Asianet Suvarna News Asianet Suvarna News

ಸಂಸತ್ತಿನ ಮೇಲೆ ದಾಳಿ : ಸಂಸದರ ಅಮಾನತ್ತಿಗೆ ಕಾಂಗ್ರೆಸ್ ಆಕ್ರೋಶ

  ಸಂಸತ್ತಿನ ಮೇಲೆ ನಡೆದ ದಾಳಿ ಕುರಿತು ಸಂಸದರ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿದ ಸಂಸದರನ್ನು ಅಮಾನತ್ತುಗೊಳಿಸಿರುವ ಬಿಜೆಪಿ ಪಕ್ಷದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Attack on Parliament: Congress outraged by the suspension of MPs snr
Author
First Published Dec 23, 2023, 8:17 AM IST

  ತುಮಕೂರು :  ಸಂಸತ್ತಿನ ಮೇಲೆ ನಡೆದ ದಾಳಿ ಕುರಿತು ಸಂಸದರ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿದ ಸಂಸದರನ್ನು ಅಮಾನತ್ತುಗೊಳಿಸಿರುವ ಬಿಜೆಪಿ ಪಕ್ಷದ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬಿ.ಎಚ್.ರಸ್ತೆ ಮೂಲಕ ಟೌನ್ ಹಾಲ್‌ವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಸಂಸತ್ತಿನ ಮೇಲೆ ನಡೆದ ದಾಳಿಯ ಕುರಿತು ವಿರೋಧ ಪಕ್ಷಗಳ ಪ್ರಶ್ನೆಗೆ ಪ್ರಧಾನಿ ಮತ್ತು ಗೃಹ ಸಚಿವರು ಉತ್ತರಿಸುವಂತೆ ಒತ್ತಾಯಿಸಿದ ವಿರೋಧ ಪಕ್ಷದ ಸುಮಾರು ೧೪೬ ಸಂಸದರನ್ನು ಒಂದು ಅಧಿವೇಶನ ಪೂರ್ಣ ಅಮಾನತ್ತು ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಇದೊಂದು ರೀತಿಯಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡುವ ಸರ್ವಾಧಿಕಾರಿ ಧೋರಣೆಯಾಗಿದ್ದು, ಇದರ ವಿರುದ್ಧ ರಾಷ್ಟ್ರದಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿದೆ ಎಂದರು.

ಸಂಸತ್ತು ಎಂಬುದು ಇಡೀ ರಾಷ್ಟ್ರದ ಆಸ್ತಿ. ಆದರೆ ಬಿಜೆಪಿ ಪಕ್ಷ ತನ್ನ ಸ್ವಯಾರ್ಜಿತ ಆಸ್ತಿ ಎಂಬಂತೆ ನಡೆದುಕೊಳ್ಳುತ್ತಿದೆ. ಇದರ ಹಿಂದೆ ಬಿಜೆಪಿ ಪಕ್ಷ ತನಗೆ ಬೇಕಾದ ಕಾಯ್ದೆಗಳನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಪಾಸು ಮಾಡುವ ಹಿಡನ್ ಅಜೆಂಡಾ ಅಡಗಿದೆ. ಇದರ ವಿರುದ್ಧ ದೇಶದ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಪ್ರತಿಭಟಿಸುವ ಅಗತ್ಯ ಇದೆ ಎಂದರು.

ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷೆ ಡಾ. ಫರ್ಜಾನ ಬೇಗಂ ಮಾತನಾಡಿ, ಸಂಸತ್ತು ಎಂಬುದು ಭಾರತೀಯರ ದೇವಾಲಯವಿದ್ದಂತೆ. ಅಂತಹ ಕೇಂದ್ರದ ಮೇಲೆ ದಾಳಿಯಾದಾಗ ಅದಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನ ಮಂತ್ರಿ ಉತ್ತರ ನೀಡಬೇಕೆಂಬ ಅಪೇಕ್ಷೆ ಇಡೀ ದೇಶದ ಜನರದ್ದಾಗಿದೆ. ಹಾಗಾಗಿ ಜನರ ಪ್ರತಿನಿಧಿಗಳಾದ ಸಂಸದರು ಉತ್ತರಿಸುವಂತೆ ಸದನದಲ್ಲಿ ಪ್ರಶ್ನಿಸಿದ್ದಾರೆ. ಅದನ್ನು ಹೊರತುಪಡಿಸಿ ಸಂಸದರ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ. ಆದರೂ ಇಡೀ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಅತಿ ಹೆಚ್ಚು ಸಂಸದರನ್ನು ಅಮಾನತ್ತುಗೊಳಸಿರುವುದು ಖಂಡನೀಯ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಮಾತನಾಡಿ, 146 ಸಂಸದರ ಅಮಾನತ್ತು ಕ್ರಮ ಸರ್ವಾಧಿಕಾರಿ ಧೋರಣೆಯಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಪ್ರಜಾಪ್ರಭುತ್ವವನ್ನು ತೆಗೆದು ರಾಜಪ್ರಭುತ್ವ ಸ್ಥಾಪಿಸುವ ಹುನ್ನಾರ ನಡೆಸಿದಂತಿದೆ. ಇಡೀ ದೇಶದ ಜನತೆ ಇದನ್ನು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಾರ್ಯರ್ತರು ಈ ವಿಚಾರವನ್ನು ಜನರ ನಡುವೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಬಿಜೆಪಿ ತರಲು ಹೊರಟಿರುವ ಜನವಿರೋಧಿ ಕಾಯ್ದೆಗಳಿಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ವಿರೋಧ ಪಕ್ಷದ ಎಲ್ಲಾ ಸಂಸದರನ್ನು ಅಮಾನತ್ತು ಮಾಡಿ, ವಾಮಮಾರ್ಗ ಹಿಡಿದಿದೆ. ಇದು ಕೇವಲ ಸಂಸದರಿಗಲ್ಲ. ಇಡೀ ದೇಶದ ಜನತೆಗೆ ಮಾಡಿದ ಅಪಮಾನ. ಹಾಗಾಗಿ ಕಾಂಗ್ರೆಸ್ ಪಕ್ಷದೊಂದಿಗೆ ವಿರೋಧ ಪಕ್ಷಗಳು ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ಪಕ್ಷಗಳು ಖಂಡಿಸಬೇಕಿದೆ. ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಇಂಡಿಯಾ ಮೈತ್ರಿಕೂಟವನ್ನು ಅಧಿಕಾರಕ್ಕೆ ತರುವ ಮೂಲಕ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯುಂತೆ ಕರೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್. ರಾಮಕೃಷ್ಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್, ಲೋಕೇಶ್, ಮುಖಂಡರಾದ ನಯಾಜ್ ಅಹಮದ್, ನಿಂಗರಾಜು ಬಿ.ಜಿ., ವಾಲೆಚಂದ್ರಯ್ಯ, ಪುಟ್ಟರಾಜು, ಸುಜಾತ, ನಾಗಮಣಿ, ಭಾಗ್ಯ, ಸವಿತಾ, ಗೀತಾ, ಜ್ವಾಲಾಮಾಲಾ ರಾಜಣ್ಣ, ಕೆಂಪಣ್ಣ, ಶೆಟ್ಟಾಳಯ್ಯ, ಮೆಹಬೂಬ್ ಪಾಷ, ಶಿವಾಜಿ, ನರಸಿಂಹಯ್ಯ, ಕುಂಚ್ಚಂಗಿ ರಮೇಶ್, ಕೆಂಪರಾಜು, ಎಚ್.ಸಿ. ಹನುಮಂತಯ್ಯ, ರೇವಣ್ಣಸಿದ್ದಯ್ಯ, ನ್ಯಾತೇಗೌಡ, ರಾಘವೇಂದ್ರಸ್ವಾಮಿ, ಸಿ. ಭಾನುಪ್ರಕಾಶ್, ನಯಾಜ್ ಅಹಮದ್, ಅಸ್ಲಾಂ ಪಾಷ, ಇನಾಯತ್, ನಟರಾಜು, ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios