*  ರೈಲು ಸಂಚಾರ ರದ್ದುಗೊಳ್ಳಲ್ಲ: ಸಂಸದ ದೇವೇಂದ್ರಪ್ಪ*  ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬಿಡುವುದಿಲ್ಲ*  ಸಂಚಾರ ಬಂದ್‌ಮಾಡದಿರಲು ನೈರುತ್ಯ ರೈಲ್ವೆ ಅಧಿಕಾರಿಗಳ ನಿರ್ಧಾರ   

ಕೊಟ್ಟೂರು(ಸೆ.15): ಪ್ರಯಾಣಿಕರು ಮತ್ತು ಆದಾಯದ ಕೊರತೆ ನೆಪವೊಡ್ಡಿ ಹೊಸಪೇಟೆ -ಕೊಟ್ಟೂರು-ದಾವಣಗೆರೆ ರೈಲ್ವೆ ಸಂಚಾರವನ್ನು ರದ್ದುಗೊಳಿಸದಂತೆ ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಸಹಾಯಕ ವ್ಯವಸ್ಥಾಪಕರಿಗೆ ತಾಕೀತು ಮಾಡಿರುವುದಾಗಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಈ ಹಿನ್ನೆಲೆಯಲ್ಲಿ ಸೆ. 15ರಿಂದ ಸಂಚಾರ ಬಂದ್‌ಮಾಡದಿರಲು ನೈರುತ್ಯ ರೈಲ್ವೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಸಂಸದರು ಭರವಸೆ ವ್ಯಕ್ತಪಡಿಸಿದ್ದಾರೆ. ‘ಕನ್ನಡಪ್ರಭ’ದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಪ್ರಯಾಣಿಕರ ಕೊರತೆ ಬಾಧಿಸದಂತೆ ಈಗಿರುವ ರೈಲ್ವೆ ವೇಳಾಪಟ್ಟಿಯ ಅವಧಿಯನ್ನು ಸೂಚಿಸುವಂತೆ ಸಹಾಯಕ ವ್ಯವಸ್ಥಾಪಕರು ತಮಗೆ ಸೂಚಿಸಿದ್ದು, ಈ ಕುರಿತು ಈ ಮಾರ್ಗದ ರೈಲು ಹೋರಾಟಗಾರರ ಸಂಘದ ಪದಾಧಿಕಾರಿಗಳು ಮತ್ತು ಪ್ರಯಾಣಿಕರ ಅಭಿಪ್ರಾಯ ಪಡೆದು ಸಮಯವನ್ನು ಬದಲಾಯಿಸುವಂತೆ ಸೂಚಿಸಲು ಉದ್ದೇಶಿಸಿದ್ದೇನೆ ಎಂದ ಅವರು, ಯಾವುದೇ ಕಾರಣಕ್ಕೂ ರೈಲು ಸಂಚಾರವನ್ನು ರದ್ದುಪಡಿಸುವಂತಿಲ್ಲ ಎಂದು ಡಿಜಿಎಂ ಅವರಿಗೆ ಸ್ಪಷ್ಪವಾಗಿ ಹೇಳಿರುವೆ ಎಂದರು.

ನರೇಗಾ ಅನುಷ್ಠಾನದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ: ಸಚಿವ ಈಶ್ವರಪ್ಪ

ಇದೀಗ ರೈಲು ಸಂಚಾರ ಮಾರ್ಗದ ಪ್ರಯಾಣಿಕರು ತಮ್ಮ ಅಭಿಪ್ರಾಯಗಳನ್ನು ತಮಗೆ ಸೂಚಿಸಿದ್ದಲ್ಲಿ ಪ್ರತಿಯೊಬ್ಬರಿಗೆ ಅನುಕೂಲವಾಗುವ ವೇಳಾಪಟ್ಟಿಯನ್ನು ತಯಾರಿಸುವಂತೆ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸುವೆ ಎಂದರು.

ರೈಲು ಸಂಚಾರ ರದ್ದುಗೊಳಿಸುವ ತೀರ್ಮಾನವನ್ನು ಅಧಿಕಾರಿಗಳು ಏಕ ಪಕ್ಷೀಯವಾಗಿ ತೆಗೆದುಕೊಳ್ಳಲು ಅವರ ಸ್ವಂತದ ಆಸ್ತಿಯಲ್ಲ ಎಂದು ಹೇಳಿದ ಸಂಸದರು, ಪ್ರತಿ ಹಂತದಲ್ಲೂ ಪ್ರಯಾಣಿಕರ ಸುರಕ್ಷತೆ, ಸಮಯಾವಕಾಶದ ಗ್ಯಾರಂಟಿಯನ್ನು ವಿಭಾಗೀಯ ರೈಲ್ವೆ ಅಧಿಕಾರಿಗಳು ನೀಡಬೇಕು. ಇದರ ಬದಲು ತಮ್ಮ ಅನುಕೂಲಕ್ಕೆ ರೈಲು ಸಂಚಾರ ಸ್ಥಗಿತಗೊಳಿಸುವ ತೀರ್ಮಾನ ಕೈಗೊಂಡರೆ ಸಂಸದನಾಗಿ ಸುಮ್ಮನಿರಲು ಆಗದು. ಈ ಕಾರಣಕ್ಕಾಗಿ ಸತತವಾಗಿ ವಿಭಾಗೀಯ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿರುವೆ. ಯಾವುದೇ ಕಾರಣಕ್ಕೂ ತಮ್ಮ ಗಮನಕ್ಕೆ ಇಲ್ಲದೆ ವೇಳಾಪಟ್ಟಿಯನ್ನು ಪ್ರಕಟಿಸದಂತೆ ಸೂಚಿಸಿರುವೆ ಎಂದು ಅವರು ಹೇಳಿದರು.