ಒಮ್ಮೆ ದುರಸ್ತಿ ಮಾಡಲಾದ ರಸ್ತೆಯಲ್ಲಿ ಮತ್ತೆ ರಸ್ತೆ ಅಗೆದು ಗುಂಡಿಗಳನ್ನು ಸೃಷ್ಟಿಸಿದರೆ ಆ ರಸ್ತೆಗಳ ದುರಸ್ತಿಗಾಗಿ ಬಿಬಿಎಂಪಿ ಅನುದಾನವನ್ನು ಬಳಸುವಂತಿಲ್ಲ. 

ಬೆಂಗಳೂರು(ಜ.26): ಬಿಬಿಎಂಪಿಯ ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ರಸ್ತೆ ಅಗೆಯುವುದು ಕಂಡು ಬಂದರೂ ಅದನ್ನು ತಡೆಯುವಲ್ಲಿ ವಿಫಲರಾದರೆ, ರಸ್ತೆ ದುರಸ್ತಿಗೆ ತಗಲುವ ವೆಚ್ಚವನ್ನು ಅವರ ಖಾತೆಯಿಂದ ಕಡಿತಗೊಳಿಸಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ಆದೇಶಿಸಿದ್ದಾರೆ.

ರಸ್ತೆ ದುರಸ್ತಿಗೂ ಮುನ್ನ ಬೆಸ್ಕಾಂ, ಜಲಮಂಡಳಿ, ಒಎಫ್‌ಸಿ ಕೇಬಲ್‌ ಅಳವಡಿಕೆ ಮಾಡುವ ಸಂಸ್ಥೆಗಳಿಗೆ ಆ ಕುರಿತು ಮಾಹಿತಿ ನೀಡುವಂತೆ ಬಿಬಿಎಂಪಿ ಯೋಜನಾ ವಿಭಾಗ ಎಲ್ಲ ವಾರ್ಡ್‌ ಎಂಜಿನಿಯರ್‌ಗಳಿಗೆ ಸೂಚಿಸಿದೆ. ಒಂದು ವೇಳೆ ಆ ಸಂಸ್ಥೆಗಳು ರಸ್ತೆಯಲ್ಲಿ ತಮ್ಮ ಕಾಮಗಾರಿ ನಡೆಸಬೇಕೆಂದರೆ ಅದಕ್ಕೆ ಅನುಮತಿ ನೀಡುವಂತೆಯೂ ತಿಳಿಸಲಾಗಿದೆ.

ಸಂಘ ಸಂಸ್ಥೆಗಳಿಗೆ ಅರ್ಥಿಕ ಸಹಾಯ ಧನ ನೀಡಲು ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಬಿಬಿಎಂಪಿ

ಸಂಸ್ಥೆಗಳಿಗೆ ಮಾಹಿತಿ ನೀಡಿ. ಆ ಸಂಸ್ಥೆಗಳಿಂದ ಉತ್ತರ ದೊರೆತ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು. ರಸ್ತೆ ಅಗೆದು ಕಾಮಗಾರಿ ಮುಗಿದ ಕೂಡಲೆ ರಸ್ತೆಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಒಮ್ಮೆ ರಸ್ತೆ ದುರಸ್ತಿ, ಮರು ಡಾಬರೀಕರಣ ಕಾಮಗಾರಿ ಪೂರ್ಣಗೊಂಡ ನಂತರ ಯಾವುದೇ ಕಾರಣಕ್ಕೂ ರಸ್ತೆ ಅಗೆಯುವುದಕ್ಕೆ ಅನುಮತಿಸಬಾರದು. ಒಂದು ವೇಳೆ ರಸ್ತೆ ದುರಸ್ತಿ, ಮರುಡಾಂಬರೀಕರಣ ಮಾಡಿದ ನಂತರ ರಸ್ತೆ ಅಗೆಯುವುದು ಕಂಡು ಬಂದರೆ ಸಂಬಂಧಪಟ್ಟ ಸಹಾಯಕ/ಕಿರಿಯ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಒಮ್ಮೆ ದುರಸ್ತಿ ಮಾಡಲಾದ ರಸ್ತೆಯಲ್ಲಿ ಮತ್ತೆ ರಸ್ತೆ ಅಗೆದು ಗುಂಡಿಗಳನ್ನು ಸೃಷ್ಟಿಸಿದರೆ ಆ ರಸ್ತೆಗಳ ದುರಸ್ತಿಗಾಗಿ ಬಿಬಿಎಂಪಿ ಅನುದಾನವನ್ನು ಬಳಸುವಂತಿಲ್ಲ. ಅಲ್ಲದೆ ಬೇಕಾಬಿಟ್ಟಿಯಾಗಿ ರಸ್ತೆ ಅಗೆಯುವುದನ್ನು ತಡೆಯಲು ವಿಫಲವಾದ ಕಾರಣಕ್ಕಾಗಿ ಸಂಬಂಧಪಟ್ಟ ಸಹಾಯಕ/ಕಿರಿಯ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಮುಖ್ಯ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು. ಅದರ ಜತೆಗೆ ಅಗೆದ ರಸ್ತೆ ಮುಚ್ಚಲು ತಗಲುವ ವೆಚ್ಚವನ್ನು ಸಂಬಂಧಪಟ್ಟ ಎಂಜಿನಿಯರ್‌ಗಳ ವೇತನದಲ್ಲಿ ಕಡಿತಗೊಳಿಸಲಾಗುವುದು ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.