕಾಮಗಾರಿಗಳ ಬಿಲ್ ಪಾವತಿಗೆ ರಾಜ್ಯ ಸರ್ಕಾರದಿಂದಲೇ ಅನುದಾನ ನೀಡಬೇಕಿದೆ. ಆದರೆ, ಇದೀಗ ಸರ್ಕಾರ ಬದಲಾದ ಕಾರಣ ಅವೆಲ್ಲಕ್ಕೂ ಅನುದಾನ ದೊರೆಯಲಿದೆಯೇ ಎಂಬ ಅನುಮಾನ ಬಿಬಿಎಂಪಿ ಅಧಿಕಾರಿಗಳನ್ನು ಕಾಡುತ್ತಿದೆ.
2000 ಕೋಟಿ ಬಿಲ್ ಬಾಕಿ
ಬಿಬಿಎಂಪಿ ಹಣಕಾಸು ವಿಭಾಗದ ಲೆಕ್ಕದ ಪ್ರಕಾರ ಸದ್ಯ ರಾಜ್ಯ ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ .2,100 ಕೋಟಿ ಮೊತ್ತದ ಬಿಲ್ ಬಾಕಿ ಉಳಿದಿವೆ. ಅವುಗಳನ್ನೆಲ್ಲ ಪಾವತಿಸಲು ರಾಜ್ಯ ಸರ್ಕಾರವೇ ಅನುದಾನ ನೀಡಬೇಕಿದೆ.
Bengaluru: ಇಂದಿರಾ ಕ್ಯಾಂಟೀನ್ ತಿಂಡಿ ಬೆಲೆಯಲ್ಲಿ ದುಪ್ಪಟ್ಟು ಹೆಚ್ಚಳ
4 ಸಾವಿರ ಕೋಟಿ ಅನುದಾನಕ್ಕೆ ಬೇಡಿಕೆ
ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿರುವ ಕಾಮಗಾರಿಗಳ ಬಿಲ್ ಪಾವತಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬಿಬಿಎಂಪಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಅಲ್ಲದೆ, ನೂತನ ಸರ್ಕಾರ ಜುಲೈನಲ್ಲಿ ಮಂಡಿಸಲಿರುವ ಪರಿಷ್ಕೃತ ರಾಜ್ಯ ಬಜೆಟ್ನಲ್ಲಿ ಈಗಾಗಲೇ ಘೋಷಿಸಲಾದ ಅನುದಾನ ಹೊರತುಪಡಿಸಿ ಹೆಚ್ಚುವರಿಯಾಗಿ 4ರಿಂದ 5 ಸಾವಿರ ಕೋಟಿ ರು. ಅನುದಾನ ಘೋಷಿಸಬೇಕೆಂದೂ ಕೋರಲಾಗುತ್ತಿದೆ. ಹೀಗೆ ಅನುದಾನ ಘೋಷಿಸಿದರೆ ಮಾತ್ರ ಬಿಬಿಎಂಪಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಹಿಂದಿನ ಸರ್ಕಾರ ಘೋಷಿಸಿದ್ದ ಯೋಜನೆಗಳಲ್ಲಿ ಬಹುತೇಕ ಕಾಮಗಾರಿ ಈಗಾಗಲೇ ಅನುಷ್ಠಾನಗೊಳಿಸಲಾಗುತ್ತಿದೆ. .8 ಸಾವಿರ ಕೋಟಿ ಮೊತ್ತದ ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿದೆ. ಆದರೆ, ಪ್ರಸಕ್ತ ಸಾಲಿನ ರಾಜ್ಯ ಬಜೆಟ್ನಲ್ಲಿ .3 ಸಾವಿರ ಕೋಟಿ ಮಾತ್ರ ಅನುದಾನ ಘೋಷಿಸಲಾಗಿತ್ತು. ಅದರಿಂದ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಸಾಧ್ಯವಾಗದಂತಾಗಿದೆ. ಆರ್ಥಿಕ ಸಮಸ್ಯೆ ನಿವಾರಿಸಿಕೊಳ್ಳಲು ಜುಲೈನಲ್ಲಿ ಮಂಡಿಸಲಿರುವ ಪರಿಷ್ಕೃತ ರಾಜ್ಯ ಬಜೆಟ್ನಲ್ಲಿ 4ರಿಂದ 5 ಸಾವಿರ ಕೋಟಿ ರು. ಹೆಚ್ಚುವರಿ ಅನುದಾನ ನೀಡುವಂತೆ ಕೋರಲು ನಿರ್ಧರಿಸಲಾಗಿದೆ ಅಂತ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು ಜಯರಾಮ್ ರಾಯಪುರ ತಿಳಿಸಿದ್ದಾರೆ.