'ನಮ್ಮ ಹೀರೋ’ಎಂದ ಈಶ್ವರಪ್ಪ, ‘ನಮ್ಮ ಸರ್ಕಾರ’ಎಂದ ನಾಗೇಂದ್ರ| ಇಬ್ಬರ ಮಾತುಗಳಲ್ಲೂ ಹಲವು ರಾಜಕೀಯ ಲೆಕ್ಕಾಚಾರದ ಗುಮಾನಿ| ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮತ್ತೆ ಬಿಜೆಪಿ ತೆಕ್ಕೆಗೆ ಬರಲಿದ್ದಾರೆಯೇ?|

ಬಳ್ಳಾರಿ(ಮಾ.01): ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಶಾಸಕ ನಾಗೇಂದ್ರ ಅವರ ಮಾತಿನ ದಾಟಿ ಸಾರ್ವಜನಿಕ ವಲಯದಲ್ಲಿ ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ಮಾತ್ರವಲ್ಲದೆ ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯ್ತಿಗಳಿಗೆ ಘನತ್ಯಾಜ್ಯ ಸಂಗ್ರಹಣಾ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರು ತಮ್ಮ ಭಾಷಣ ಮುನ್ನ ವೇದಿಕೆಯಲ್ಲಿದ್ದವರ ಹೆಸರು ಪ್ರಸ್ತಾಪಿಸುವ ವೇಳೆ ‘ನಮ್ಮ ಹೀರೋ ಇಲ್ಲೇ ಇದ್ದಾನೆ’ ಎಂದು ಶಾಸಕ ನಾಗೇಂದ್ರ ಕಡೆ ತಿರುಗಿ ಹೇಳಿದರು. ಈ ಮಾತಿಗೆ ಚಪ್ಪಾಳೆಗಳು ಬರುತ್ತಿದ್ದಂತೆಯೇ ಮಾತು ಮುಂದುವರಿಸಿದ ಈಶ್ವರಪ್ಪ, ‘ಗ್ರಾಮೀಣ ಶಾಸಕ ನಾಗೇಂದ್ರ ಈ ಹಿಂದೆ ನಮ್‌ ಜತೆ ಇದ್ರು. ಈಗ ಸ್ವಲ್ಪ ದೂರ ಇದ್ದಾರೆ. ಅವರು ಎಲ್ಲಿಗೆ ಹೋಗ್ತಾರೆ ನಾನೂ ನೋಡ್ತೀನಿ..’ ಎಂದರಲ್ಲದೆ, ‘ಈ ಮಾತಿಗೆ ಜೋರಾಗಿ ಚಪ್ಪಾಳೆ ಹಾಕ್ರಯ್ಯ’ ಎಂದು ಕಾರ್ಯಕ್ರಮ ವೀಕ್ಷಣೆಗೆ ಜಮಾಯಿಸಿದ್ದ ವೀಕ್ಷಕರಿಗೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗೇಂದ್ರ ಅವರು ‘ಈಶ್ವರಪ್ಪ ನಮ್‌ ಸಾಹೇಬ್ರು’ ಎಂದು ಹೇಳಿದರಲ್ಲದೆ, ಪದೇ ಪದೇ ‘ನಮ್ಮ ಸರ್ಕಾರ’ದ ಯೋಜನೆಗಳು ಅನುಷ್ಠಾನವಾಗಬೇಕು ಎಂದು ಸಮಾರಂಭದಲ್ಲಿ ಹೇಳುತ್ತಿದ್ದರು.

ಈ ಮಧ್ಯೆ ಈಶ್ವರಪ್ಪ ಅವರ ಬಳಿ, ಗ್ರಾಮೀಣ ಶಾಸಕ ನಾಗೇಂದ್ರ ಅವರನ್ನು ಪಕ್ಷಕ್ಕೆ ಆಹ್ವಾನಿಸಿದಿರಾ ಎಂದು ಕೇಳಿದ ಪ್ರಶ್ನೆಗೆ ‘ಸ್ನೇಹಕ್ಕೆ ಹಾಗೆ ಮಾತನಾಡಿದೆ. ಪಕ್ಷಕ್ಕೆ ಬರುವುದು ಬಿಡುವುದು ಅವರನ್ನೇ ಕೇಳಿ’ ಎಂದರು. ಆದರೆ ಈ ಹೇಳಿಕೆ ಕುರಿತು ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ಶಾಸಕ ನಾಗೇಂದ್ರ ನಿರಾಕರಿಸಿದರು.