Asianet Suvarna News Asianet Suvarna News

Chitradurga; ಬಗರ್ ಹುಕ್ಕುಂ ಅರ್ಜಿ ಸಲ್ಲಿಕೆ ಅವಧಿ ಒಂದು ವರ್ಷ ವಿಸ್ತರಣೆ

ಬಗರ್ ಹುಕ್ಕುಂ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗುವುದು ಎಂದು  ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

Bagar Hukum application submission period has been extended says Minister R Ashok gow
Author
Bengaluru, First Published Aug 10, 2022, 5:58 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಆ.10): ಬಗರ್ ಹುಕ್ಕುಂ ಅಡಿ ಉಳುಮೆ ಮಾಡುತ್ತಿರುವವರು ಭೂಮಿಯ ಮಾಲೀಕತ್ವ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ. ರಾಜ್ಯದಲ್ಲಿ ಹಲವು ಜನರು ಅರ್ಜಿ ಸಲ್ಲಿಸುವುದು ಬಾಕಿಯಿದೆ. ಇದಕ್ಕೆ ಅವಕಾಶ ಮಾಡಿಕೊಡುವಂತೆ ಸಹೋದರ ‌ಹಾಗೂ ಸಚಿವ ಶ್ರೀರಾಮುಲು ಅವರು ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಬಗರ್ ಹುಕ್ಕುಂ ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡಲಾಗುವುದು. ಈ ಕುರಿತು ಬರುವ ಅಧಿವೇಶನದಲ್ಲಿ ಕಾಯ್ದೆ ಮಂಡನೆ ಮಾಡಲಾಗುವುದು. ಅರ್ಹ ಪ್ರತಿಯೊಬ್ಬರು ಅರ್ಜಿ ಸಲ್ಲಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ನೂತನ ತಾಲೂಕು ಆಡಳಿತ ಸೌಧ ಲೋಕಾರ್ಪಣೆ ಹಾಗೂ ರೂ.70 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಚಾಲನೆ ನೀಡಿ ಮಾತನಾಡಿದರು. ಉಳುವವನೇ ಭೂಮಿಯ ಒಡೆಯ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಜನರಿಗೆ ಭೂಮಿ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 3000 ಗ್ರಾಮಗಳು ಕಂದಾಯ ಇಲಾಖೆ ದಾಖಲೆಗಳಲ್ಲಿ ನಮೂದು ಆಗಿಲ್ಲ.‌ ಲಂಬಾಣಿ ತಾಂಡ, ಕುರಬರ ಹಟ್ಟಿ, ಗೊಲ್ಲರ ಹಟ್ಟಿ ಸೇರಿದಂತೆ ಇತರೆ ಹಾಡಿ ಹಾಗೂ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುವುದು.

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಯಾವುದೇ ಹಣ ಕಟ್ಟಿಸಿಕೊಳ್ಳದೆ ಉಚಿತವಾಗಿ ಜಾಗದ ಹಕ್ಕು ನೀಡಿ, ನೋಂದಣಿ ಮಾಡಿ ಕೊಡಲಾಗುವುದು. ಈಗಾಗಲೇ ರಾಜ್ಯದ 20000 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಸಿದ್ದವಾಗಿವೆ. ಬಹುಜನರ ಮನೆಯಲ್ಲಿ ಹಿರಿಯರು ಆಸ್ತಿ ಹಕ್ಕು ಲಭಿಸದೆ ಜಮೀನು, ಮನೆಗಳನ್ನು ಹಾಗೇ ಬಿಟ್ಟು ಸಾಯುವ ಪರಿಸ್ಥಿತಿ ಇತ್ತು‌. ಇಂದು ಕಾಲ ಬದಲಾಗಿದೆ. ಸರ್ಕಾರವೇ ಸ್ವತಃ ಭೂಮಿಯ ಸಂಪೂರ್ಣ ಹಕ್ಕನ್ನು ಜನರಿಗೆ ನೀಡುತ್ತಿದೆ. ಇದರಿಂದ ಭೂಮಿ ಮಾರುವ, ಸ್ವಾಧೀನದಲ್ಲಿ ಇರಿಸಿಕೊಳ್ಳುವ, ಮನೆ ನಿರ್ಮಿಸಿಕೊಳ್ಳಲು, ಹಂಚಿಕೆ ಮಾಡಲು ಅನುಕೂಲವಾಗಲಿದೆ.

ರಾಜ್ಯದಲ್ಲಿ 14 ಜಿಲ್ಲೆಯ 160 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಭಾರಿಯ ಮಳೆಗೆ 17,750 ಮನೆಗಳು ಬಿದ್ದಿವೆ. 1.37 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಹಿಂದೆ ನೀಡುತ್ತಿದ್ದ ನೆರೆ ಪರಿಹಾರ ಮೊತ್ತವನ್ನು ಸರ್ಕಾರ ಹೆಚ್ಚಿಸಿದೆ. ಕೃಷಿ ಬೆಳೆಗೆ ನೀಡುತ್ತಿದ್ದ ರೂ.6800 ಪರಿಹಾರ ಮೊತ್ತವನ್ನು ರೂ.13,800 ಕ್ಕೆ ಹೆಚ್ಚಿಸಲಾಗಿದೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೆ ನೀಡುತ್ತಿದ್ದ ರೂ.18,000 ಪರಿಹಾರ ಮೊತ್ತವನ್ನು 28,000 ಕ್ಕೆ ಹೆಚ್ಚಿಸಲಾಗಿದೆ. ಕಳೆದ ಬಾರಿ ಒಟ್ಟು ರೂ.2500 ಕೋಟಿ ಬೆಳೆ ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. 

ಚಿತ್ರದುರ್ಗ ಜಿಲ್ಲೆಯಲ್ಲಿ 2316 ಮನೆಗಳು ಮಳೆಯಿಂದ ಹಾನಿಗೆ ಒಳಗಾಗಿದ್ದು ಸುಮಾರು ರೂ.12 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ರೂ.1 ಲಕ್ಷ ಪರಿಹಾರ ಧನ ನೀಡಲಾಗಿದೆ. ಒಟ್ಟು ರೂ.6.50 ಕೋಟಿ ಹಣವನ್ನು ಜಿಲ್ಲೆ ಬಿಡುಗಡೆ ಮಾಡಲಾಗಿದೆ. ರೂ.145 ಕೋಟಿ ರೂಪಾಯಿಗಳ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 278 ಜನ ವಸತಿ ಪ್ರದೇಶಗಳನ್ನು ಕಂದಾಯ ದಾಖಲೆಗಳಲ್ಲಿ ತರಲಾಗುವುದು ಎಂದರು. 

50 ತಾಲೂಕುಗಳಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಆಯವ್ಯಯದಲ್ಲಿ ಹಣ ಮೀಸಲು
ಜನರಿಗೆ ಸರ್ಕಾರದ ಸವಲತ್ತುಗಳು ಹಾಗೂ ಯೋಜನೆಗಳು ಸಕಾಲದಲ್ಲಿ ಸಿಗಲಿ ಎಂಬ ಉದ್ದೇಶದಿಂದ ತಾಲೂಕು ಹಂತದಲ್ಲಿ ತಾಲೂಕು ಆಡಳಿತ ಸೌಧಗಳನ್ನು ನಿರ್ಮಾಣ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿ ಹಾಗೂ ನೌಕರರು ಜನರನ್ನು ಅಲೆದಾಡಿಸದೆ ತಮ್ಮ ಕೆಲಸ ನಿರ್ವಹಿಸಿ ಜನರ ಸೇವೆ ಮಾಡಬೇಕು. ಸರ್ಕಾರಿ ಕೆಲಸ ಶಾಶ್ವತ ಅಲ್ಲ. ಒಂದಲ್ಲಾ ಒಂದು ದಿನ ಸೇವೆಯಿಂದ ನಿವೃತ್ತಿ ಹೊಂದಬೇಕು. ನಿವೃತ್ತ ಸಂದರ್ಭದಲ್ಲಿ ಜನರು ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಾಗೆ ದೊಡ್ಡ ಮನಸ್ಸಿನಿಂದ ಸೇವೆ ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ 144 ತಾಲೂಕು ಆಡಳಿತ ಸೌಧಗಳಿವೆ. 64 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. 50 ತಾಲೂಕು ಕೇಂದ್ರಗಳಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಬರುವ ಸಾಲಿನ ಆಯವ್ಯಯದಲ್ಲಿ ಹಣ ಮೀಸಲು ಇಡಲಾಗುವುದು. ಪ್ರಸಕ್ತ ವರ್ಷದಲ್ಲಿ 20 ರಿಂದ 30 ತಾಲೂಕು ಆಡಳಿತ ಸೌಧಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರ ಬದಲಾವಣೆ ತರಲಾಗಿದೆ. ಪಿಂಚಣಿಗಾಗಿ ಅಲೆಯುವ ಸಂದರ್ಭವಿಲ್ಲ. ಹಲೋ ಕಂದಾಯ ಮಂತ್ರಿ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿದರೆ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಕಂದಾಯ ಸೇವೆ ದೊರೆಯಲಿದೆ. ರಾಜ್ಯದಲ್ಲಿ ಟೋಲ್ ಫ್ರೀ ಸಂಖ್ಯೆ ಕರೆ ಮಾಡಿದ 28000 ಜನರಿಗೆ ವಿವಿಧ ಪಿಂಚಣಿಗಳನ್ನು ಮಂಜೂರು ಮಾಡಿ ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ ಎಂದರು. 

ಗಡಿ ಭಾಗದಲ್ಲಿ ಇರುವ ಮೊಳಕಾಲ್ಮೂರು ತಾಲೂಕಿನ ಜನರ ಬಹುದಿನ ಬೇಡಿಕೆಯಾಗಿದ್ದ ತಾಲೂಕು ಆಡಳಿತ ಸೌಧ ನಿರ್ಮಾಣಗೊಂಡಿದೆ. 11 ಕೋಟಿ ವೆಚ್ಚದಲ್ಲಿ ಅರಮನೆಯಂತಹ ಆಡಳಿತ ಸೌಧ ನಿರ್ಮಿಸಲಾಗಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ಆಸಕ್ತಿ ಬಹು ಮುಖ್ಯ ಕಾರಣ ಎಂದು ಸಚಿವ ಆರ್.ಅಶೋಕ್ ಹೇಳಿದರು.

ತಾಲೂಕಿನ ಸಮಗ್ರ ಅಭಿವೃದ್ಧಿಗೆ ರೂ.2000 ಕೋಟಿ ಅನುದಾನ 
ಮೊಳಕಾಲ್ಮೂರು ತಾಲೂಕಿನ ಅಭಿವೃದ್ಧಿಗೆ ರೂ. 2000 ಕೋಟಿಗಳ ಅನುದಾನ ಒದಗಿಸಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಜನರ ಒಳಿತಿಗಾಗಿ. ಜನರನ್ನು ಸೇರಿಸಿ ಉತ್ಸವ ಮಾಡುವುದು ಸರ್ಕಾರದ ಕೆಲಸವಲ್ಲ. ಉತ್ತಮ ಆಡಳಿತವೇ ಸರ್ಕಾರದ ಜನೋತ್ಸವ ಕಾರ್ಯಕ್ರಮವಾಗಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು‌.

ಮೊಳಕಾಲ್ಮೂರು ಪಟ್ಟಣದಲ್ಲಿ ಬುಧವಾರ ನೂತನ ತಾಲೂಕು ಆಡಳಿತ ಸೌಧದ ಲೋಕಾರ್ಪಣೆ ಹಾಗೂ ರೂ.70 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೂ.11 ಕೋಟಿ ವೆಚ್ಚದಲ್ಲಿ ನೂತನ ತಾಲೂಕು ಆಡಳಿತ ಸೌಧ, ರೂ.1.30 ಕೋಟಿ ವೆಚ್ಚದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರೂ.35 ಲಕ್ಷ ವೆಚ್ಚದ ಪಶು ಸಂಗೋಪನೆ ಆಸ್ಪತ್ರೆ, ರೂ.1.36ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ, ಕೊತ್ತಲಗುಂದ ಕೆರೆಯಿಂದ ಮೊಳಕಾಲ್ಮೂರು ನಗರಕ್ಕೆ ಕುಡಿಯುವ ನೀರು ಸರಬರಾಜು, ಮೊಳಕಾಲ್ಮೂರು ನಗರದ ಮಾರುತಿ ನಗರದ ಓವರ್ ಹೆಡ್ ಟ್ಯಾಂಕರ್ ನಿರ್ಮಾಣ, ಶಾಸಕರ ಅನುದಾನದಲ್ಲಿ ಪತ್ರಕರ್ತರ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ.

ಬಗರ್‌ ಹುಕುಂ ಜಮೀನಿನವರಿಗೆ ಇನ್ನು ಮಾಲಿಕತ್ವ ಇಲ್ಲ: ಅಶೋಕ್‌

ಈ ಭಾಗದ ಕುಡಿಯುವ ನೀರು ಸಮಸ್ಯೆ ಕೊನೆಗಾಣಿಸುವ ರೂ‌.614 ಕೋಟಿ ವೆಚ್ಚದ ತುಂಗಭದ್ರಾ ಹಿನ್ನೀರಿನ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಜಲಜೀವನ್ ಮಿಷನ್ ಅಡಿ ರೂ. 52 ಕೋಟಿ ವೆಚ್ಚದಲ್ಲಿ 128 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರೂ.30 ಕೋಟಿ ವೆಚ್ಚದಲ್ಲಿ ಬೀದರ್ ಹಾಗೂ ಶ್ರೀರಂಗಪಟ್ಟಣ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

Follow Us:
Download App:
  • android
  • ios